Tuesday, September 16, 2014

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು:ಅಶೋಕ್ ಕುಮಾರ್ ವಳದೂರು

http://www.panjumagazine.com/?p=8552

"ಒಂದೇ ಜಾತಿ, ಒಂದೇ ಧರ್ಮ,ಒಬ್ಬನೇ ದೇವರು" ಎಂದು ಮನುಕುಲ ಕುಟುಂಬಕ್ಕೆ ಸಾರಿ ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದ ಮಹಾನ್ ಸಂತ ಶ್ರೀ ನಾರಾಯಣ ಸ್ವಾಮಿ. "ಯಾರನ್ನೂ ದ್ವೇಷಿಸ ಬೇಡಿ, ಸಂಘಟನೆಯಿಂದ, ಶಿಕ್ಷಣದಿಂದ, ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉನ್ನತಿಯನ್ನು ಸಾಧಿಸೋಣ" ಎಂದು ಒಂದು ಶತಮಾನಗಳ ಹಿಂದೆ ಈ ಜನಕ್ಕೆ ಸಾರಿದ ಗುರು ನಾರಾಯಣರ ಸಂದೇಶವು ವಾಸ್ತವದ ಅರ್ಥವನ್ನು ಪಡೆಯುವುದು ನಾವು ಕಾಣುತ್ತೇವೆ.
ಹದಿನೆಂಟು ಹತ್ತೊಂಭತ್ತನೆಯ ಶತಮಾನಗಳು ಈ ನಾಡಿನಲ್ಲಿ ಐರೋಪ್ಯರು ವಸಾಹತುಗಳನ್ನು ಸ್ಥಾಪಿಸಿ ಭಾರತದ ರಾಜಕೀಯ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಭಾರತೀಯರನ್ನು ಗುಲಾಮರನ್ನಾಗಿಸಿದ ಕರಾಳ ಇತಿಹಾಸವಾಗಿತ್ತು. ಇದು ರಾಜಕೀಯರಂಗದ ಗೋಳಾದರೆ ಸಾಮಾಜಿಕ ಕ್ಷೇತ್ರದ್ದು ಇನ್ನು ನೋವಿನ ಕತೆಯಾಗಿತ್ತು. ಆ ಕಾಲದಲ್ಲಿ ಜಾತಿಯಲ್ಲಿ ಹಿಂದುಳಿದ ವರ್ಗದವರ ಶೋಷಣೆಯೇ ನಡೆದಿತ್ತು. ಕೇರಳದ ಬಹುಸಂಖ್ಯಾತ ಈಳವ (ಬಿಲ್ಲವ) ಜನಾಂಗದವರು ಕೂಡಾ ಅಸ್ಪೃಶ್ಯ ವರ್ಗಕ್ಕೆ ಸೇರಿದ್ದರು. ದೇವಾಲಯದಲ್ಲಿ ಪ್ರವೇಶವಿರಲಿಲ್ಲ. ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿಲ್ಲ, ಮಹಿಳೆಯರು ಕುಪ್ಪಸ್ಸ ತೊಡುವಂತಿರಲಿಲ್ಲ, ಆಭರಣ ಧರಿಸುವಂತೆಯೇ ಇರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಅವಿದ್ಯೆಯಿಂದಾಗಿ ಸಾಮಾಜಿಕವಾಗಿ ಕ್ರೂರ ಶೋಷಣೆಗೆ ಒಳಗಾದ ಈ ಈಳವರಿಗೆ ತಮ್ಮ ದುಃಸ್ಥಿತಿಯ ಅರಿವೂ ಕೂಡಾ ಇರಲಿಲ್ಲ. ಈ ಮೌಢ್ಯತೆಯನ್ನು ಕಂಡ ಸ್ವಾಮಿ ವಿವೇಕಾನಂದರೇ "ಕೇರಳವೊಂದು ಹುಚ್ಚರ ಆಸ್ಪತ್ರೆ " ಎಂಬ ಉದ್ಗಾರ ತೆಗೆದಿದ್ದರು.
೧೮೫೪ನೇ ಯ ಇಸವಿಯ ಕೇರಳದಲ್ಲಿ ಒಣಂ ಹಬ್ಬದ ಮೂರನೆಯ ದಿನ ಹುಣ್ಣಿಮೆಯ ಶುಭ ಸಂದರ್ಭದಂದು ಮಾದನ್ ಆಶಾನ್ ಮತ್ತು ಕುಟ್ಟಿ ದಂಪತಿಯ ಕೊನೆಯ ಪುತ್ರನಾಗಿ ವಿಶ್ವ ಮಾನವತೆಯ ಹರಿಕಾರನೆಂದು ಎಲ್ಲೆಡೆ ಪರಿಗಣಿಸಲ್ಪಟ್ಟ , ದೀನ ದಲಿತರಿಗೆ, ಅಸ್ಪ್ರಶ್ಯರಿಗೆ ಬದುಕಿನ ಹೊಸ ಭರವಸೆಯನ್ನು ಒದಗಿಸಿ ಕೊಟ್ಟು ಶ್ರೀ ನಾರಾಯಣ ಗುರು ಮಹಾನ್ ಸಂತನ ಜನನವಾಯಿತು . ಶ್ರೀ ಗುರುಗಳ ಬಾಲ್ಯದ ಹೆಸರು " ನಾಣು" ಎಂದು.  ಅವರು ತನ್ನ ಅತೀ ಕಿರಿಯ ವಯಸ್ಸಿನಲ್ಲಿಯೇ ಚಟುವಟಿಕೆಯಿಂದ ಕೂಡಿದ್ದು ಸದಾ ಚಿಂತೆಯಲ್ಲಿಯೇ ಮಗ್ನನಾಗಿ ವೈಚಾರಿಕತೆಯ ಆತನಲ್ಲಿ ಮೈಗೂಡಿತ್ತು. ಮನುಕುಲದ ಸಂತಸವೇ ದೇವರಿಗೆ ಪೂಜೆ ಎಂದು ಬಾಲ್ಯದಲ್ಲಿಯೇ ದೇವರಿಗೆ ಇರಿಸಿದ್ದ ಹಣ್ಣು ಹಂಪಲುಗಳನ್ನು ತಿಂದು ತೇಗಿ "ಮನುಷ್ಯನ ಹೊಟ್ಟೆ ತುಂಬಿ ತೃಪ್ತಿಯಾದರೆ ದೇವರು ಸಿಟ್ಟಾಗುತ್ತಾನೇನು? ಅವನಿಗೆ ಅದರಿಂದ ಸಂತೋಷವಾಗುತ್ತದೆ" ಎಂದು ಪಟ ಪಟ ಅನ್ನುತ್ತಿದ್ದನಂತೆ.  ಮೇಲು ಜಾತಿಯವರನ್ನು ಬೇಕೆಂದೇ ಮುಟ್ಟಿ ಬಿಡುತ್ತಿದ್ದ . "ಈಗ ನಿಮ್ಮ ಜಾತಿ ಹೋಗಿ ಬಿಡ್ತಾ ಎಲ್ಲಿ ಕಾಣಿಸೋದಿಲ್ಲ " ಎಂದು ಕೈ ತಟ್ಟಿ ನಗುತ್ತಿದ್ದ. ನಾಣುವಿಗೆ ಚಿಕ್ಕಂದಿನಿಂದಲೇ ಬಡವರು ನೊಂದವರು ಅಂದರೆ ಆತ್ಮೀಯತೆ ಭೌತಿಕ ಸುಖಗಳ ಕಡೆಗೆ ನಿರಾಸಕ್ತಿ.
ಕ್ರಿ.ಶ ೧೮೮೮ ರ ಶಿವರಾತ್ರಿಯ ದಿನದಂದು ಅರವಿ ಪುರಂನಲ್ಲಿ ಮೊತ್ತ ಮೊದಲು ಶಿವಾಲಯವನ್ನು ಸ್ಥಾಪಿಸುವ ಮೂಲಕ ಸ್ಥಾಪಿತ ಹಿತಾಸಕ್ತಿಗಳ ಶೋಷಣೆಯ ವ್ಯವಸ್ಥೆಯ ವಿರುದ್ಧವಾಗಿ ಬಿದ್ದ ಮೊದಲ ಏಟು ನೀಡಿದರು. ಬಾಲ್ಯದಲ್ಲಿ ಶಿಕ್ಷಣ ಕಲಿತು ಸಂಸ್ಕೃತದ ಜ್ಞಾನ ಪಡೆದಿದ್ದರು. ಸಂಸ್ಕೃತ ಶ್ಲೋಕವನ್ನು ಸರಾಗವಾಗಿ ಮರದ ಮೇಲೆ ಕುಳಿತು ಹಾಡುತ್ತಿದ್ದರು. ಇದರಿಂದ ಈತನನ್ನು ಭಕ್ತನೆಂದೇ ಜನರು ಗುರುತಿಸಿದ್ದರು. ಈ ರೀತಿ ಈತನು ಯೋಗಿಯಾಗಿ ಕಾಡು ಮೇಡು ಅಲೆದಾಡುವುದನ್ನು ಕಂಡು ಮನೆಯವರಿಗೆ ವಿಚಿತ್ರವೆನಿಸಿತು. ನಾಣುವಿಗೆ ಮದುವೆ  ಮಾಡಿ ಸಂಸಾರದ ಬಂಧನದಲ್ಲಿರಿಸುವ ಮನೆಯವರ ಪ್ರಯತ್ನ ವ್ಯರ್ಥವಾಯಿತು. ನಾವೆಲ್ಲ ಬೇರೆ ಬೇರೆ ಉದ್ದೇಶಕ್ಕೆ ಹುಟ್ಟಿದ್ದೇವೆ. ನಿಮ್ಮ ದಾರಿ ಬೇರೆ ನನ್ನ ದಾರಿ ಇನ್ನೊಂದು ನಿಮ್ಮ ದಾರಿಯಲ್ಲಿ ಮುನ್ನಡೆಯುವುದರಿಂದ ನಿಮಗೆ ಹಿತವಾಗ ಬಹುದು. ನನ್ನ ದಾರಿಯಲ್ಲಿ ಹೋಗಲು ನನ್ನನ್ನು ದಯಮಾಡಿ ಬಿಟ್ಟು ಬಿಡಿ ಎಂದು ಮನೆಯನ್ನು ಬಿಟ್ಟು ಹೊರನಡೆದಿದ್ದ. ಬ್ರಹ್ಮ ಸತ್ಯದ ಶೋಧಕನಾಗಿ ಸುತ್ತಾಡಿದರು. ಕಾಡಿನಲ್ಲಿ ಗುಹೆಗಳಲ್ಲಿ ನಿರಾತಂಕವಾಗಿ ಜೀವಿಸಿ ಮರುತ್ವ ಮಾಲದಲ್ಲಿ ಧಾನ್ಯ ಮಗ್ನರಾಗಿರುತ್ತಿದ್ದಾಗ ಅವರ ಅಕ್ಕಪಕ್ಕದಲ್ಲಿ ಎರಡು ಚಿರತೆಗಳು ಅಂಗರಕ್ಷಕರಂತೆ ನಿಂತಿದ್ದವು. ಅರವಿಪುರಂನಲ್ಲಿ ದೇವಾಲಯವನ್ನು ಸ್ಥಾಪಿಸಿ ದಲಿತ ಜನಾಂಗಕ್ಕೆ ದೇವಾಲಯವನ್ನು ಪ್ರವೇಶಿಸಿ ಪೂಜೆಗೈಯುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ್ದರು.ಕ್ರಿ.ಶ ೧೯೧೨ ರಲ್ಲಿ ಮಂಗಳೂರಿನಲ್ಲಿ ಒಂದು ದೇವಾಲಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಮತ್ತು  ಶ್ರೀಲಂಕಾದಲ್ಲಿ  ಒಟ್ಟು ೭೯ ದೇವಾಲಯಗಳ ಸ್ಥಾಪನೆಗೆ ಗುರುಗಳು ಕಾರಣರಾದರು.
ಗುರುಗಳು ಸದಾ ಚಲಿಸುತ್ತಾ ಸಮಾಜದ ಎಲ್ಲೆ ಎಲ್ಲೆಯನ್ನೂ , ಕಂದಾಚಾರ , ಮೂಢನಂಬಿಕೆಗಳನ್ನು , ಅವಿಚಾರಗಳನ್ನು ನಿಂತ ಗಳಿಗೆಯಿಂದಲೇ ಟೀಕಿಸಿ ಸರಿಪಡಿಸುತ್ತಿದ್ದರು. ಹಸಿದವರು, ಬಳಲಿದವರು, ದೀನದಲಿತರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ ತುಂಬಿಕೊಂಡಿತ್ತು. ಅವರ ಬೋಧನೆಗಳಲ್ಲಿ ದೇವರು ಒಬ್ಬನೇ ನಮ್ಮ ಆತ್ಮದ ಒಳದನಿಯನ್ನು ನಾವು ಆಲಿಸಬೇಕು. ಇನ್ನೊಬ್ಬರಿಗೆ ಕೆಡುಕಾಗುವ ಅಲ್ಪ ಕಾರ್ಯಕ್ಕೆ ಕೈಹಾಕಬಾರದು. ಹೃದಯಾಂತರಾಳದಿಂದ ದೇವರನ್ನು ಪೊಜಿಸಬೇಕು. ಪರಿಪಕ್ವವಾದ ಮನಸ್ಸು ಬೇಕು. ಔದಾರ್ಯ ಪ್ರೇಮ ಅನುಕಂಪ ಇವು ಜೀವನ ಮೌಲ್ಯಗಳು. ಪ್ರೇಮದ ಸೆಲೆ ಬತ್ತಿದವನು ಕೇವಲ ಯಂತ್ರ ಮಾತ್ರ, ಅವನು ಬದುಕಿದ್ದಾನೆ. ಎನ್ನುವ ಹಾಗಿಲ್ಲ ಎಂಬ ಸಂದೇಶಗಳು ಇಂದಿಗೂ ಹೃದಯದ ಕದಗಳನ್ನು ತಟ್ಟುತ್ತಿರುತ್ತವೆ. ಈ ಜಗತ್ತಿನಲ್ಲಿ ಇರುವುದು ಒಂದೇ ಜಾತಿ ಅದು ಮಾನವ ಜಾತಿ ಎಲ್ಲರ ಎದೆಯಲ್ಲೂ ಬೆಳಗುವ ಜ್ಯೋತಿಯೊಂದಿಗೆ ಅದು ಎಲ್ಲವನ್ನೂ ಗಮನಿಸುತ್ತದೆ. ಅಲ್ಲದಕ್ಕೂ ಸಾಕ್ಷಿಯಾಗಿದೆ ಎಂಬ ಸಂದೇಶವನ್ನು ತನ್ನ ಜೀವನದುದ್ದಕ್ಕೂ ಸಾರಿ ಜನರಲ್ಲಿ ದೀನದಲಿತರಲ್ಲಿ ಬೆಳಕು ಮೂಡಿಸಿದವರು ಶ್ರೀ ನಾರಾಯಣ ಗುರುಗಳು. ಈ ಮಹಾ ಸಂತನ ಭೋಧನೆ ಮಹಾಸಾಗರದಂತೆ ನಾವಿಲ್ಲಿ ಕಾಣುವುದೂ ಕೇವಲ ಹನಿಗಳನ್ನೂ ಮಾತ್ರ. ಅವುಗಳನ್ನು ಅರ್ಥೈಸಿ ಅನುಸ್ಥಾಪಿಸಲು ಪ್ರಯತ್ನಿಸಿದರೆ ಸಾಕು ನಮ್ಮ ಉದ್ಧಾರ ತನ್ನಿಂದ ತಾನೇ ಆಗುತ್ತದೆ. ವ್ಯಕ್ತಿಯ ಉದ್ಧಾರದಿಂದ ಸಮಾಜದ ಉದ್ಧಾರ ಅದರಿಂದ ವಿಶ್ವ ಮಾನವ ಪ್ರಜ್ಞೆ  ಮೂಡುತ್ತದೆ.
"ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷನನ್ನು ನಾನು ಎಲ್ಲೂ ಕಂಡಿಲ್ಲ" ಎಂದು ವಿಶ್ವಕವಿ ರವಿಂದ್ರನಾಥ ಠಾಗೂರರು ಉದ್ಗರಿಸಿದ್ದರು. ಗಾಂಧೀಜಿಯವರು ತಮ್ಮ ಹರಿಜನೋದ್ಧಾರಕ್ಕಾಗಿ ಸ್ಫೂರ್ತಿ ಪಡೆದದ್ದು ನಾರಾಯಣ ಗುರುಗಳಿಂದ. "ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಗಾಂಧೀಜಿಯವರ ಸಾಮಾಜಿಕ ಚಟುವಟಿಕೆಗಳಿಗೂ ಬಹಳಷ್ಟು ಹೋಲಿಕೆ ಇರುವುದನ್ನು ನಾವು ಕಾಣಬಹುದು" ಎಂದು ರೋಮನ್ ರಾಲೆಂಡ್ ಉದ್ಗರಿಸಿದ್ದಾರೆ.
೧೯೨೮ ರ  ಫೆಬ್ರುವರಿಯಲ್ಲಿ ಗುರುಗಳು ತೀವ್ರ ಕಾಯಿಲೆಗೆ ತುತ್ತಾಗಿದ್ದರು. ಯಾವ ರೀತಿಯ ಚಿಕಿತ್ಸೆ ಫಲಕಾರಿಯಾಗಲಿಲ್ಲ.  ೧೯೨೮ ರ ಸೆಪ್ಟೆಂಬರ್ ೨೦ ರಂದು ಸಂಜೆ ನಾಲ್ಕರ ಹೊತ್ತಿಗೆ ಮಹಾಸಮಾಧಿಯನ್ನು ಹೊಂದಿದರು. ಆಗ ಅವರಿಗೆ ೭೨ ವರ್ಷ. ಸಮಾಧಿಯ ಮುಂಚೆ  "ಯೋಗ ವಿಶಿಷ್ಟಂ" ಗ್ರಂಥದ ಶ್ಲೋಕವನ್ನು ಕೇಳುತಿದ್ದು , ಗ್ರಂಥದ  ಮೋಕ್ಷ ಪ್ರಾಪ್ತಿ ಅಧ್ಯಾಯವನ್ನು ತಲುಪುತ್ತಿದ್ದಂತೆ ಗುರುಗಳು ಮೋಕ್ಷವನ್ನು ಹೊಂದಿದ್ದರು. ಅವರ ನಿಧನ ದ ಬಗ್ಗೆ ಕೇರಳದ  ಪತ್ರಿಕೆಯೊಂದು  "ಮುಂದಿನ ತಲೆಮಾರಿನವರು ನಾರಾಯಣ ಗುರುಗಳನ್ನು ದೇವರ ಅವತಾರ ಎಂದು  ಪೂಜಿಸುವರು " ಎಂದು ಬರೆಯಿತು.
ಇಂತಹ ಮಹಾನ್ ಚೇತನವೊಂದನ್ನು ಗುರುವಾಗಿ ಪೂಜಿಸುವುದು ನಮ್ಮೆಲ್ಲರ ಭಾಗ್ಯ. ಅವರು ಕೇವಲ ಈಳವ ಅಥವಾ ಬಿಲ್ಲವ ಜನಾಂಗಕ್ಕೆ ಸೀಮಿತವಾದರೆ ಅವರ ತತ್ವಗಳಿಗೆ ಅನ್ಯಾಯವಾಗುತ್ತದೆ. ಇನ್ನೂ ಮುಖ್ಯವಾಗಿ ಗುರುವನ್ನು ಕೇವಲ ಮೂರ್ತಿ ಮಾಡಿ ಕೇವಲ ಕಲ್ಲಿಗೆ ಪೂಜೆ ಸಲ್ಲದಿರಲಿ, ಅವರ ಸಂದೇಶಗಳನ್ನು ಮೈಗೂಡಿಸಿ ನಮ್ಮಲ್ಲಿ ಅಳವಡಿಸೋಣ. ಸಾಧ್ಯವಾದಷ್ಟು ಅವರು ಹೇಳಿಕೊಟ್ಟ ಶಾಂತಿ ಪಥದಲ್ಲಿ ನಡೆಯೋಣ. ಆ ದಾರಿಯಲ್ಲಿ  ನಡೆದು ಕೃತಾರ್ಥರಾಗಲು ಪ್ರಯತ್ನಿಸೋಣ. ನಾರಾಯಣ ಗುರುಗಳು ಕೇವಲ ಒಂದು  ಜನಾಂಗದ ಗುರುವಲ್ಲ, ಮಾನವ ಜನಾಂಗದ ಗುರು ,ವಿಶ್ವ ಮಾನವ ಗುರು , ಸಾಮಾಜಿಕ ಕ್ರಾಂತಿಯ ಹರಿಕಾರ. 
 !! ಓಂ ಶ್ರೀ ಬ್ರಹ್ಮ ನಾರಾಯಣ ಗುರುವೇ ನಮ: !!

