ಮುಚ್ಚುತ್ತಿರುವ ಶಾಲೆಗಳೇ ??
ಮಣ್ಣು ಮೆತ್ತಿದ ಚಪ್ಪಲಿಲ್ಲದ
ನಸುಗೆಂಪು ಕಾಲುಗಳು
ಕೇಳುತಿದೆ ಶಾಲೆಯ ಗಂಟೆ
ಕೇಕೆ ಹಾಕುತ್ತ ತುಂಬಿದ ಮೈದಾನ
ಧ್ವಜ ಸ್ತಂಭದ ಮುಂದೆ ಪ್ರಾರ್ಥನೆ
ಹಾರುತ್ತಿದ್ದ ಬಾವುಟ ..ಹೂಮಳೆ..
ನೆತ್ತಿ ಮೇಲೆ ಬಿರುಬಿಸಿಲು...
ಧ್ಯಾನವೆಲ್ಲಾ ಮರದಿ ಕೂತ
ಓತಿಕೇತದ ಮೇಲೆ !
ಹರಿದ ಚಡ್ಡಿ ಬಣ್ಣದರಿವೆಯ ತೇಪೆ
ಕಾಲೆಳೆಯುವ ಕಬಡ್ಡಿ !
ನಾಗರ ಬೆತ್ತದ ಶ್ರೀನಿವಾಸ ಮೇಷ್ಟ್ರು
ಡೆಸ್ಕು ಒಳಗೆ ದೇವರ ಪೂಜೆ
ಬೆಂಚು ಸುಟ್ಟ ಊದುಬತ್ತಿ...!
ಪ್ರಸಾದ ತಿಂದ ಹಿಂದಿ ಪಂಡಿತರು !
ನಾವೇ ನೆಟ್ಟ ತೆಂಗಿನ ಗಿಡ
ರಾಟೆಯಲ್ಲಿ ಇಳಿದ ಬಾವಿಯ ನೀರು !
ಎಲ್ಲದಕ್ಕೂ ಸಾಲು ಸಾಲು
ಸಂಜೆಯ ಆಟ...ಓಡುವುದೇ ಪರಿಪಾಠ!
ಸರಿದ ದಿನಗಳು...ಬದಲಾದ ಸರಕಾರಿನಿಯಮಗಳು
ಮುಚ್ಚುತ್ತಿವೆ ಶಾಲೆಗಳು....ಮಾಸುತ್ತಿದೆ ಸ್ಥಾವರ
ಪಾಚಿ ಗಟ್ಟಿದ ಗೋಡೆ !
ಜಂಗಮನ ಜ್ಞಾನ ದೇಗುಲ ...ಮತ್ತೊಮ್ಮೆ ಘಂಟೆ
ಒಳಗೊಳಗೆ ಬಡಿದು ಪೂಜೆ ಗೈದಿದೆ !
-ಅಕುವ
No comments:
Post a Comment