Sunday, July 6, 2014

ಕನ್ನಡ ವೈಭವ

ಕನ್ನಡ ವೈಭವ

ಪುರಾತನ ಶಾಸನಗಳ ಮಳಿಗೆಯಲ್ಲಿ
ವಿನೂತನ ಪರಂಪರೆಯ ನೆಲೆಯಲ್ಲಿ
ಟಿಸಿಲೊಡೆದ ತ್ರಿಪದಿ ಸಾಲುಗಳಲ್ಲಿ
ಕನ್ನಡದ ಅಕ್ಷರಗಳ ಉದಯ
ಹೀಗೆನ್ನ ಕಸ್ತೂರಿ ಕನ್ನಡವು ಉದಯಿಸಿತಣ್ಣ !

ಕವಿರಾಜಮಾರ್ಗದ ಅಲಂಕಾರದಲಿ
ಶಬ್ದಮಣಿಯ ಮಾಣಿಕ್ಯ ಪೋಣಿಸುತ
ವಡ್ಡರಾಧನೆಯ ಗದ್ಯ ರೂಪದಲ್ಲಿ
ರಾಷ್ಟ್ರಕೂಟ ಕದಂಬರ ಬಾದಾಮಿ ಚಾಲುಕ್ಯ
ಹೊಯ್ಸಳರು ಕೊಂಡಾಡಿ ಅಂಬೆಗಾಲಿಕಿತ್ತೆನ್ನ ಕನ್ನಡ !

ಉತ್ತುಂಗಕ್ಕೇರಿದ ಚಂಪೂ ಕಾವ್ಯವನು
ಪಂಪ ಪೊನ್ನ ರನ್ನ ದಿಗ್ಗಜರು ಪಸರಿದರು
ಕುಮಾರವ್ಯಾಸನು ಹಾಡಿದ ಗುದುಗಿನ ಭಾರತ
ಕರ್ಣಾಟಕ ದೇಶಕ್ಕೆ ಸೊಬಗು !

ಭಾಮಿನಿ ಷಟ್ಪದಿಯ ಕಾವ್ಯದ ಇಂಪು
ರಾಘವಾಂಕ ವರ್ಣಿಸಿದ ಹರಿಶ್ಚಂದ್ರನ ನೆಂಪು
ರಗಳೆಯಲ್ಲೇ ನಿರರ್ಗಳ ಕಥೆ ಹೇಳಿದ ಹರಿಹರ
ಲಕ್ಷೀಶನ ಜೈಮಿನಿ ಭಾರತ ವೈಭವ
ಇವೆಲ್ಲಾ ಕೇಳಿದರೆ ಕನ್ನಡದ ಕಿವಿ ಕಂಪು .!

ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ
ಜೀವನವೇ ಕಥೆಯಾಗಿ ಸಾರಿದ ಸರ್ವಜ್ನ
ಬಾಯಿ ಮಾತು ಹಾಡಾದ ವಚನ ವೈಶಿಷ್ಟ್ಯ
ಹಾಡುಗಬ್ಬದ ಬಸವಯುಗ ಶರಣರಿಗಿದೇ ಸೊಗಸು
ಕನ್ನಡಕ್ಕೆ ಆಗ ಇದೆಲ್ಲಾ ಹೊಸತು !

ತಂಬೂರಿ ಕೀರ್ತನೆ ದಾಸರ ಆಚರಣೆ
ಭಕ್ತಿಯ ಮಾರ್ಗ ಇಷ್ಟವೂ ಅವರಿಗೆ
ಉಪನಿಷತ್ತುಗಳೇ ಸೊತ್ತಾಗಿ ಒಟ್ಟಾದ ಸಾಹಿತ್ಯ
ಕನಕನ ರಾಮಧಾನ್ಯ , ಹರಿಭಕ್ತಿ, ಮೋಹನ ತರಂಗಿಣಿ
ನಾಡಿನುದ್ದಕ್ಕೂ ವಿಸ್ತರಿಸಿದುದು ಹೀಗೆ !

ಕುಮಾರವಾಲ್ಮೀಕಿ ರತ್ನಾಕರವರ್ಣಿ ವೈಭವಿವಿಲ್ಲಿ
ಮುದ್ದಣ್ಣ ಮನೋರಮ ಸಾಹಿತ್ಯ ಸಲ್ಲಾಪದಲ್ಲಿ
ಮುಂಗೋಳಿ ಕೂಗಿ ಅದ್ಭುತ ರಾಮಾಯಣ ಹಾಡಿ
ಯಕ್ಷಗಾನ ಸಾಹಿತ್ಯಕ್ಕೆ ನಂದಾದೀಪವಾಗಿ
ಜಾನಪದದೊಳು ಕನ್ನಡ ಬೆಳೆಯಿತೆನ್ನಿ !

ಇಂಗ್ಲೀಷ್ ಗೀತೆಗಳ ಶ್ರೀಯವರು ತಂದರು
ಕಗ್ಗವ ಹಿಡಿದುಕೊಂಡು ಡಿ.ವಿ.ಜಿ ಬಂದರು
ರಾಮಾಯಣದ ನಿಜ ಆನಂದದಲ್ಲಿ ಕುವೆಂಪು ಮಿಂದರು!
ಗರಿ ಬಿಟ್ಟ ಹಾರುಹಕ್ಕಿಯ ಬೇಂದ್ರೆ ನೋಡಿ ಕುಣಿದರು
ಹೀಗೆನ್ನ ಕನ್ನಡದಲಿ ಸಂಭ್ರಮದಿ ನಲಿದರು !

ಚಿಕ್ಕಚಿಕ್ಕ ಕಥೆಗಳ ಹೊಸೆದರು ಶ್ರೀನಿವಾಸ
ಪುರಾಣ ಇತಿಹಾಸಗಳ ಸರಿಬರೆದರು ದೇವುಡು
ಕಟ್ಟುವೆವು ನಾಡೊಂಡ ಸಾರಿದರು ಅಡಿಗ
ಒಟ್ಟೊಟ್ಟಿಗೆ ಬೆಳೆದರು ತರಾಸು ಗೊರೂರು
ಹಿರಿದಾಯಿತನ್ನ ಕನ್ನಡದ ಜಗತ್ತು ಇವರೆಲ್ಲಾ ಸೇರಿ !

ಕಡಲ ತಡಿ ಉದ್ದಕ್ಕೂ ಕಾರಂತರ ಲೋಕ
ಕಾದಂಬರಿಯ ಮೂಕಜ್ಜಿಯ ಕನಸಿನ ಲೋಕ
ಮೈಸೂರು ಮಲ್ಲಿಗೆ ಪಸರಿಸಿದ ಭೂಪ
ದಾಂಪತ್ಯ ಕೆ.ಎಸ್ ನ ಕವನದ ಸ್ವರೂಪ
ಜೀವನ ಎಳೆತಂದರು ಕನ್ನಡಕ್ಕೆ ಎಲ್ಲರೂ !.

ಗೋಕುಲ ನಿರ್ಗಮಿಸುತ ಪುತಿನ ಬಂದರು
ಕಟ್ಟಿಮನಿ ಗೋವಿಂದ ಪೈ ತಾವೆಲ್ಲಾ ಇದ್ದೇವೆ ಎಂದರು
ಕನ್ನಡ ಉಳಿಸಲು ಅನಕೃ ನಾಯಕರು
ನಿರಂಜನ ಅಲನಹಳ್ಳಿ ಮುಗಳಿ ಮೂರ್ತಿ ಕಂಡರು
ದಾಪುಗಾಲಾಕಿತು ಕನ್ನಡ ಎನ್ನಿ !

ನಾಟಕದ ರಂಗ ಪ್ರವೇಶಿದರು ಕಾರ್ನಾಡಧ್ವಯರು
ಕಾದಂಬರಿ ಸಾರಥ್ಯಕ್ಕೆ ಭೈರಪ್ಪ ಸೈ ಎಂದರು
ಲಂಕೇಶ ತೇಜಸ್ವಿ ತೇಜಸ್ಸು ಮೆರೆಯಿತು
ದೇವನೂರ ಕಂಬಾರ ಶ್ರೇಷ್ಠತೆ ಹಿರಿದಾಯಿತು
ಕನ್ನಡ ಜಗದ್ವಿಖ್ಯಾತ ವಾಯಿತು !

ಇನ್ನಿಹರು ಎನಿಸಲಾಗದ ನಕ್ಷತ್ರಮಣಿಗಳು
ಗ್ರಂಥೋಪಗ್ರಂಥಗಳ ಕರ್ತೃಗಳು
ಹಿರಿಯರು ಕಿರಿಯರು ಮನೆಯವರು
ಹೊರನಾಡಿನವರು ಗಡಿನಾಡಿನವರು
ಶ್ರೀಮಂತ ಕನ್ನಡ ಹೃದಯಗಳು
ಸದಾ ಕನ್ನಡವನ್ನೇ ಮಿಡಿಯುವರು... !

- ಅಶೋಕ ಕುಮಾರ್ ವಳದೂರು ( ಅಕುವ)

"ಮುಂಬಯಿ ಮನೆ" ಯಲ್ಲಿ ಇದ್ದು ಬಂದಾಗ

"ಮುಂಬಯಿ ಮನೆ" ಯಲ್ಲಿ ಇದ್ದು ಬಂದಾಗ

    ಡಾ|| ಜಿ. ಡಿ ಜೋಶಿಯವರ ಆಯ್ದು ಪ್ರಬಂಧಗಳ ಸಂಕಲನ "ಮುಂಬಯಿ ಮನೆ" ಯನ್ನು ಓದುತ್ತಾ ಎಲ್ಲೋ ನಾನು ಮುಂಬೈಯ ಗಲ್ಲಿ, ವಾಡ ಪಾವ್ ಸೆಂಟರ್, ಜುಂಕ ಬಾಕರ್ , ಭೇಲ್ ಪುರಿ ರಸಾನುಭವಗಳ ಉಂಡಷ್ಟು ಸಂತೋಷ ಪಟ್ಟೆ. ಒಬ್ಬ ಪ್ರಬಂಧಕಾರನಲ್ಲಿರಬೇಕಾದ ಲೋಕಾನುಭವ, ಸೂಕ್ಸ್ಮ ದೃಷ್ಟಿ, ವಿನೋದ ದೃಷ್ಟಿ ಮತ್ತು ಅಷ್ಟೆ ಲವಲವಿಕೆ ಡಾ|| ಜೋಶಿಯವರ ಬರಹಗಳಲ್ಲಿ ಮೈಗೂಡಿದೆ. ಈ ಸಂಕಲನದಲ್ಲಿರುವ ಹದಿನಾರು ಪ್ರಬಂಧಗಳನ್ನು ಓದುವಾಗ ನಾವೂ ಕೂಡಾ ಅದರಲ್ಲೊಂದು ಪಾತ್ರದಂತೆ  ಸ್ವಂತ ಅನುಭವವನ್ನು ನೆನಪಿಸಿದರೆ ಅತಿಶಯೋಕ್ತಿಯಲ್ಲ. ಒಂದು ಮನೆಯಲ್ಲಿ ನಡೆಯುವ ಪ್ರಸಂಗದಂತೆ ಎಲ್ಲವನ್ನೂ ಕ್ರೋಢಿಕರಿಸಿ ವಾಸ್ತವದ ಬಿಸಿಯನ್ನು ಅಲ್ಲಲ್ಲಿ ಮುಟ್ಟಿಸುತ್ತಾ ತಮ್ಮ ರಸಾನುಭೂತಿಯನ್ನು ನಮ್ಮ ಮುಂದಿಟ್ಟಿದ್ದಾರೆ.

    ಮೊದಲ ಕಥೆ "ಬಿಲ್ಲುಗಳು" ಶೋಕಿಯ ಇಂದಿನ ಹಳ್ಳಿಯಿಂದ ಬಂದ ಯುವ ಜನಾಂಗ ಹಣದ ಹಿಂದೆ ಬಿದ್ದು ಮೌಲ್, ಕಾಫಿ ಶಾಪ್ ಗಳಲ್ಲಿ ದುಂದುವೆಚ್ಚ ಮಾಡುತ್ತಾ ಬಿಲ್ಲುಗಳನ್ನು ಕಂಡು ಪಜೀತಿ ಪಡುತ್ತಾ ಕ್ರೆಡಿಟ್ ವ್ಯವಸ್ಥೆಗೆ ಬಲಿಯಾಗುವುದನ್ನು ನಮ್ಮ ಮುಂದಿಡುತ್ತದೆ. ಬಡವ ಶ್ರೀಮಂತರ ನಡುವಿನ ಕಂದರ ಯಾವ ರೀತಿ ಹೆಚ್ಚಾಗುತ್ತಿದೆ. ವಸಾಹತುಶಾಹಿ ಕಂಪೆನಿಗಳು ಮಾಡುವ ಸುಲಿಗೆ ಮನದಟ್ಟು ಮಾಡುತ್ತವೆ. ರಾಮರಾಯರ ಕುರ್ಚಿ ಮತ್ತು ಟೇಬಲ್ ನಡುವಿನ ಆತ್ಮೀಯತೆಯನ್ನು ಸುಂದರರಾಯರಿಗೆ ಶಿಷ್ಯರು ನೀಡಿದ ಬೆತ್ತದ ಛತ್ರಿಯ ಬೆಲೆಯನ್ನು "ಭಾವನಾತ್ಮಕ ಬೆಲೆ" ಯಲ್ಲಿ ನಾವು ಕಾಣಬಹುದು. ಸಂಗ್ರಹ ಪ್ರವೃತ್ತಿಯ ಮಾನವ ಭಾವನಾತ್ಮಕವಾದ ನೆಲೆಗಟ್ಟಿನಲ್ಲಿ ತನಗೆ ಇಷ್ಟವಾದ ವಸ್ತುವನ್ನು ಜೋಪಾನವಾಗಿ ಕಾಪಡುವ ಪ್ರಸಂಗಗಳು ನಮ್ಮ ಮುಂದೆ ಹಾದು ಹೋಗುತ್ತವೆ.

    ಬುದ್ಧಿವಂತ ಮನುಷ್ಯ ತನ್ನ ಕಾವ್ಯ ಸಾಧನೆಗೆ ಪರೋಕ್ಷ ವಿಧಾನಗಳನ್ನು ಬಳಸುವ ಬಹು ಮುಖಗಳನ್ನು "ಪರೋಕ್ಷ ಸಾಧನಂ" ದಲ್ಲಿ ಹೆಂಡತಿಯಿಂದ ಹಿಡಿದು ನಮ್ಮನ್ನು ನಡೆಸುವ ಸರಕಾರಗಳು ಮಾಡುವ ಕಸರತ್ತುಗಳನ್ನು ಡಾ|| ಜೋಶಿಯವರು ಉದಾಹರಿಸುತ್ತಾರೆ. "ಮೃದಂಗೋ ಮುಖ ಲೇಪನ ಕರೋತಿ ಮಧುರ ಧ್ವನಿಂ" ಸರಿತಪ್ಪುಗಳೆನಿಸದೆ ಪರೋಕ್ಷ ಸಾಧನೆಯ ಗೀಳು ಮಾನವನಿಗೆ ಅಂಟಿಕೊಂಡಿದೆ.

    "ಕ್ಷಮಿಸಿ ಚಿಲ್ಲರೆ ಇಲ್ಲ " ಹರಟೆಯಲ್ಲಿ ವಾಸ್ತವ ಬದುಕಿನ್ನಲ್ಲಿ ಸಾಮಾನ್ಯರು ಚಿಲ್ಲರೆಯಿಂದಾಗಿ ಪಡುವ ಕಷ್ಟ ತೊಂದರೆಗಳನ್ನು ತುಂಬಾ ವಿನೋದವಾಗಿ ಬಿಡಿಸಿಟ್ಟಿದ್ದಾರೆ. ಚಿಲ್ಲರೆ ಅಭಾವ ಪ್ರಸ್ತುತ ಸಮಾಜವನ್ನು ಕಾಡುವ ಒಂದು ನಿತ್ಯದ ಸಮಸ್ಯೆ . ಬಸ್ಸು , ಟ್ಯಾಕ್ಸಿ , ಬೀಡಾ ಅಂಗಡಿ ರೈಲ್ವೆ ಟಿಕೇಟ್ ಸರದಿ , ಹೋಟೆಲ್ ಗಳಲ್ಲಿ ಟಿಪ್ಸ್ ಗಾಗಿ ಚಿಲ್ಲರೆಯನ್ನು ತಡಕಾಡಬೇಕಾಗುತ್ತದೆ. ಒಂದಲ್ಲ ಒಂದು ವಿಧಾನದಿಂದ ಇದು ಜನರ ಹಣವನ್ನು ಉಳಿಸುತ್ತೆ ದೇಶಸೇವೆ ಆಗುತ್ತೆ ಎಂಬ ಆಶೋತ್ತರ ಲೇಖಕರದು.

    ಮುಂಬೈ ಬದುಕಿನ ಆಕರ್ಷಣೆ ತಾತ್ಕಾಲಿಕರು ಮತ್ತು ಬಾಧಕರೆಂಬ ಎರಡು ವರ್ಗವನ್ನು ಮೋಹಗೊಳಿಸಿ ತನ್ನ ಬಾಲದಲ್ಲಿ ಬಂಧಿಯಾಗಿಸುವ ಪ್ರಕ್ರಿಯಯನ್ನು "ಮುಂಬಯಿ ಮೋಹ" ಪ್ರಬಂಧದಲ್ಲಿ ಲೇಖಕರು ವಿವರಿಸುತ್ತಾರೆ. ಊರಿನಿಂದ ಬಂದ ಸಂಗಣ್ಣ ಮಂಗಣ್ಣನಾದ ಕತೆ, ಇಲ್ಲಿ ಗಮನ ಸೆಳೆಯುತ್ತದೆ. ರೋಗಗಳನ್ನು ಮುಚ್ಚಿಟ್ಟುಕೊಂಡು ನಿರೋಗಿಯಾಗಿ ಬದುಕುವ ಮಾನವ ಪ್ರವೃತ್ತಿಯ ತ್ರಿಶಂಕು ಸ್ಥಿತಿಯ ಬಗ್ಗೆ "ರೋಗಗಳನ್ನು ಮುಚ್ಚಿಟ್ಟುಕೊಂಡು ಬೆಳಿಸಿರಿ "  ಬೆಳಕು ಚೆಲ್ಲುತ್ತದೆ , ಆಧುನಿಕತೆಯೊಂದಿಗೆ ಮಾಯವಾಗುವ ಮಾನವೀಯ ಮೌಲ್ಯಗಳು, ಹೆಚ್ಚುತ್ತಿರುವ ನಿರ್ಲಕ್ಷಿತ ಅಪರಾಧಗಳು , ಮನೆಬಾಡಿಗೆ ಕೊಟ್ಟು ಕಿರಿಕಿರಿ ಅನುಭವಿಸುವ ಮಾಲಿಕ , ಸಾಲಕೊಟ್ಟು ಮರುಪಡೆಯಲಾಗದ ಧನಿಕನ ಸಮಸ್ಯೆಗಳು, ದಿನನಿತ್ಯ ಜೀವನದ ಸಣ್ಣ ಕಳ್ಳರು, ಕುರುಡರಿಗೆ ಪರೋಕ್ಷವಾಗಿ ಸಹಾಯಮಡುವ ಸರಕಾರಗಳು. ಅವುಗಳ ನಡುವೆ ಕಾನೂನು ಕತ್ತೆಯಾಗುವ ಪ್ರಸಂಗಗಳನ್ನು ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ "ಏನು ಬಂತಪ್ಪಾ ಕಾಲ" ದಲ್ಲಿ ಚರ್ಚಿಸುತ್ತಾರೆ.

    ಇಂದಿನ ಶಿಕ್ಷಣ ಪದ್ಧತಿಯಲ್ಲಿ ಪಾಲಕರಾದವರು ಸಹಿಸಬೇಕಾದ ತೊಂದರೆ ಆರ್ಥಿಕ , ಸಾಮಾಜಿಕ ಮತ್ತು ಮಾನಸಿಕವಾಗಿ ಎಷ್ಟೆಂಬುದನ್ನು ಕೆ.ಜಿ ಯಿಂದ ಹಿಡಿದು ಉನ್ನತ ಶಿಕ್ಷಣದ ಉದಾಹರಣೆಯೊಂದಿಗೆ ವಿವರಿಸುತ್ತಾರೆ. ಪಾಲಕರು ನೂತನ ಶೋಷಿತ ವರ್ಗಕ್ಕೆ ಸೇರ್ಪಡೆಯಾಗುತ್ತಿರುವ ಎಚ್ಚರಿಕೆಯನ್ನು ಲೇಖಕರು "ಪಾಲಕರ ಗೋಳು" ನಲ್ಲಿ ಮುಂದಿಡುತ್ತಾರೆ.

    ಮುಂಬಯಿಯಲ್ಲಿ ವ್ಯಾಪಾರ ಮಾಡಲು ಅವಕಾಶ ದೊರೆಯುವುದು ಸುಲಭ, ನೌಕರಿ ದೊರೆಯುವುದು ಕಠಿಣ ಸಾಧ್ಯ, ಮನೆ ದೊರೆಯುವುದು ಅಸಾಧ್ಯ ಎಂಬ ಉಕ್ತಿಯೊಂದಿಗೆ ವಾಸಕ್ಕೆ ಯೋಗ್ಯವಾಗ ಮನೆಯನ್ನು ಬಡವ ಶ್ರೀಮಂತ ಮತ್ತು ಮಧ್ಯಮ ವರ್ಗದವರು ಅವರವರ ಅನುಕೂಲ ಅನುಸಾರವಾಗಿ ಪಡೆದುಕೊಳ್ಳುವ ಪರಿಯನ್ನು ಚರ್ಚಿಸಿದ್ದಾರೆ. ಶ್ರೀಮಂತರ ಪಾಶ್ ಮನೆಗಳು, ಮಲಗಲು ಜಾಗವಿರದ ಬಡವರ ಚಾಳ್ ಗಳು, ಸುಧಾರಿಸಿ ಕಷ್ಟಪಡುವ ಮಧ್ಯಮ ವರ್ಗದ ಸಣ್ಣ ಸಣ್ಣ ಪ್ಲ್ಯಾಟ್ ಮತ್ತು ಬಾಡಿಗೆ ಮನೆಗಳು ಈ ಮಧ್ಯೆ ಕಮೀಶನ್ ಎಜೆಂಟ್ ಗಳು ಪಗಡಿ ಮಾಲೀಕರು ಮನಸ್ಸು ದೊಡ್ಡದು ಎಂಬ ಸತ್ಯವನ್ನು ನಮ್ಮೊಂದಿಗೆ ಲೇಖಕರು ಮುಂಬಯಿ ಮನೆಯಲ್ಲಿ ಹಂಚಿದ್ದಾರೆ.

    ಆಧುನಿಕ ಉಪಕರಣಗಳ ಬಳಕೆಯಿಂದ ಸೋಮಾರಿಯಾದ ಮಾನವ ಸಮಯವಿಲ್ಲ ವೆಂಬ ಪೊಳ್ಳು ನೆಪ ಮಾಡಿಕೊಂಡು ಕೆಲಸ ತಪ್ಪಿಸುಕೊಳ್ಳುವ ಬುದ್ಧಿಯನ್ನು ಬೆಳೆಸುತ್ತಿದ್ದಾನೆ ಎಂಬ ಎಚ್ಚರಿಕೆಯನ್ನು ಲೇಖಕರು ಈ ಪ್ರಬಂಧದಲ್ಲಿ ಚರ್ಚಿಸಿದ್ದಾರೆ. ಬಿಟ್ಟಿ ತಿನ್ನುವ ವ್ಯಕ್ತಿಗಳ ಚಪಲದ ಇತಿಹಾಸವನ್ನು "ಪರಾನ್ನ ಭೋಜನ " ಪ್ರಬಂಧದಲ್ಲಿ ವಿನೋದಮಯವಾಗಿ ನಮ್ಮ ಮುಂದಿಟ್ಟಿದ್ದಾರೆ. ಇಲ್ಲಿ ಲೇಖಕರ ವಿನೋದ ಪ್ರಜ್ನೆಯನ್ನು ಗುರುತಿಸಬಹುದು. ಇಂದಿನ ಸಭೆ ಸಮಾರಂಭಗಳ ಕರೆಯೋಲೆಯ ತಳವಾಣಿ ಪ್ರೀತಿ ಭೋಜನದ ವ್ಯವಸ್ಥೆ  ಇದೆ. ನೆನಪಿಸುವುದು ಇಲ್ಲಿ ಸಮಂಜಸ ವಾಗುತ್ತದೆ. ಓಸಿ ಜೀವನವೇ ಲೇಸು ಸರ್ವಜ್ನ್ಯ ಎನ್ನುವವರ ಪುಕ್ಕಟ್ಟೆ ತಿನ್ನುವವರ ಬಾಯಿರುಚಿಯನ್ನು ತಿನ್ನುವುದಕ್ಕಾಗಿ ಮಾಡುವ ಕಸರತ್ತುಗಳನ್ನು ಸ್ವಾರಸ್ಯವಾಗಿ ನಮ್ಮ ಮುಂದಿಡುತ್ತಾರೆ.

    "ಸೆಕೆಂಡ್ ಒಪೀನಿಯನ್" ನ ಅನಿವಾರ್ಯತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಲೇಖಕರು ಲಘುವಾಗಿಯೇ ಲೇವಡಿ ಮಾಡುತ್ತಾ ಒಂದು ಗೀಳಿಸಿ ತರಹ ಈ ಪೃವೃತ್ತಿ ಬೆಳೆಯುವುದನ್ನು ಗಮನಿಸುತ್ತಾರೆ. ಮಾನವ ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿ ಸಾಮರ್ಥ್ಯವನ್ನು ಆತ್ಮ ಸ್ಥೈರ್ಯ ಮತ್ತು ಧೃಡತೆಯನ್ನು ಕಳೆದುಕೊಳ್ಳುತ್ತಿದ್ದಾನೆಂಬುದನ್ನು ಪರೋಕ್ಷವಾಗಿ ತಿಳಿಯಪಡಿಸುತ್ತಾರೆ. ಇಂದು ವ್ಯೆದ್ಯಕೀಯ , ಶೈಕ್ಷಣಿಕ ಸಾಮಾಜಿಕ ಮತ್ತು ವೈಯಕ್ತಿಕ ನಿರ್ಧಾರಗಳನ್ನು ತೆಗೆದು ಕೊಳ್ಳುವುದಕ್ಕೂ ದ್ವಿತೀಯ ಅಭಿಪ್ರಾಯವನ್ನು ಪಡೆಯಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ , ವ್ಯೆದ್ಯರ ತಪಾಸಣೆಯ ರಿಪೋರ್ಟು ಇರಬಹುದು, ಮಕ್ಕಳ ಕಾಲೇಜ್ ಸೇರ್ಪಡೆ , ಮಗಳ ಮದುವೆ ವಿಷಯದಲ್ಲೂ ನಾವು ದ್ವಿತೀಯ ಅಭಿಪ್ರಾಯದ ದಾಸರಾಗಿದ್ದೇವೆ . ಇದು ಇಂದಿನ ಅನಾವಶ್ಯಕ ದಾಸ್ಯ ಎಂದು ಲೇಖಕರು ಬೊಟ್ಟು ಮಾಡುತ್ತಾರೆ.

    ಭಕ್ಷೀಸು ಅಥವ ಖುಷಿ ಕೊಡುವ ಪರಂಪರೆ ರಾಜ ಮಹಾರಾಜರುಗಳ ಕಾಲದಿಂದಲೇ ರೂಢಿಯಲ್ಲಿತ್ತು . ದೀಪಾವಳಿ , ಕ್ರಿಸ್ ಮಸ್, ಹೊಸವರುಷ, ಈದ್ ಗಳ ಸಂದರ್ಭದಲ್ಲಿ ಪೋಸ್ಟ್ ಮ್ಯಾನ್ ಮುನ್ಸಿಪಾಲಿಟಿ , ಕಸಗುಡಿಸುವವ , ಆಫೀಸಿನ ಚಾಕರಿಯವ ಆ ಖುಷಿಗಾಗಿ ಕಾಯುತ್ತಿರುತ್ತಾರೆ. ಗಂಡಾಗುಂಡಿ ಮಾಡಿಯಾದರೂ ಗಡಿಗೆ ತುಪ್ಪ ಕುಡಿಯ ಬೇಕೆನ್ನುವ ಪ್ರಸ್ತುತ ಸಮಾಜದಲ್ಲಿ ಸಾಲ ಮಾಡಿಯಾದರೂ ಅದ್ದೊರಿ ಹಬ್ಬಗಳ ಆಚರಣೆಗೆ ಇಳಿದು ಬಿಟ್ಟಿದ್ದೇವೆ.ಶ್ರೀಮಂತರಿಗೆ ಪುಡಿಕಾಸದ ಆ ಖುಷಿ ಕೊಡುವ ಹಣ ತಿಂಗಳ ಸಂಬಳವನ್ನು ನಂಬಿರುವ ಮಧ್ಯಮ ವರ್ಗದವನಿಗೆ ಹೊರೆ ಅಥಾವ ಕಿರಿಕಿರಿಯಾಗುವುದು ಖುಷಿ ಕೊಡುವ ಪದ್ಧತಿ ಒತ್ತಾಯದ ಮಾಘ ಸ್ನಾನದಂತೆ ಎಂಬ ಅಭಿಪ್ರಾಯವನ್ನು ಲೇಖಕರು ತಾಳುತ್ತಾರೆ.

    ಪಟ್ಟಣದಲ್ಲಿ ಆಳುಗಳ ಕೊರತೆ ಯಾವತ್ತೂ ಇದ್ದೇ ಇದೆ. ಮನೆಕೆಲಸಕ್ಕೆ ವಿಶ್ವಾಸ ಪೂರ್ವಕವಾದ ಆಳುಗಳನ್ನು ಪಡೆಯುವುದು ಕಷ್ಟ ಪಡೆದರೂ ಆಳಿನ ಸಕಲ ಕುಶಲೋಪರಿಗಳ ಬಗ್ಗೆ ಎಚ್ಚರವಹಿಸಬೇಕು. ಆಳುಗಳದ್ದೇ ಯೂನಿಯನ್ ಇರುವ ಈ ಯುಗದಲ್ಲಿ ಆಳಿನ ಹಾವಳಿ ಯಿಂದ ತಪ್ಪಿಸಲು ನಮ್ಮ ಕೆಲಸವನ್ನು ನಾವೇ ಮಾಡಲು ಮುಂದಾಗಬೇಕು. ಊರುಗಳಲ್ಲೇ ಆಳು ಸಿಗದ ಇಂದಿನ ಪರಿಸ್ಥಿತಿಯನ್ನು ಇಲ್ಲಿ ನೆನಪಿಸ ಬಹುದು.

    ಬಾಯಿ ರುಚಿ ಚಪಲಕ್ಕೆ ಅಂಟಿಕೊಂಡ ಮಾನವ ನಾಲಿಗೆಯ ದಾಸನಾಗುವ ಮತ್ತೊಂದು ಪ್ರಸಂಗವನ್ನು ಲೇಖಕರು ಭೇಲ್ ಪುರಿ ಪ್ರಬಂಧದಲ್ಲಿ ವಿಸ್ತಾರವಾಗಿ ವಿವರಿಸುತ್ತಾರೆ. ರಸ್ತೆ ಬದಿಯ ಭೇಲ್ ಪುರಿಗಳು ಮನುಷ್ಯನನ್ನು ನಿಯಂತ್ರಿಸುವ ಬಗೆಯನ್ನು ತಿಳಿಸುತ್ತಾರೆ. ನಾಲಿಗೆಯ ದಾಸನಾದ ಮಾನವ ರುಚಿಯ ಮುಂದೆ ಕುಬ್ಜನಾಗುತ್ತಾನೆ. ಭಿನ್ನಾ ರುಜೇರ್ಹಿ ಲೋಕಃ ಕವಿ ಕಾಳಿದಾಸನ ನೆನಪಾದರೆ ಅತಿಶಯೋಕ್ತಿಯಲ್ಲ.

    ಪುರಾಣದ ದ್ರೊಪದಿಯ ಶ್ರೀಮುಡಿಯಿಂದ ಹಿಡಿದು ಇಂದಿನ ಬಾಬ್ ಕಟ್ ಯುಗದಲ್ಲೂ ಎಲ್ಲರಿಗೂ ಕೂದಲು ಎಂದರೆ ಅಲಂಕಾರಿಕ ಆಸ್ತಿ ಕೇಶಾಲಂಕಾರ ಇಂದು ಉದ್ಯಮವಾಗಿಯೇ ಬೆಳೆದಿದೆ. ಮಾಧ್ಯಮದಲ್ಲಿ ಪ್ರಸರವಾಗುವ ೫೦ ಪ್ರತಿ ಶತಃ ಜಾಹೀರಾತುಗಳು ಕೇಶದ ಬಗ್ಗೆಯೇ ಇರುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ಇಂದಿನ ಮಾಡರ್ನ್ ಅಜ್ಜಿಯಂದಿರಿಗೂ ಕೂದಲು ಸುಂದರವಾಗಿ ಕಾಣ ಬೇಕೆಂಬ ಹಂಬಲ. ಹಿಂದಿನ ಕಾಲದ ಶೃಂಗಾರ ಸಾಧನಗಳು ಮಾಯವಾಗಿ ಆಧುನಿಕ ಸೆಂಟ್ ಪೌಡರ್ , ಕ್ಲಿಪ್ ಮಾಚಿಂಗ್ ಸೆಟ್ , ಟಿಕಲಿಗಳು ಸೌಂದರ್ಯ ವರ್ಧಕಗಳಾಗಿ ಮಾರ್ಪಡಾಗಿವೆ, ಪುರುಷರಲ್ಲಿಯೂ ಕೇಶಾಲಂಕಾರದ ಹುಚ್ಚಿಗೆ ಸಚಿನ್ ನಂತಹ ದಿಗ್ಗಜರು ಗುಂಗುರು ಕೂದಲನ್ನು ನೇರವಾಗಿಸಿದ್ದೆ ಸಾಕ್ಷಿ. ಅಂತು ಕೇಶಾಲಂಕಾರ ಸಮಸ್ಯೆ ಕೂದಲು ಲತೆ ತುಂಬಾ ಇರುವ ತನಕ ತಪ್ಪಿದ್ದಲ್ಲ.

    ಒಟ್ಟು ಹದಿನಾರು ಹರಟೆಗಳ ಮುಂಬಯಿ ಮನೆ ಒಂದೇ ಸಮನೆ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಬರುವ ಎಲ್ಲಾ ಘಟನೆಗಳು ನಮ್ಮ ಸಮಕಾಲೀನ ಜೀವನದಲ್ಲಿ ನಡೆದಂತೆ ಭಾಸವಾಗುವುದು ಡಾ!! ಜೋಶಿಯವರಿಂದ ಕನ್ನಡ ಸಾಹಿತ್ಯಲೋಕ ಇನ್ನೂ ಸಮೃದ್ಧವಾಗಲಿ ಎಂದು ಹಾರೈಸುತ್ತೇನೆ.

ಅಶೋಕ್ ಕುಮಾರ್ ವಳದೂರು (ಅಕುವ)
೧೦/೭/೨೦೧೩.

Saturday, July 5, 2014

ಒಂಟಿ ಕಾಲಿನ ಕಾಗೆ

ಒಂಟಿ ಕಾಲಿನ ಕಾಗೆ 

ಏಕಾಂತ ಭಂಗ ಮಾಡಿ 
ತಪ್ಪಸ್ಸಿಗೆ  ನಿಂತಿದ್ದ ಹಾಗೆ 
ಒಮ್ಮೆಲೇ ತಪದಿಂದ  ಹೊರಗೆ 
ಎಳೆದಂತೆ !

ಪಿತೃಪಕ್ಷದ ಬೆಳಗಿನ ಹೊತ್ತು 
ಇನ್ನೂ ಗೂಡಿನ ಕದ ತೆರೆದಿಲ್ಲ 
ಒಂಟಿಕಾಲಿನಲ್ಲೇ ತಪ ಮಗ್ನ 
ನನ್ನ ಕಾಣುತ್ತಲೇ 
ಪರಿಚಯಿಸಿಕೊಂಡ !

ಏನೋ ಹೇಳಬೇಕಿತ್ತದಕ್ಕೆ 
ಮೌನವನ್ನೇ ಧರಿಸಿದ್ದ!
ಛಲ ಬಿಡದಿ ಸನ್ಯಾಸಿ 
ನನ್ನನ್ನೇ ದಿಟ್ಟಿಸುತ್ತಿದ್ದ !

ಬೆಂಕಿಯ ಉಗುಳು 
ದುಃಖದ ಜ್ವಾಲಾಗ್ನಿಯು !
ಹತ್ತಿರಕ್ಕೆ ಹೋಗಿ ಒಮ್ಮೆ 
ನೇವರಿಸಿದೆ !

ಹೇಳದೆ ಊರು ಬಿಟ್ಟಿದ್ದಕ್ಕೆ 
ಕುಪಿತನಾಗಿದ್ದ!
ಇಂದೂ ಅಲುಗದೆ ಒಂಟಿ ಕಾಲಲಿ 
ನಿಂತಿದ್ದಾನೆ !!

-ಅಕುವ ( ಅಶೋಕ್ ಕುಮಾರ್ ವಳದೂರು )

ಕುರುಂಬಿಲನ ಪಂಚಾಂಗ


ಕುರುಂಬಿಲನ ಪಂಚಾಂಗ


ಶೈಲೇಶ ಅದೆಷ್ಟು ವರ್ಷಗಳ ನಂತರ ಉಡುಪಿಗೆ ಬಂದಿದ್ದ. ಸದ್ಯ ಕಟಪಾಡಿಯಲ್ಲಿರುವ ತನ್ನ ಅಕ್ಕನ ಮನೆಗೆ ಬಂದು ಇಳಿಯುವುದೇ ಸುಲಭವಾಗಿ ಬಿಟ್ಟಿದ್ದೆ. ಅದು ಹೈವೇಗೆ ತಾಗಿ ಕೊಂಡೆ ಇರುವುದು ಕಾರಣ ಕೂಡಾ. ಮುಂಬೈಯಿಂದ ಬಸ್ಸು ಹಿಡಿದರೆ ಮನೆಯ ಅಂಗಳದಲ್ಲೇ ಉಳಿಯುವ ವ್ಯವಸ್ಥೆ ಅದು.ಇತ್ತೀಚೆಗೆ ತಾನು ಹುಟ್ಟಿ ಬೆಳೆದ ಅಜ್ಜನ ಊರು ಹೇರೂರಿನ ಕಡೆ ಹೋಗದೆ ಅನೇಕ ವರ್ಷಗಳೇ ಕಳೆದಿದ್ದವು.ಕಟಪಾಡಿಯಿಂದ ಒಳಮಾರ್ಗ ಶಂಕರಪುರದಿಂದ ಕಾರ್ಕಳ ಕಡೆ ಹೋಗುವ ಬಸ್ಸನ್ನು ಕಂಡಾಗ ಒಮ್ಮೆ ಹೇರೂರಿಗೆ ಹೋಗಿ ಬರುವ ಮನಸ್ಸಾಯಿತು.
ಅಂದು ಶನಿವಾರ. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಬಿಡುವು ಮಾಡಿಕೊಂಡು ಹೇರೂರಿಗೆ ಪ್ರಯಾಣ ಬೆಳೆಸಿದ. ಜೊತೆಯಲ್ಲಿ ಮಗ ಪ್ರಣವನನ್ನು ತನ್ನ ಹುಟ್ಟೂರು ತೋರಿಸಲು ಕರೆತಂದಿದ್ದ.ಹೇರೂರು ಮೂಡುಮನೆಗೆ ಬಂದು ಸೇರಿದಾಗ ಸಂಜೆಯಾಗಿತ್ತು. ಮನೆಯಲ್ಲಿ ಕುರುಂಬಿಲ ಅಜ್ಜನ ಹೆಂಡತಿ ಶಾಂತಜ್ಜಿ ಮತ್ತು ಅವರ ಮೊಮ್ಮಗಳು ಚಿತ್ರ ಮಾತ್ರ ಇದ್ದರು. ಶೈಲೇಶ್ ಮೂಡುಮನೆಗೆ ಬಂದು ಸುಮಾರು ೧೨ ವರ್ಷಗಳೇ ಕಳೆದು ಹೋಗಿದೆ. ಶೈಲೇಶನ ಅಪ್ಪ ನಾರಾಯಣ ಇಲ್ಲಿಯ ಆಸ್ತಿ ಬೇಡವೆಂದು ಮುಂಬೈ ಸೇರಿದ್ದ. ನಂತರ ಹೇರೂರಿನ ಸಂಪರ್ಕ ಅಷ್ಟ ಕಷ್ಟೆ ಇತ್ತು. ಕೇವಲ ಕುರುಂಬಿಲಜ್ಜನ ಪ್ರೀತಿಯಿಂದಾಗಿ ಆವಾಗ ಈವಾಗ ಅಪ್ಪನ ಮಾತುಕತೆ ನಡೆಯುತ್ತಿತ್ತು. ಶೈಲೇಶ ಕೂಡಾ ಅಪ್ಪನ ಮನೆಗೆ ಆಸ್ತಿಗೆ ಆಸೆ ಪಟ್ಟವನಲ್ಲ. ಮಗ ಪ್ರಣವ್ ಮತ್ತು ಚಿತ್ರ ಆಡಲು ಆರಂಭಿಸಿದರು. ಶಾಂತಜ್ಜಿಯಲ್ಲಿ ಕುರುಂಬಿಲಜ್ಜನವರ ಕೊನೆಯ ದಿನಗಳ ಬಗ್ಗೆ ಶೈಲೇಶ್ ಕೇಳಿದ . "ನಿನ್ನಜ್ಜ ಇರೋ ತನಕ ಈ ಮನೆ ವೈಭವದ ಮನೆಯಾಗಿತ್ತು. ಅವರು ಕುಟುಂಬದ ಕೊಂಡಿಯಾಗಿದ್ದರು. ಮನೆದೈವದ ಅರ್ಚಕ ಅಂತಹ ಎಲ್ಲರೂ ಅವರಿಗೆ ಮನ್ನಣೆ ಕೊಡುತ್ತಿದ್ದರು. ಈಗ ಮಾತ್ರ ನಮ್ಮನ್ನು ಯಾರು ಕೇಳುವವರಿಲ್ಲ" ಎಂಬ ಶಾಂತಜ್ಜಿಯ ವಿಷಾದದ ನುಡಿ ಶೈಲೇಶನಿಗೆ ಬೇಸರ ತಂದಿತ್ತು. ಅವರನ್ನು ಸಮಾಧಾನಿಸುತ್ತಾ "ಹಾಗೇನು ಇಲ್ಲ ಈ ಮನೆಯ ಗೌರವ ಇನ್ನೂ ಇದೆ ಮತ್ತೆ ಎಲ್ಲಾ ಒಂದಾಗುತ್ತಾರೆ. ಈ ನೆಲದ ಗುಣ ಹಾಗೆ ಇದೆ, ನೋಡಿ ನಾನ್ಯಾಗೆ ನಿಮ್ಮನ್ನು ಹುಡುಕಿಕೊಂಡು ಬಂದೆ, ಹಾಗೆ ಎಲ್ಲರೂ ಬರುತ್ತಾರೆ" ಶಾಂತಜ್ಜಿಯ ಮುಖ ಅರಳಿತು.
ಶಾಂತಜ್ಜಿ ಚಹಾ ಮಾಡಲು ಅಡುಗೆ ಮನೆಗೆ ಹೋದರು. ಎದ್ದು ಮನೆಯ ಚಾವಡಿಯಲ್ಲಿ ಕಣ್ಣಾಡಿಸಿದಾಗ ಶೈಲೇಶನಿಗೆ ಕೃಷ್ಣ ಪಂಚಾಂಗದ ಕಡೆ ದೃಷ್ಟಿ ಹರಿಯಿತು.ಅದೂ ಕೂಡಾ ಪ್ರಸಕ್ತ ವರ್ಷದ್ದು. ಮೆಲ್ಲನೆ ತಿರುವಿ ಹಾಕಿದ. ಹೊಸ ಪಂಚಾಂಗ ಎಪ್ರಿಲ್ ಸಂಕ್ರಾತಿಯ ನಂತರದ್ದು.ವಿಜಯ ಸಂವತ್ಸರ ಆರಂಭವಾಗಿತ್ತು. ಅಲ್ಲಲ್ಲಿ ಏನೋ ಗುರುತು ಹಾಕಿದ್ದು ಕಾಣಿಸಿದವು. ಶೈಲೇಶನಿಗೆ ಕುತೂಹಲ ಹೆಚ್ಚಾಯಿತು. "ಈಗಲೂ ಇಲ್ಲಿ ಯಾರೂ ಪಂಚಾಗದಲ್ಲಿ ಗುರುತು ಹಾಕುವವರು?" ತನ್ನಲ್ಲಿ ಪ್ರಶ್ನೆ ಕೇಳಿ ಕೊಂಡ ಅಷ್ಟರಲ್ಲೇ ಅಲ್ಲೊಂದು ನೋಟು ಪುಸ್ತಕ ಸಿಕ್ಕಿತ್ತು. ಅದರ ಲೇಬಲ್ ಮೇಲ್ಗಡೆ "ಪ್ರಶಾಂತ್ ಕುಮಾರ್" ಹೆಸರಿತ್ತು. ಹತ್ತನೆ ತರಗತಿಯ ಪಠ್ಯ ಕೂಡಾ ಅಲ್ಲೇ ಇತ್ತು. ಆವಾಗ ಹೊಳೆಯಿತು. ಕುರುಂಬಿಲಜ್ಜನ ಒಬ್ಬನೇ ಮಗ ಶೇಖರನ ಮಗ ಇರಬೇಕು. ಆದರೆ ಆ ಮಗುವಿನ ಹೆಸರು ಶೈಲೇಶನಿಗೆ ನೆನಪಿರಲಿಲ್ಲ. ಆಗ ಡಿಸೆಂಬರ್ ಕ್ರಿಸ್ಮಸ್ ರಜೆ ಆದ್ದರಿಂದ ಬಹುಶಃ ಅವನು ತನ್ನ ಅಜ್ಜಿ (ತಾಯಿಯ ಅಮ್ಮ)ಯ ಮನೆಗೆ ಹೋಗಿರಬೇಕೆಂದು ಶೈಲೇಶ ಕಲ್ಪಿಸಿಕೊಂಡ. ಅಷ್ಟರಲ್ಲಿ ಶಾಂತಜ್ಜಿ "ಬಾ ಮಗ ಚಾ ಕುಡಿ ಅದೆಷ್ಟು  ವರ್ಷವಾಯಿತು,ಈ ಮನೆಯ ನೀರು ಕುಡಿದು" ಎಂದು ಉದ್ಗಾರ  ತೆಗೆದಳು. " ಹೌದು" ಎನ್ನುತ್ತಾ ಶೈಲೇಶ್ ತಲೆ ಅಲ್ಲಾಡಿಸಿದ. ಪಂಚಾಗದ ಕಡೆ ಕೈ ತೋರಿಸಿ "ಈಗಾಲೂ ಈ ಮನೆಯಲ್ಲಿ  ಪಂಚಾಂಗ ಯಾರು ಬರೆಯುತ್ತಾರೆ ?" ಎಂದು ಅಜ್ಜಿಯನ್ನುಕೇಳಿದ."ನನ್ನ ಮೊಮ್ಮಗ ಪ್ರಶಾಂತ" ಎಂದು  ಅಜ್ಜಿ ಸುಮ್ಮನಾದಳು.
" ಶೇಖರಣ್ಣನ ಮಗನೇ.?"."ಹೌದು ಮಗ… "  ಎನ್ನುವಾಗ ಅಜ್ಜಿಯ ಹೃದಯ ಭಾರವಾಗಿತ್ತು.  ಶೇಖರಣ್ಣ ಎಲ್ಲೋ ಘಟ್ಟದ ಮೇಲೆ ಹೋಟೆಲ್ ಇಟ್ಟು ಕೊಂಡಿದ್ದು ನೆನಪಾಯಿತು. ಯಾವುದೋ ರಸ್ತೆ ಅಪಘಾತದಲ್ಲಿ ಹೆಂಡತಿ ಮತ್ತು ಅವರು ತೀರಿಕೊಂಡ ನಂತರ ಮೊಮ್ಮಗನನ್ನು ಇವರೇ ಸಾಕುತ್ತಿದ್ದಾರೆಂದು ಮುಂಬೈಯಲ್ಲಿ ಸಂಬಂಧಿಕರೊಬ್ಬರು ಹೇಳಿದ್ದರು. ಶೇಖರಣ್ಣ ನೆನಪಿಸಿದಕ್ಕೆ  ಶೈಲೇಷ್ ಸಂಕಟ ಪಟ್ಟ.
"ಅಜ್ಜನವರು ಮೊಮ್ಮಗನಿಗೆ  ತಲೆಗೆ ಕೈ ಇಟ್ಟಿದ್ದಾರೆ" ತಮಾಷೆಯಾಗಿ ಶೈಲೇಶ್ ಹೇಳಿದ. ಮುಖದಲ್ಲಿ ಹಸನಾಗುತ್ತಾ ಶಾಂತಜ್ಜಿ "ಹೌದು ಮಗ ಅಜ್ಜನ ಎಲ್ಲಾ ಗುಣಗಳೂ ಬಂದಿವೆ. ಅವನೇ ಪ್ರತಿವರ್ಷ ಪಂಚಾಂಗ ತಂದು ಎಲ್ಲವನ್ನೂ ಗುರುತು ಹಾಕುತ್ತಾನೆ. ಅಜ್ಜನಂತೆ ದನ ಕರು ಹಾಕಿದ ದಿನ, ಊರಿನಲ್ಲಿ ಯಾರಿಗಾದರೂ ಹೆರಿಗೆಯಾದ ದಿನ ಮಗು ಹೆಣ್ಣು ಗಂಡೋ, ಕಂಬಳದ ಗದ್ದೆಗೆ ಬಿತ್ತು ಹಾಕಿದ್ದು, ಮಳೆಗಾಲ ಪ್ರಾರಂಭವಾಗಿ ಗಂಗಾವತರಣವಾದ ದಿನ ಎಲ್ಲಾ ದಿನಗಳನ್ನು ಕರಾರುವಕ್ಕಾಗಿ ಅಜ್ಜನಂತೆ ಪ್ರಶಾಂತ ಕೂಡಾ ತಪ್ಪದೇ ಗುರುತು ಹಾಕಿದ್ದ.
ಹಾಗೇ  ಮಾತಾಡುತಿದ್ದ  ಶೈಲೇಶನಿಗೆ ಅಜ್ಜನ ಪಂಚಾಂಗದಲ್ಲಿ ಸಿಕ್ಕಿದ ಒಂದು ಮಹತ್ತರ ದಿನಾಂಕದ ನೆನಪಾಯಿತು. ಆವಾಗ ಶೈಲೇಶನಿಗೆ ಹದಿನಾರನೇಯ ವರುಷ. ತಂದೆ ಮುಂಬೈಯಿಂದ ಊರಿಗೆ ಬಂದಿದ್ದರು.ಶೈಲೇಶ ಕಾಪುವಿನಲ್ಲಿ ತನ್ನ ಅಜ್ಜಿ (ತಾಯಿಯ ಅಮ್ಮ)ಯ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದ ಸಮಯ. ಅಪ್ಪ ಬಂದರೆ ಅವನ ಪ್ರಯಾಣ ಹೇರೂರಿಗೆ ಬರುತ್ತಿತ್ತು. ಆಗ ರಜಾಕಾಲದ ಸಮಯ. ಮೇ ಮೊದಲ ವಾರದಲ್ಲೇ ಮಳೆಯಾಗಿತ್ತು. ಹೇರೂರಿಗೆ ಬಂದ ಶೈಲೇಶ ಮನೆಯಲ್ಲಿ ಉಳಿಯಬೇಕಾಯಿತು.  ಆವಾಗ ಕುರುಂಬಿಲಜ್ಜನ ಕೋಣೆಯಲ್ಲಿ ಅವರೊಡನೆ ಹರಟೆ ಹೊಡೆಯುತ್ತ ಏನೇನೋ ಕೇಳುತ್ತಿದ್ದ, ಅವನಿಗೆ ಸಮಾಧಾನವಾಗುವ  ಉತ್ತರ ಕುರುಂಬಿಲಜ್ಜ ನೀಡುತ್ತಿದ್ದರು." ಈ ಪಂಚಾಗದಲ್ಲಿ ನೀವೇನೆಲ್ಲಾ ಬರೆಯೂತ್ತೀರಿ ಅಜ್ಜ ?" ಅಂತ ಕೇಳಿದ್ದ. ಅವರು ಒಂದು ಪಂಚಾಂಗ ಅವನ ಕೈಗೆ ಕೊಟ್ಟು ನೀನೇ ಓದಿಕೋ ನಿನಗೆ ತಿಳಿಯುತ್ತೆ ಅಂತ ಕೊಟ್ಟರು.
"ಗುತ್ತುವಿನ ಮನೆಯ ಕಪ್ಪು ದನ ೨ನೇ ಕರು ಹಾಕಿದ್ದು"
"ಹೊಸ ಮನೆಯ ನಾರಾಯಣ ಶೆಟ್ಟಿಗೆ ಮೊದಲು ಹೆಣ್ಣು ಮಗು ಆದದ್ದು "
"ಕಲ್ಲೊಟ್ಟೆಯ ವಾರಿಜ ಗಂಡು ಹೆತ್ತಿದ್ದು."
"ಶೀನನು ಹೊಸ ಕೋಣ ತಂದದ್ದು "
"ತೋಟದ ಮನೆ ಕೊಲ್ಲಕ್ಕ ತೀರಿಕೊಂಡದ್ದು"
ಹೀಗೆ ಓದುತ್ತಾ ಶೈಲೇಶನ ಕುತೂಹಲ ಹೆಚ್ಚಾಯಿತು. ಅವನ ಮನಸ್ಸಿನಲ್ಲಿ ಇನ್ನೊಂದು ವಿಚಾರ ಹೊಳೆಯಿತು. ಹಾಗಾದರೆ ನಾನು ಹುಟ್ಟಿದ ದಿನ ಕೂಡಾ ದಾಖಲಾಗಿರಬೇಕು. ಹುಡುಕಲು ಶುರು ಮಾಡಿದ ಅಂತು ೧೯೭೭ ರ ಪಂಚಾಂಗ ಅವನ ಕೈ ಸಿಕ್ಕಿತು. ತುಂಬಾ ಧೂಳು ಹಿಡಿದಿತ್ತು. ಅವನ ಹತ್ತನೆ ತರಗತಿಯ ಅಂಕ ಪಟ್ಟಿಯ ದಿನಾಂಕದ ಮೇರೆಗೆ ಮೇ ತಿಂಗಳಲ್ಲಿ ಹುಡುಕಿದ. ಯಾವ ದಾಖಲೆಯೂ ಲಭ್ಯವಾಗಲಿಲ್ಲ . ಮುಂದುವರಿಯುತ್ತಾ ಜೂನು ತಿಂಗಳಲ್ಲಿ ಆರನೇ ತಾರೀಕಿಗೆ ಒಂದು ಗುರುತು ಸಿಕ್ಕಿತು. ಪಂಚಾಂಗವನ್ನು ಸ್ಪಷ್ಟ ಬೆಳಕಿಗೆ ಹಿಡಿದು ಓದಿದ.
"ನಾರಾಯಣನಿಗೆ ಗಂಡು ಮಗು, ಉಡುಪಿ ಆಸ್ಪತ್ರೆಯಲ್ಲಿ"  ಶೈಲೇಶನನ್ನು ಜಾನಕಿ ಹೆತ್ತಿದ್ದು ಉಡುಪಿಯ ಅಜ್ಜರ್ ಕಾಡು ಆಸ್ಪತ್ರೆಯಲ್ಲಿ. ಶೈಲೇಶನಿಗೆ ಒಮ್ಮೆಲೇ ತನ್ನ ನಿಜ ಹುಟ್ಟಿದ ದಿನಾಂಕ ಸಿಕ್ಕಿದ್ದಕ್ಕೆ ಸಂತೋಷವಾಯಿತು. ಆದರೆ ಶಾಲೆಯ ದಾಖಲಾತಿಯಲ್ಲಿ ಒಂದು ತಿಂಗಳು ಮುಂಚೆಗೆ ದಿನಾಂಕವನ್ನು ನಮೂದಿಸಿದಕ್ಕೆ ಬೇಸರವು ಒಟ್ಟೊಟ್ಟಿಗೆ ಆಯಿತು. ಒಂದು ಲಿಖಿತ ಪುರಾವೆ ಅವನ ಹುಟ್ಟಿದ ದಿನವನ್ನು ಸಮರ್ಥಿಸುವುದು ಸಂತೋಷ ತಂದಿತ್ತು. ಅಂದಿನಿಂದ ಅದೇ ದಿನವನ್ನು ಹುಟ್ಟಿದ ದಿನವಾಗಿ ಧೃಢ ಮಾಡಿಕೊಂಡ. ಅಂದಿನಿಂದ ಯಾವುದೇ ಕೆಲಸಕ್ಕೆ ಒಳ್ಳೆಯ ದಿನವನ್ನು ನೋಡಬೇಕಾದರೆ ತಂದೆಗೆ ಹೇಳಿಸಿ ಅಜ್ಜಿನಿಂದಲೇ ಕೇಳುತ್ತಿದ್ದ. 
ಪ್ರಶಾಂತನ ಪಂಚಾಂಗದ ಗುರುತುಗಳೂ ಶೈಲೇಶನಲ್ಲಿ ಕುತೂಹಲವನ್ನು ಹುಟ್ಟಿಸಿದವು. ಅಜ್ಜನ ಕಲೆ , ಬುದ್ದಿಮತ್ತೆ ಸಿದ್ಧಿಯಾದದ್ದು ಸಂತೋಷವೆನಿಸಿತು. ಮೂರು ವರ್ಷದ ಹಿಂದಿನ ಪಂಚಾಂಗದಲ್ಲಿ ಕಣ್ಣಾಡಿಸಿದಾಗ "ಕುರುಂಬಿಲಜ್ಜನವರು ತೀರಿಕೊಂಡದ್ದು " ಎಂದು ಎಪ್ರಿಲ್ ೨೦ನೇ ತಾರೀಕಿಗೆ ಗುರುತಾಗಿದ್ದು ಕಂಡುಬಂತು.
****

Sunday, February 9, 2014

ಪ್ರೀತಿ - ಆಸರೆ

ಪ್ರೀತಿ - ಆಸರೆ 

ಮೊಗ್ಗಾಗಿ ತೂಗಿದ ಸಣ್ಣಬಳ್ಳಿ  
ಆಸರೆಯ ಪ್ರೀತಿಯಲಿ ಮರವನ್ನಪ್ಪಿದೆ 
ಹಿಗ್ಗಿಗ್ಗಿ ಏರುತ್ತ ಬಳಸಿದೆ 
ಪ್ರೀತಿಯನು ಹುಡುಕುತ್ತ ಮತ್ತೆ ಆಸ್ವಾದಿಸುತ್ತಾ !

ಕಿರುಬೆರಳ ಅಮ್ಮನ ಕೈಗೆ ಸಿಕ್ಕಿಸಿ 
ಧಾರೆ ಪಡೆದ ವಾತ್ಸಲ್ಯ 
ಹೆಗಲೇರಿ ಬೆನ್ನೇರಿ ಕುದುರೆಯಾಟದ ಅಪ್ಪ 
ಉಪ್ಪು ತಂದ ಕಂದನಾಟದ ಅಣ್ಣ ಅಕ್ಕ !

ಕೇಕೆ ಆಟದ  ಪುಸ್ತಕಗಳ ನಡುವೆ   
ಸಿಕ್ಕಿದ ಕಣ್ಣ ಮುಚ್ಚಾಲೆ ಗೆಳೆಯರ ಬಣ 
ಬಣ್ಣದ ಕನಸುಗಳ ರೆಕ್ಕೆ ಕಟ್ಟಿ ಹಾರುತಿದ್ದ ಕ್ಷಣ 
ಸ್ನೇಹದ ಕಡಲಲ್ಲಿ ಮಿಂದೇಳುವ ಸಣ್ಣಕ್ಕಿ ಬಳಗ 

ಇನ್ನೇನೂ ಓಡಿದ ಹರೆಯ ಹಿಡಿತಕ್ಕೆ ಬಾರದ ವಯಸ್ಸು    
ಹಿರಿಯರು ಸೇರಿ ಸಂಪ್ರದಾಯಕ್ಕೆ ಮಾಡಿದ ಮದುವೆ 
ಮತ್ತೆ ಅಸ್ತಿತ್ವ ಕಳೆದು ಹೊಸ ಪ್ರೀತಿಯ ಹುಡುಕಾಟ 
ಏರು ಲತೆಯು ಆಸರೆಯ ಪಡೆದಂತಹ ಭಾವ !

ಬಳ್ಳಿಗೊಂದು ಹೂವು ಅರಳಿ 
ಕಂದ ನಗುತ ಹರುಷ  ಚಿಮ್ಮಿ 
ಮತ್ತೆ ಮಡಿಲ ಆಸರೆ .... 
ಒಡಲಗೊಂಡಿದೆ ಪ್ರೀತಿ ಆಸರೆ !

- ಅಶೋಕ್ ಕುಮಾರ್ ವಳದೂರು  ( ಅಕುವ)

Tuesday, January 21, 2014

ಸಂಘರ್ಷ

ಸಂಘರ್ಷ 

ಇಂದು ನಿನ್ನೆಗಳದಲ್ಲ ಇದು 
ಹುಟ್ಟು ಸಾವೆಂಬ ಭವ -ಭಯ 
ಮೊಳಕೆಗೆ ಝರಿ ನೀರಲಿ 
ಕೊಳೆಯುವ ಕಳೆಯುವ ಅಂಜಿಕೆ  

ಮೊಣಕಾಲೂರಿ ದೈನನಾಗಿ 
ಪ್ರಪಂಚ ನೋಡಿದಂದಿನಿಂದ 
ಸಾಧನೆಯ ಹುಚ್ಚು ಮೇಲೇರುವ ಕೆಚ್ಚು 
ಅಂದೇ ಶುರುವಾಯಿತು ನೋಡಿ ಸಂಘರ್ಷ !

ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು 
ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು 
ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು 
ಜರ್ಜರಿತ  ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !

ಬೇಸರಾಗಿ  ಬೇಡದ  ಜೀವಕ್ಕೆ  
 ಸಮಾಜ ಕಟ್ಟಿದ್ದ ಸಂಗಾತಿ 
ಹೊಸ ಜೀವ ಹೊಸ ಮೋಡಿ 
ಬೆಂಬಿಡದ ಸಂಸಾರ ಮತ್ತೊಂದು ಸಂಘರ್ಷ !

ಸುಸ್ತಾಗಿ ದುಸ್ತರದಿ ಸುಮ್ಮನಿರಲು 
ಮುತ್ತಿಟ್ಟ ನಿವೃತ್ತಿ ! 
ಬೆಂಬಿಡೆನೆಂದು ಮತ್ತೆ ಹಿಂಬಾಲಿಸಿದೆ 
ಜೀವನವನ್ನು ರೂಪುಗೊಳಿಸಿದ .... 
ಸ್ವರೂಪಗಳ ಬದಲಿಸಿ ನಿಂತ ಅದೇ ಸಂಘರ್ಷ  !!


-  ಅಶೋಕ್ ಕುಮಾರ್ ವಳದೂರು ( ಅಕುವ )

ವೃದ್ಧಾಶ್ರಮ

ವೃದ್ಧಾಶ್ರಮ 

ಎಪ್ಪತ್ತರ ಹರೆಯದ ಮುದಿಕಂಗಳಲ್ಲಿ 
ಇನ್ನೂ ಉಳಿದಿದೆ ದೃಷ್ಟಿಯೆಂಬ ಬೆಳಕು 
ಆಶ್ರಮದ ಗೇಟು ಬಳಿ ನಿಂದು ದಾರಿ ಕಾಣಲು 
ದೂರದೂರಿಂದ ಬರುವ ಮನೆಯ ಅತಿಥಿಗೆ !

ಮೆಲ್ಲಗೆ ಸುರಿದ ಕಣ್ಣೆವೆಯ ಹನಿಗಳು 
ಮನದಾಳದ ಮಂಥನದ ಕಲಹವ
ಜತನದಿಂದ ಕಥೆಯಾಗಿ ಬಿತ್ತರಿಸಿದೆ !

ಪರಿವೆಯಿಲ್ಲದೆ ಕಳೆದ ಸಂತಸದ ಕ್ಷಣಗಳು
ಒಲವಿನಲ್ಲಿ ಹಾಡಿದ ನಂಟಿನ ಪದಗಳು
ಚಿಗುರೊಡೆದ ಲಲನೆಯ ಕೂಸುಗಳು
ತ್ಯಾಗ ಸಮರ್ಪಣೆಯ ಉದಯರಾಗಗಳು
ಸಾಲದುದಕ್ಕೆ ಸಾಲದ ಭಾರೀ ಹೊರೆಗಳು !

ಇಂದು ಮಾತಿಲ್ಲ ಎಲ್ಲಾ ಮೌನ ! ಒಳಗೊಳಗೆ ಗೌಣ
ಸುಗ್ಗಿಯ ಹಾಡಿಲ್ಲ , ಹಿಗ್ಗಿನ ಕುಣಿತವಿಲ್ಲ
ಗಾಂಭೀರ್ಯದ ಹೆಜ್ಜೆ ಇಲ್ಲ ಮಾಧುರ್ಯದ ಸ್ವರವಿಲ್ಲ
ಹಚ್ಚಿ ಮಾತಾಡಲು ಅಚ್ಚುಮೆಚ್ಚಿನವರಿಲ್ಲ !

ಅಕ್ಕರೆಯ ನುಡಿಯೊಂದು ಒಪ್ಪೊತ್ತು ಸಾಕೆಂದೆ
ತ್ರಾಣವಿಲ್ಲದ ಮೈಗೆ ಊರುಗೋಲು ಅದೆಂದೆ
ದೂಡಿದರು ದೂರದ ವಾಸಕೆ...ಅಪಹಾಸ್ಯಕೆ
ತಬ್ಬಿ ಮುದ್ದಾಡುವ ಹೃದಯ ಬೇಕೆಂದೆ !

ನಿನ್ನವರ  ನೀನೆಂದೂ ಜರೆಯಲಿಲ್ಲ
ಕಾಲವನ್ನೇ ಕೆಟ್ಟದೆಂದೆ...ಕಾಲವೇ ಕೆಟ್ಟಿತ್ತೆಂದೆ!
ಇಂದಾದರೂ ಬರುವನೆಂದು.....
ಕದಡದೆ ನಿಂದೆ ಆಶ್ರಮದ ಬಾಗಿಲೊಳು..........!

- ಅಶೋಕ್ ಕುಮಾರ್ ವಳದೂರು (ಅಕುವ)

ನಿನ್ನದೇ ನಿರೀಕ್ಷೆಯಲಿ.......

ನಿನ್ನದೇ ನಿರೀಕ್ಷೆಯಲಿ.......
 ಸೋಜಿಗವದು ನೀ ನನಗೊಲಿದ ಪರಿ
ಸೋಕುವ ಚಳಿಗಾಲವು ಅಲ್ಲ ಆಗ
ಇನ್ನೇನೋ ವಸಂತನು ಬಂದಿರಲಿಲ್ಲ
ಹುಣ್ಣಿಮೆಯ ಚಂದಿರನು ಕರೆದಿರಲಿಲ್ಲ
ಇಬ್ಬನಿಯು ಜೇನಾಗುವ ಹೊತ್ತು
ಉದ್ಭವಿಸಿದೆ ನೀನು !

ಇಳಿದು ಬಂದೆಯೋ ಸೆಳೆದುಕೊಂಡೇನೋ ತಿಳಿಯೇ
ವೇಗದಲ್ಲಿ ಧುಮುಕಿದ ನಿನ್ನ ಎದೆಗಪ್ಪಿಕೊಂಡೆ
ಸಾಗರವ  ಬಯಸದೆ ನನ್ನೊಳಗೆ ಮನೆಮಾಡುವೆನೆಂದೆ
ಮನದ ಸರೋವರದಲಿ ತೊರೆ ತೊರೆಯಾಗಿ ತುಂಬಿಕೊಂಡೆ

ನಿನ್ನಾಳದಲಿ ನಾ  ದಿನ ಮಿಂದೆ..ತೇಲಾಡಿದೆ..ಈಜಾಡಿದೆ
ಲೀಲಜಾಲದಲಿ ವಿಹರಿಸಿದೆ..ನಿನ್ನಲ್ಲೇ ಪಸರಿಸಿದೆ
ಸುಪ್ತಳಾಗಿ ಆವರಿಸಿ ಗುಪ್ತಗಾಮಿನಿಯಾದೆ
ಗುಟ್ಟು ಬಚ್ಚಿಡಲು ಮನಸ್ಸು ಹೊಕ್ಕು ಕುಕ್ಕಿದೆ
ಹಿಗ್ಗಿನಲಿ ತುಳುಕುತಿದ್ದೆ !.

ನಿನ್ನ ಹರಿವು ನಿಲ್ಲಲಿಲ್ಲವೋ ನನ್ನ ಕಟ್ಟೆಯಲ್ಲಿ ಬಿರುಕೋ
ಮೆಲ್ಲನೇ ಸೋರಿದುದು ತಿಳಿಯಲೇ ಇಲ್ಲ !
ಸುಳಿವಿಲ್ಲದೇ ನೀ ಬತ್ತುತ್ತಿರೆ !

ಇಂದೇಕೋ ನಿನ್ನಯ ಬರವೇ ಇಲ್ಲ
ಗೆಜ್ಜೆ ಸದ್ದೇ ಇಲ್ಲ  ಲಜ್ಜೆಯ ನೋಟವೇ ಇಲ್ಲ
ಸದ್ದಡಗಿದೆ ಗುನುಗುಡುವ ಮನಸ್ಸು ಸ್ತಬ್ಧ
ಹಿತವೆನಿಸಿದ ಒಂದೊಂದು ಗಳಿಗೆ ಇಂದು ಅಹಿತವೇ?

ಎಂದಾದರೊಂದುದಿನ ಮನ ಬದಲಿಸಿ ಬರುವೆ
ಮತ್ತೆಲ್ಲಾ ನೆನಪುಗಳ ಮೂಟೆ ಹೊತ್ತು ತರುವೆ
ಸಿಕ್ಕುಗಳ ಬಿಡಿಸುತ್ತಾ ಸಗ್ಗದಲ್ಲಿ ಒಂದಾಗಲಾದರೂ
ಬರುವೆ....ಸುಗ್ಗಿಯಲಿ ಕಾಯುವೆ !

 -ಅಶೋಕ್ ಕುಮಾರ್ ವಳದೂರು (ಅಕುವ)

ಹೋರಿ ತಂದ ಕಥೆ

ಹೋರಿ ತಂದ ಕಥೆ
          "ಸುಧೀರಣ್ಣ ತೀರಿ ಕೊಂಡ" ಅಮ್ಮನ ಫೋನ್ ಬಂದಾಗ ತುಂಬಾ ಸಂಕಟ ಪಟ್ಟಿದೆ. ಬೇಸಾಯವನ್ನು ಪ್ರೀತಿಸಿದ ವ್ಯಕ್ತಿತ್ವ ಅದು.ಬಿಸಿಲು ಮಳೆಗಳು ಎಂದೂ ಆತನನ್ನು ಮುಟ್ಟಿದ್ದಿಲ್ಲ. ಚಳಿ ತಟ್ಟಿದ್ದಿಲ್ಲ. ಅದು ಮನೆಯ ಬೇಸಾಯದ ಕೋಣಗಳೇ ಆಗಲೀ ಕಂಬಳದ ಕೋಣಗಳೇ ಆಗಲಿ ಈತನಿಗೆ ಬಗ್ಗದೆ ಇರಲಿಲ್ಲ. ಕಂಬಳದ ಕೋಣನ ಕೊಂಬು ತಲೆಯ ನೆತ್ತಿಗೆ ಇರಿದಾಗ ರಕ್ತ ಹೋದದ್ದು ತಿಳಿಯಲಿಲ್ಲ. ಲೇಪದಲ್ಲೇ ಗುಣವಾದ ಗಾಯ ಮತ್ತೆ ಒಳಗೊಳಗೆ ಇಳಿದದ್ದು ಗೊತ್ತಾಗಲಿಲ್ಲ. ಮೊದ ಮೊದಲು ತಲೆನೋವಿದ್ದ ಅವರು ಮಣಿಪಾಲ ಆಸ್ಪತ್ರೆ ಸೇರಿದಾಗ ಪರಿಸ್ಥಿತಿ   ಕೈ ಮೀರಿ ಹೋಗಿತ್ತು. ಕೊನೆಯ ಸಲ ನನ್ನ ಭೇಟಿಯಲ್ಲಿ ಅವರ ಮೀಸೆಯಡಿಯ ನಗು ಮಾತ್ರ ನೆನಪಿದೆ. ಅವರೊಂದಿಗಿನ ಒಡನಾಟದ  ಒಂದು ಘಟನೆ ಎಂದಿಗೂ ಮರೆಯುವಂತದ್ದಲ್ಲ.
          ಅದಿನ್ನೇನೋ ನಾವು ಹೈಸ್ಕೂಲ್ ನಲ್ಲಿದ್ದ ದಿನ .ಬೇಸಾಯ ಎಂದರೆ ಒಂದು ಥರ ಥ್ರಿಲ್ ಇದ್ದ ದಿನಗಳು. ಊರಿನ ಎಲ್ಲರ ಮನೆಯಲ್ಲೂ ಒಂದು ಜೋಡಿ ಕೋಣ ಇದ್ದಿತ್ತು. ಸಾಗುವಳಿ ಮಾಡಲು ಅವರಿವರ  ಕೋಣದ ಬಾಲ ಹಿಡಿಯಬೇಕಾಗಿತ್ತು. ನಾನು ಮತ್ತು ತಮ್ಮ ಸುಕೇಶ ಆಗಲೇ ನಮ್ಮ ತಂದೆಗೆ ಹೇಳಿ "ಈ ಸಲ ಹೋರಿ ತರೋಣ " ಎಂದು ಹಟಹಿಡಿದೆವು. ಮುಂದಿನ ಮಳೆಗಾಲಕ್ಕೆ ಖಂಡಿತ ಅಂಥ ಹೇಳಿದ ಮೇಲೆ ನಾವು ಸುಮ್ಮನಾದೆವು. ಬೇಸಗೆ ಕಳೆಯಿತು.  ಕೊಟ್ಟಿಗೆ (ಹಟ್ಟಿ) ರೆಡಿಯಾಯಿತು. ತಾಳೆ ಮರದ ತಟ್ಟಿ ಕಟ್ಟಿ ಕೂಡಾ ಆಯಿತು. ಕೊಟ್ಟಿಗೆಯು ಹೋರಿಗಳ ಆಗಮನಕ್ಕೆ  ಸಿದ್ಧವಾಗಿ ನಿಂತಿತು. ಮೇ ತಿಂಗಳ ಕೊನೆ ದಿನಗಳಲ್ಲಿ ಮಳೆ ಕೂಡಾ ಚೆನ್ನಾಗಿ ಬಿತ್ತು. ನೇಜಿಯ ಗದ್ದೆಯನ್ನು ಶೀನ ಮಾವನವರ ಕೋಣಗಳಿಂದ ಹದ ಮಾಡಿದ್ದಾಯಿತು. ನೇಜಿಗೆ ಬಿತ್ತಿದ್ದು ಕೂಡಾ ಆಯಿತು. ಹೋರಿಗಳು ಮಾತ್ರ ಹಟ್ಟಿ ಸೇರಿರಲಿಲ್ಲ. ಹುಡುಕಾಟ ನಡೆದೇ ಇತ್ತು . ವ್ಯವಹಾರ ಕುದುರುತ್ತಿತ್ತು. ಮುರಿಯುತಿತ್ತು .ಆದರೆ ಏನೇನೋ ಕಾರಣ ಒಡ್ಡಿ  ಚಂದ್ರನಗರ ಸೂಫಿ ಸಾಯಿಬ ಮುಂಗಡ ವಾಪಾಸ್ಸು ತಂದು ಕೊಡುತ್ತಿದ್ದ. ಒಟ್ಟಾರೆ ಹೋರಿ ಕಟ್ಟುವ ಕನಸು ಅಣ್ಣ ತಮ್ಮಂದಿರ ಕಣ್ಣಲ್ಲಿ ಕನಸಾಗೇ ಉಳಿದಿತ್ತು.!

       ಆವಾಗ ಒಂದು ಘಟನೆ ನಡೆಯಿತು. ಅಪರೂಪಕ್ಕೆ ಅತ್ತೆಯ ಮನೆಗೆ ಬರುವ ನಮ್ಮ ದೊಡ್ಡಮ್ಮನ ಮಗಳ ಗಂಡ ಜಯ ಭಾವ ಬಂದಿದ್ದರು. ಅವರಿಗೂ ನಮ್ಮ ಹೋರಿ ಹುಡುಕಾಟದ ಸುದ್ದಿ ಕಿವಿಗೆ ಬಿತ್ತಿತ್ತು. ಸುಧೀರಣ್ಣ (ದೊಡ್ಡಮ್ಮನ ಮಗಆಗಲೇ ತಿಳಿಸಿಯಾಗಿತ್ತು.ಅವರು"ನಮ್ಮ ನಂದಿಕೂರಿನ ಪುಣ್ಕೆದಡಿ ಆನಂದನಲ್ಲಿ  ಒಂದು ಜತೆ ಹೋರಿ ಇದೆ ,ನೀನು ಮತ್ತು ಸುಧೀರ ಬನ್ನಿ ಅಂತ" ಹೇಳಿ ಹೋದರು. ಅದೇ ರಾತ್ರಿ ಸುಧೀರಣ್ಣನ ಜೊತೆಯಲ್ಲಿ ನಾವಿಬ್ಬರೂ ನಂದಿಕೂರಿಗೆ ಹೋದೆವು.ಅಂದು ರಾತ್ರಿ ಅಲ್ಲಿಯೇ ಇದ್ದೆವು. ಮುಂಜಾನೆ ಹುಲ್ಲು ಮೇಯಲು ಕಟ್ಟಿದ್ದ ಎರಡು ಹೋರಿಗಳನ್ನು ನಮಗೆ ತೋರಿಸಿದರು. ನನಗೆ ಖುಷಿಯಾಯಿತು. ವ್ಯವಹಾರ ಕುದುರಿಸುವಂತೆ ಹೇಳಿ ಹಿಂತಿರುಗಿದೆವು. ಅಂದು ಅಲ್ಲಿ ಕಂಡ ಹೋರಿಗಳು ನಮ್ಮ ಕಣ್ಣಲ್ಲಿ ಮನೆ ಮಾಡಿದವು. ಒಂದು ಕಪ್ಪು ಕೊಂಬು ಬಾಗಿದ ಹೋರಿ. ಇನ್ನೊಂದು ಕೆಂಪು ಮೈಯ ಸದೃಢ ಹೋರಿ. ಸಂಜೆ ಮನೆಗೆ ಬಂದು ಅಪ್ಪ ಅಮ್ಮನಿಗೆ ವಿಷಯ ತಿಳಿಸಿದೆವು. ಖುಷಿಯೊಡನೆ ಹಟ್ಟಿ ತುಂಬುವ ಸಂಭ್ರಮ ನಮ್ಮದಾಯಿತು!.

       ನಾವೊಂದು ಎಣಿಸಿದರೆ ವಿಧಿ ಇನ್ನೊಂದು ಬಗೆಯುತ್ತದೆ ಅನ್ನುತ್ತಾರೆ. ಹಣ ಎಲ್ಲಾ ಸೇರಿಸಿಕೊಂಡು ಒಂದು ಎರಡು ದಿನ ಕಳೆದು ತಂದೆನಾನು ಮತ್ತು ತಮ್ಮ ಜಯ ಭಾವನವರ ಮನೆಗೆ ಹೋಗಿದ್ದೆವು. ಅಷ್ಟರಲ್ಲಿ ಒಂದು ನಿರಾಶೆ ನಮಗೆ ಕಾದಿತ್ತು. ಪುಣ್ಕೆದಡಿ ಆನಂದ ಹೋರಿಗಳನ್ನು ಆಗಲೇ ಪಡುಬಿದ್ರಿಯ ಇಮ್ತಿಯಾಜ್ ಬ್ಯಾರಿಗೆ ರೇಟ್ ಮಾಡಿ ಆಗಿತ್ತು. ಇಮ್ತಿಯಾಜ್ ಈಗಾಗಲೇ ಆನಂದನಿಗೆ ಎಲ್ಲಾ ಹಣ ಕೊಟ್ಟಾಗಿತ್ತು. ಭಾಷೆ ಮುರಿಯಲಾಗದೆ ಆನಂದ ನಮ್ಮನ್ನು ನಿರಾಶೆಯಿಂದಲೇ ಬೀಳ್ಕೊಟ್ಟ. ಇನ್ನೂ ಏನೂ ಮಾಡುವ ಹಾಗೆ ಇರಲಿಲ್ಲ. ಆದರೂ ತಮ್ಮ ಮತ್ತು ನನಗೆ ಇನ್ನೊಮ್ಮೆ ಆ ಹೋರಿಗಳನ್ನು ನೋಡಿಕೊಂಡು ಬರುವ ಆಶೆಯಾಯಿತು. ಆನಂದನ ಹಟ್ಟಿಯ ಕಡೆ ಜಯಭಾವ ನಮ್ಮನ್ನು ಕರೆದುಕೊಂಡು ಹೋದರು. ಎರಡು ಹೋರಿಗಳ ತಲೆ ನೇವರಿಸಿ ಬೇಸರದಿಂದ ನಾವು ಅಲ್ಲಿಂದ ಕಾಲ್ಕಿತ್ತೆವು !.

       ಮುಂಗಾರು ಚುರುಕಾಯಿತುಜೂನ್ ಬಿಡದೆ ಮಳೆರಾಯ ಗರ್ಜಿಸಿದನಿಧಾನವಾಗಿ ಸಾಗುವಳಿ ಶುರುವಾಯಿತುಶೀನ ಮಾವನ ಕೋಣಗಳು ನಮ್ಮ ಗದ್ದೆಯ ಸಾಗುವಳಿ ಮಾಡಿದವು.ಸುಧೀರಣ್ಣನ ಹಲಗೆ ನಮ್ಮ ಗದ್ದೆಯ ತುಂಬಾ ಓಡಾಡಿದವು.ಅಂತೂ ಕಾರ್ತಿ ಬೆಳೆ ಮುಗಿದಿತ್ತುಅಗಸ್ಟ್ ತಿಂಗಳುನಾಗರಪಂಚಮಿಯ ದಿನ ಜಯಭಾವನವರು ಮನೆ ಕಡೆ ಬಂದಿದ್ದರುಒಂದು ಸುದ್ದಿಯನ್ನು ಮುಟ್ಟಿಸಿದರುಇಮ್ತಿಯಾಜನಿಗೆ ಮಾರಿದ್ದ ಹೋರಿಗಳು ಇಮ್ತಿಯಾಜ್ ನ ಕೈಯಿಂದ ಓಡಿ ಹೋಗಿದ್ದವು . ಸುಮಾರು ಒಂದೂವರೆ ತಿಂಗಳು ಎಲ್ಲೂ ಸಿಗದ ಹೋರಿ ಮತ್ತೆ ಜಯಭಾವನವರ ಗದ್ದೆಯಲ್ಲಿ ಹುಲ್ಲು ಮೇಯುತ್ತಿದ್ದವುಪಡುಬಿದ್ರಿಯಲ್ಲಿ ಸ್ಕೂಟರ್ ಆಕ್ಸಿಡೆಂಟ್ ನಲ್ಲಿ ಕಾಲಿಗೆ ಪೆಟ್ಟಾದ ಇಮ್ತಿಯಾಜ್ ಉಡುಪಿಯ ಅಜ್ಜೆರಕಾಡ್ ಆಸ್ಪತ್ರೆಯಲ್ಲಿ ಎಡ್ಮಿಟ್ ಇದ್ದಾನೆಅವನ ಮಕ್ಕಳು ಇನ್ನು ಸಣ್ಣವರು ಸದ್ಯಕ್ಕೆ ಇಮ್ತಿಯಾಜ ನ ವ್ಯವಹಾರ ನಿಂತು ಹೋಗಿದೆ.
ಹೋರಿ ಗಳನ್ನು ತಮ್ಮ ಲಚ್ಚಿಲ್ ನಲ್ಲಿ ಹುಲ್ಲು ಮೇಯಿತ್ತಿದ್ದದನ್ನು ಕಂಡ ಜಯ ಭಾವ ಆನಂದನ ಮನೆಗೆ ಹೋಗಿ ಮಾರಿದ್ದನ್ನು  ಮತ್ತೊಮ್ಮೆ ದೃಢ ಮಾಡಿಕೊಂಡರುಆನಂದ "  ಹೌದು ಜಯ , ಒಂದೂವರೆ ತಿಂಗಳಾಯಿತು "ಎಂದಾಗ ಒಳಗೊಳಗೆ ಖುಷಿಪಟ್ಟರುಒಂದು ದಿನ ಬೆಳ್ಳಗ್ಗೆ ಜಯಭಾವ ಗದ್ದೆಗೆ ನೀರು ಅಡ್ಡ ಹಾಕಲು ಹೋದಾಗ ಕೆಂಪು ಹೋರಿ ಗದ್ದೆಯ ಪಕ್ಕದ ಲಚ್ಚಿನಲ್ಲಿ ಮಲಗಿತ್ತು . ಇವರು ಹತ್ತಿರ ಹೋದಾಗ ಒಂದೇ ನೆಗೆತಕ್ಕೆ ಓಡಿಹೋಯಿತು.

       ಭಾವ ನಮ್ಮನ್ನು ಕರೆದು ಉಪಾಯ ಮಾಡಿದರುಒಂದು ವೇಳೆ ಎರಡು ಹೋರಿಗಳು ಸಿಕ್ಕರೆ ನೀವು ಅವುಗಳನ್ನು ಕೊಂಡು ಹೋಗಬಹುದುಆದರೆ ಅವುಗಳನ್ನು ಹಿಡಿಯುವುದು ಹೇಗೆ ಎಂಬುದೇ ಪ್ರಶ್ನೆಯಾಯಿತು.ಕತ್ತಿನಲ್ಲಿ ಒಂದು ಹಗ್ಗ ಕೂಡಾ ಇರಲಿಲ್ಲಒಂದು ಸಿಕ್ಕಿ ಇನ್ನೊಂದು ಸಿಗದಿದ್ದರೆ ಪ್ರಯೋಜನವಿಲ್ಲ!.  ಜಯಭಾವನ ತಲೆ ಓಡತೊಡಗಿತುನಮ್ಮನ್ನು ಶಾಲೆಯಿಂದ ನೇರವಾಗಿ ನಂದಿಕೂರಿಗೆ ಕರೆಸಿ ಕೊಂಡರು.ನಾನುತಮ್ಮ ಮತ್ತು ಸುಧೀರಣ್ಣ ನಂದಿಕೂರಿಗೆ ಹೋಗುವ ಅಮರ್ಜ್ಯೊತಿ ಬಸ್ಸು ಹಿಡಿದೆವುರಾತ್ರಿ ಭಾವನವರ ಮನೆಯಲ್ಲಿ ಎತ್ತುಗಳನ್ನು ಹಿದಿಯುವ ಬಗೆಗಿನ ನಾನಾ ಚರ್ಚೆಯಾಯಿತುಬೆಳ್ಳಗ್ಗೆ ಲಚ್ಚಿಲ್ ನಲ್ಲಿ ಹುಡುಕಾಡಿ ಗುಡ್ಡೆಗಳಲ್ಲಿಗೋಳಿಮರದ ಅಡಿಯಲ್ಲಿ ನೋಡ ತೊಡಗಿದೆವುಇದಕ್ಕಿದ್ದಂತೆ ಕೆಂಪು ಹೋರಿ ಕುಂಟುತ್ತಾ ಲಚ್ಚಿಲಲ್ಲಿ ಕಾಣಿಸಿತುಬಹುಷಕಾಲಿಗೆ ಮುಳ್ಳು ಚುಚ್ಚಿರಬೇಕು .ನಾವು ನಾಲ್ಕು ಮಂದಿ ಅಡ್ಡಕಟ್ಟಿದಾಗ ಸುಲಭವಾಗಿ ಸಿಕ್ಕಿತ್ತುಸುಧೀರಣ್ಣ ಹಗ್ಗ  ಕೊರಳಿಗೆ ಬಿಗಿದು ಎಳೆದು ತಂದು  ಭಾವನ ಮನೆಯ ಹಟ್ಟಿಯಲ್ಲಿ ಕಟ್ಟೀ ಹಾಕಿದೆವುಕಾಲಿಗೆ ಶುಶ್ರೂಷೆ ಮಾಡಿ ಬಟ್ಟೆ ಕಟ್ಟಿದ್ದೆವು.ತುಂಬಾ ಸಾಧು ಸ್ವಭಾವದ ಹೋರಿ.ಬೇಗನೆ ಹೊಂದಿ ಕೊಂಡಿತ್ತು.

       ಇನ್ನೂ ಕೊಂಬು ಬಾಗಿದ ಕಪ್ಪು ಹೋರಿಯ ಹುಡುಕಾಟ ಶುರುವಾಯಿತುಸತತ ಎರಡು ದಿನವಾದರೂ ಅದರ ಸುಳಿವು ಇರಲಿಲ್ಲ.ಅಂದು ಶನಿವಾರ ಮಧ್ಯಾಹ್ನ ರಜೆಯಾದರಿಂದ ಬೇಗನೆ ನಾವು ಬಂದಿದ್ದೆವುಗುಡ್ಡ ಹುಡುಕಾಡುವಾಗ ಸುಧೀರಣ್ಣನ ಕಣ್ಣಿಗೆ ಕಪ್ಪು ಹೋರಿ ಕಂಡಿತು.ಆಗ ಅದನ್ನು ಹಿಡಿಯುವ ಸಮಯವಲ್ಲವಾದ್ದರಿಂದ ರಾತ್ರಿಗಾಗಿ ಕಾಯಬೇಕಾಯಿತುಗೋಳಿ ಮರದಡಿಯಲ್ಲಿ  ಅದು ಮಲಗುವ ಜಾಗದ ಪತ್ತೆ ಹಚ್ಚಿದೆವುರಾತ್ರಿ ಊಟ ಮುಗಿದು ಸುಮಾರು ೮ ಗಂಟೆ ರಾತ್ರಿಯ ಹೊತ್ತಿಗೆ ಗುಡ್ಡೆಯ ಕಡೆ ನಮ್ಮ ಸವಾರಿ ನಡೆಯಿತುಹೆಚ್ಚು ಸದ್ದಿಲ್ಲದೆ ಹೋದರೂ ಕಪ್ಪು ಹೋರಿ ನಮ್ಮ ವಾಸನೆಗೆ ದಢ್ ಅಂತ ಎದ್ದಿತು.ಇನ್ನೇನೂ ಓಡುವಷ್ಟರಲ್ಲಿ ಸುಧೀರಣ್ಣ ಅದರ ಕೊಂಬಿಗೆ ಹಗ್ಗ ಬೀಸಿದರುಅದು ಸಿಕ್ಕಿಹಾಕಿ ಕೊಂಡಿತುಸುಲಭವಾಗಿ ಕೈಗೆ ಸಿಕ್ಕಿ ಬಿಟ್ಟಿತುಜಯಭಾವನವರು ಇನ್ನೂ ಚುರುಕಾದರುಇವತ್ತೆ ರಾತ್ರಿ ನೀವು ಕರೆದುಕೊಂಡು ಹೋಗಿ ಎಂದರು.
       ನಾವು ಬೆಳ್ಳಗ್ಗೆ ಬೇಗ ಎದ್ದು ಹೊರಡುವ ಯೋಜನೆ ಮಾಡಿದ್ದೆವು.ಅದು ಆಗಸ್ಟ್ ತಿಂಗಳು ಮಳೆ ಇನ್ನೇನೂ ಇದ್ದೆ ಇತ್ತುಬೆಳ್ಳಿಗ್ಗೆ ೩ ಗಂಟೆಗೆ ಎದ್ದ ಭಾವನವರು ನಮ್ಮನ್ನು ಎಬ್ಬಿಸಿದರುಕಪ್ಪು ಚಾ ಮಾಡಿಕೊಟ್ಟು ಮೂವರಿಗೂ ಕುಡಿಸಿದರುಅಕ್ಕ ಮತ್ತು ಮಕ್ಕಳು ಇನ್ನು ನಿದ್ದೆಯಲ್ಲಿಯೇ ಇದ್ದರುಎರಡೂ ಹೋರಿಗಳ ಹಗ್ಗ ಹಿಡಿದು ಕೊಂಡು ನಾವು ನಂದಿಕೂರಿನ ಡಾಮರು ರೋಡಿನಿಂದ ಶಿರ್ವದ ಕಡೆ ನಡೆಯತೊಡಗಿದೆವುಮುಂದೆ ಸುಧೀರಣ್ಣ ಕಪ್ಪು ಹೋರಿಯ ಹಗ್ಗ ಹಿಡಿದರೆತಮ್ಮ ಕೆಂಪು ಹೋರಿಯ ಹಗ್ಗ ಹಿಡಿದಹಿಂದಿನಿಂದ  ನಾನು ಹಿಂದಿನಿಂದ ಹೋರಿಗಳನ್ನು ರಭಸವಾಗಿ ಹೆಜ್ಜೆ ಹಾಕುವಂತೆ ಬೆತ್ತ ಬೀಸುತ್ತ ಹುರಿದುಂಬಿಸುತ್ತಿದ್ದೆಒಂದು ಕೈಯಲ್ಲಿ ಕೊಡೆಇನ್ನೊಂದು ಕೈಯಲ್ಲಿ ಟಾರ್ಚು.  ರಾತ್ರಿಯ ಹೊತ್ತು ನಾಯಿಗಳ ಕೂಗಾಟ ಮತ್ತೊಂದು ಕಡೆಮುದರಂಗಡಿ ದಾಟುತ್ತಾ ಬಂದಂತೆ ನಾಯಿಗಳ ಕೂಗಾಟ ಹೆಚ್ಚಾಯಿತುಹೋರಿಗಳ ಗೆರೆಸೆ ಸಪ್ಪಳ್ಳಕ್ಕೆ ನಾಯಿಗಳು ಎಚ್ಚೆತ್ತಿದ್ದವುಮಳೆರಾಯ ಮಾತ್ರ ಹೆಚ್ಚಿಗೆ ಉಪದ್ರ ಕೊಡಲಿಲ್ಲಏನೋ ನಮ್ಮೊಡನೆ ಖುಷಿಯಾದಗಲೆಲ್ಲ ದೊಪ್ಪಂತೆ ಬೀಳುತ್ತಾ ನಿಲ್ಲುತ್ತಿದ್ದ.  ಸುಮಾರು ೭ ಗಂಟೆಯ ಹೊತ್ತಿಗೆ  ಇನ್ನೇನೊ ಸೂರ್ಯ ಏರಿರಲಿಲ್ಲ ಎರಡೂ ಹೋರಿಗಳು ನಮ್ಮ ಮನೆಯ ಪಟ್ಟಿ ಸೇರಿ ಆಗಿತ್ತುಆದಿತ್ಯನ ಹೊಸ ಕಿರಣಗಳೊಂದಿಗೆ ಹೋರಿಗಳು ಹೊಸ ಜಾಗವನ್ನು ಸೇರಿದವು.

       ಕಪ್ಪು ಹೋರಿಗೆ ಕೊಂಬು ಬಾಗಿದ್ದರಿಂದ ನಾವು ಪ್ರೀತಿಯಿಂದ ಬಾಚ ಎಂದು ಕರೆದೆವು . ಕೆಂಪು ಹೋರಿಗೆ ಮೈರ ಎಂದು ಹೆಸರಿಟ್ಟೆವು ಈ ಘಟನೆ ನಡೆದುದು ೧೯೯೫ ರ ಹೊತ್ತಿಗೆ ಅನಂತರ ಐದಾರು ವರ್ಷ ಹೋರಿಗಳು ನಮ್ಮ ಸಹಪಾಠಿಯಾಗಿದ್ದೆವುಅಂದಿನಿಂದ ನಾವು ಸ್ವತಂತ್ರವಾಗಿ ಬೇಸಾಯಮಾಡಿಕೊಂಡೆವುಹೆಚ್ಚುವರಿ ಗದ್ದೆಗಳನ್ನು ಹಿಡುವಳಿಯಾಗಿ ವಹಿಸಿಕೊಂಡೆವು ಕೂಡಾ . ಜಯಭಾವಸುಧೀರಣ್ಣನವರ ಉಪಕಾರ ಮರೆಯುವಂತಿಲ್ಲನಾನು ಮುಂಬೈಗೆ ಬಂದ ನಂತರ ೧೯೯೯ ನಂತರ ಎರಡು ವರ್ಷ ಈ ಹೋರಿಗಳು ಇದ್ದವುಅಸೌಖ್ಯದಿಂದ ಭಾಚ ಕೊನೆ ಉಸಿರು ಬಿಟ್ಟಾಗ ೨೦೦೦ ರಲ್ಲಿ ನಾನು ಕಣ್ಣೀರು ಹಾಕಿದ್ದೆನಂತರ ಒಂಟಿಯಾದ ಮೈರ ಬಡಕಲಾದಎಲ್ಲೋ ಬೇರಿನ ಎಡೆಗೆ ಸಿಕ್ಕಿಸಿಕೊಂಡ ನಂತರ ಏಳಲೇ ಇಲ್ಲ೨೦೦೧ ರಲ್ಲಿ ಅದನ್ನು ಸಮಾಧಿ ಮಾಡಿದ ತಮ್ಮ ಫೋನು ಮಾಡಿದಾಗ ಕಣ್ಣು ತೇವವಾಗಿತ್ತುಎಲ್ಲೋ ಇದ್ದ ಈ ಹೋರಿಗಳು ಯಾವ ಬಂಧನದಿಂದಲೋ ನಮ್ಮನ್ನು ಸೇರಿ ನಮ್ಮ ಸಾಧನೆಯ ಅಂಗವಾಗಿ ದೂರವಾಗಿ ಬಿಟ್ಟಿದ್ದವು.

       ಈ ಹೋರಿ ತಂದ ಕಥೆ ನೆನಪದಾಗಲೆಲ್ಲಾ ಮತ್ತೆ ಸುಧೀರಣ್ಣ ನೆನಪಾಗುತ್ತಾರೆಸುಧೀರಣ್ಣ ನೆನಪಾದಗಲೆಲ್ಲಾ ಈ ಶ್ರಮಜೀವಿಗಳು ನೆನಪಾಗುತ್ತವೆಶ್ರಮಕ್ಕೆ ಏನೂ ಬಯಸದ ಈ ಮೂವರು ಮತ್ತೆ ಮತ್ತೆ ನೆನಪಾಗುತ್ತಾರೆ.

ಅಶೋಕ್ ಕುಮಾರ್ ವಳದೂರ್ (ಅಕುವ)
20.12.2013

ಬೆಸೆಯೋಣ ಬನ್ನಿ

ಬೆಸೆಯೋಣ ಬನ್ನಿ 

ಅಧರ್ಮದ ಕೋಟೆಗಳ ಒ(ಹೊ)ಡೆಯ ಬನ್ನಿ 
ಜಾತಿಯ ಬೇಲಿಯ ಹಾರಿ ಬನ್ನಿ 
ಮನುಜ ಪಥಕೆ ನೀವು ಇನ್ನಾದರೂ ಬನ್ನಿ  !!
ಹರಿದೋಗಿರುವ ಸಂಬಧಗಳ ಬೆಸೆಯ ಬನ್ನಿ 
ನಿತ್ಯ ನೂತನ ದೇಶವ ಇನ್ನೊಮ್ಮೆ ಕಟ್ಟೋಣ ಬನ್ನಿ !!

- ಅಶೋಕ ಕುಮಾರ್ ವಳದೂರು  

Monday, January 20, 2014

ಬೊಳ್ಜೆ ಯ ನೆನಪು

ಬೊಳ್ಜೆ  ಯ ನೆನಪು 

ಬೊಳ್ಜೆ ನನ್ನ ಹುಟ್ಟೂರು. ನನ್ನ ಜನ್ಮ ವಳದೂರಿನಲ್ಲಿ ಆದರೂ ನನಗೆ ಬೊಳ್ಜೆಯ ನಂಟು ಜಾಸ್ತಿಯೇ. ಬಹುಶ: ಅದು  ನನ್ನ ತಂದೆ ಮನೆಯಾಗಿದ್ದರಿಂದ . ನಂದ ನಂತಹ ಸಹಪಾಠಿ ಸಿಕ್ಕಿದ್ದರಿಂದ. ನನ್ನ ಮೊದಲ ಕವಿತೆ "ನದಿ" ಯನ್ನು ನಾನು ಬರೆದದ್ದು ನನ್ನ ತಂದೆ ಮನೆ ಬೊಳ್ಜೆ ಯಲ್ಲಿ.  ತಂದೆ ಮನೆಯ ಎದುರಿಗೆ  ಹರಿಯುವ ತೊರೆಯೇ ನನ್ನ "ನದಿ". ಪಾದೂರಿನ ಗುಡ್ಡ-ಕಾಡು , ಬಂಡೆ ಹತ್ತಿದ ನನಗೆ ತಂದೆಯ ಊರು ಹಿಡಿಸಿದ್ದು ಎರಡು ಕಾರಣ ಗಳಿಂದ . ಒಂದು ತೆಂಗಿನ ಮರಗಳ ಕಾಡಿನ ತಂಪಾದ ವಾತಾವರಣ  ಬಯಲು ಗದ್ದೆ.  ಎರಡನೆಯದಾಗಿ ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಗಳಿಂದ. ನನ್ನಲ್ಲಿ ಕವಿ ಹುಟ್ಟಿ ಕೊಂಡದ್ದೇ ಅಲ್ಲಿ ನಡೆಯುತ್ತಿದ್ದ  ಭಜನೆ ಗಳಿಂದ  ಅನಿಸುತ್ತದೆ. ಗರಡಿ ಗದ್ದೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟ. ಕೇದಾರ್ ಬ್ರಹ್ಮಲಿಂಗೆಶ್ವರ ಸನ್ನಿಧಿಯ ವರುಷದ ಆಟಗಳು , ಮಂಗಲೋತ್ಸವಗಳು. ಲಕ್ಷ್ಮಿ ನಾರಾಯಣ ಭಜನಾ ಮಂಡಳಿಯ ನಗರ ಭಜನೆಗಳು ಇವೆಲ್ಲಾ ಒಟ್ಟಾರೆಯಾಗಿ ನನ್ನ ಸಾಹಿತ್ಯದ ಹುಚ್ಚನ್ನು ಹೆಚ್ಚಿಸಿವೆ. ಲಯ ಬದ್ಧವಾದ ಅವರ ಕುಣಿತ , ತಾಳವನ್ನು ನಾನು ಗಮನಿಸುತಿದ್ದೆ. ಅವರ ಭಜನೆಗಳಲ್ಲಿ ನಾನು ಹುಡುಕುತಿದ್ದದು ಸಾಹಿತ್ಯವನ್ನು ಮಾತ್ರ . 

ತಂದೆಯರೊಂದಿಗೆ ತಪ್ಪದೆ  ಯಕ್ಷಗಾನವನ್ನು ನೋಡಲು ಹೊಗುತ್ತಿದೆ. ಉಡುಪಿ ಮಠವನ್ನು  ಸುತ್ತು ಹಾಕುವುದು ನಮ್ಮಲ್ಲಿ ಒಂದು  ವಾಡಿಕೆಯಂತೆ ಬೆಳೆದಿತ್ತು. ಅಲ್ಲಿ ಹೋದಾಗಲೆಲ್ಲ ದಾಸರ ಕೀರ್ತನೆಯಾ ಪುಸ್ತಕವನ್ನು ತಪ್ಪದೆ ಕೊಂಡು ಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿತ್ತು . ಇದೇ ಮುಂದೆ ಮನೆಯಲ್ಲಿ  ಸಂಜೆ ಭಜನೆ ಹಾಡುವ ಪದ್ದತಿಯನು ರೂಢಿಸಿತು.ಇದರೊಂದಿಗೆ ತಾಳ ಕೂಡ ಮನೆಯ ದೇವರ ಸ್ಟ್ಯಾಂಡ್ ಕೆಳಗಡೆ ತೂಗಾಡ ತೊಡಗಿತು .

ರವಿವಾರ ರಜೆ ಬರಲು ನನ್ನ ಸವಾರಿ ಉದ್ಯಾವರ ದ ಬಸ್ಸು ಹಿಡಿಯುತ್ತಿತು. ರಸ್ತೆ ಉದ್ದಕ್ಕೂ ಮಾತಾಡುತ್ತ ಮನೆ ಸೇರುವಾಗಲೇ ಕತ್ತಲಾಗುತ್ತಿತ್ತು . ಗಾಳ ಹಾಕಿ ಮೀನು ಹಿಡಿಯುವ ಪಡ್ಡೆ ಹುಡುಗರ ಗುಂಪು ನಮ್ಮದಾಗುತಿತ್ತು . ಲಗೋರಿ ಆಟದ ಚಿನ್ನರ ಸಂತೆ ಕೆಲವೊಮ್ಮೆ . "ಅಂಡಿ" ಆಟದ ಕುಟ್ಟಿ-ದೊಣ್ಣೆ ಯಲ್ಲಿ  ಪೆಟ್ಟು ಮಾಡುವ ಹುಡುಗರಾಗುತ್ತಿದ್ದೆವು. ಗೇರುಬೀಜ , ತೆಂಡೊಲಿ ಗಳನ್ನೂ ಕಿಸೆಯಲ್ಲಿ ತುರುಕಿ ಕೊಂಡು ಹರಿದು ಕೊಂಡಿದ್ದೆವು. ಈ ಆಟದಲ್ಲಿ ನಂದನದು ಯಾವಾಗಲು ಮೇಲುಗೈ.  ಕ್ರಮೇಣ ಕ್ರಿಕೆಟ್ ಈ ಎಲ್ಲ ಆಟಗಳನ್ನು ನುಂಗಿ ಬಿಟ್ಟಿತ್ತು . 

ಜೀವನದ ಅನಿವಾರ್ಯತೆ ಉದರಪೋಷಣೆ  .  ಉದ್ಯೋಗದ  ಬೆನ್ನತ್ತಿದ ನಾವು ಪಟ್ಟಣವನ್ನು ಸೇರಿ ಬದುಕು ಯಾಂತ್ರಿಕ ವಾದಾಗ ಈ ನೆನಪುಗಳು ಕೊಡುವ ಸುಖ , ಖುಷಿ ಬೆಲೆ ಕಟ್ಟಲಾಗದ್ದು.    

            
- ಅಶೋಕ್ ಕುಮಾರ್ ವಳದೂರ್ (ಅಕುವ)

ದಾನಿಗಳೇ ..

ದಾನಿಗಳೇ ... 

ಬರಿಗೈಯಲ್ಲಿ ಕಳುಹಿಸಲಾಗದ ನನ್ನ 
ಸಮಾಜದ ಓಹೋ ದಾನಿಗಳೇ 

ದೇವರ  ಹೆಸರಲಿ ಹೇಸದೆ ಕೊಡುವಿರಿ 
ಸಾರ್ಥಕತೆಯ ಪಡೆಯದೇ ಇನ್ನೂ ಮಂಕಾಗಿರುವಿರಿ 
ದಟ್ಟನೆ ಸಭೆಯಲಿ ದಾನಿಯೆಂದು  ಕರೆದು ಕೊಂಬಿರಿ 
ಮತ್ತೆ ನಿನ್ನಲೇ ಕೇಳಿಕೋ ನೀ ದಾನಿಯೇ?

ನನ್ನೂರಿನ ರಸ್ತೆಗಳುದ್ದ  ಸ್ಮಾರಕ ತಂಗುದಾಣಗಳು
ಎದ್ದು ಕಾಣುವ ದೇವಾಲಯ ಸ್ವಾಗತ ಗೋಪುರಗಳು 
ರಸ್ತೆ ಗಳಿಗೆ   ಸ್ಮಾರಕ ಫಲಕಗಳು
ಜೀವಿತ ವಿಲ್ಲದ್ದ್ದಕ್ಕೆ ನಮ್ಮ ಸತ್ತ ನೆನಕೆಗಳು !!

ಹಳೆಗುಡಿ ದೇಗುಲಕ್ಕೆ  ನವೀಕರಣದ ಹೊದಿಕೆ 
ಸುರಿದಿದ್ದು ಕೋಟಿಗಳು 
ನೆವನ ಮಾತ್ರ ಮುಕ್ಕೋಟಿ ದೇವತೆಗಳು 
ಸುಲಿದದ್ದು ನನ್ನ ಸಮಾಜದ ದಾನಿಗಳು !!

ಕಾಣದ ದೇವರಿಗೆ ಮುಗಿ ಬೀಳುವಿರಿ 
ಧರ್ಮದ ಹೆಸರಲ್ಲಿ ಸುಮ್ಮನೆ ಸುರಿವಿರಿ 
ವಿದ್ಯೆಯೆಂಬ ಧರ್ಮಕ್ಕೆ ಮೋರೆ ಹೋಗಿ  
ಮಾನವ ಜೀವಿಗಳಿಗೆ ಆಸರೆಯಾಗಿ 
ದಾನಿಗಳ ಶ್ರಮ ಪೋಲಾಗದಿರಲಿ 
ನನ್ನ ಹಾರೈಕೆಗೆ ಸೋಲಾಗದಿರಲಿ 

ಓಹೋ ನನ್ನ ಸಮಾಜದ ದಾನಿಗಳೇ 
ಇನ್ನಾದಾರೂ ಎಚ್ಹೆತ್ತು ಕೊಳ್ಳಿ  !!

- ಅಶೋಕ್ ಕುಮಾರ್ ವಳದೂರ್ (ಅಕುವ)
20/12/2013

 

ಮೂಲ(ಭೂತ) ??

ಮೂಲ(ಭೂತ) ??

ಈ ದಿನ ದಿನಪತ್ರಿಕೆ ಓದುತಿದ್ದಾಗ  ಕಣ್ಣಿಗೆ ಬಿದ್ದ  ವಿಷಯದಲ್ಲಿ  ಒಮ್ಮೆ  ತಕಲಾಟ   ಶುರುವಾಯಿತು.  ನಮ್ಮ ಸಮಾಜದ ಘನವೆತ್ತ  ಸಂಸ್ಥೆಯ  ಶಾಲೆಯೊಂದು ಬೆಳ್ಳಿಹಬ್ಬ ವನ್ನು ಆಚರಿಸುವುದು ನಿಜವಾಗಿಯೂ ಹೆಮ್ಮೆ ಎನಿಸಿತು. ಅದರೊಟ್ಟಿಗೆ ನೋವಿನ ಇನ್ನೊಂದು ಎಳೆಯು ನನ್ನ ಮುಂದೆ ಹಾದು ಹೋಯಿತು. ನಾಣ್ಯದ ಎರಡೂ  ಮುಖವನ್ನು ಹೇಗೆ ನಾವು  ಏಕಕಾಲದಲ್ಲಿ ನೋಡಲಾಗುದಿಲ್ಲವೋ  ಅದೇ ರೀತಿ ಇಂತಹ ಸಂಭ್ರಮಗಳಲ್ಲಿ ಕೆಲವೊಮ್ಮೆ  ನೋವುಗಳು ನಮಗೆ ಕಾಣದೆ ಹೋದರೂ  ಖಂಡಿತ  ಮಾಸಿ ಹೋಗಿರುವುದಿಲ್ಲ . 

ಈಗ ಸುಮಾರು ಒಂದೂವರೆ  ವರ್ಷ ಕಳೆದಿದೆ. ಈ ಘನವೆತ್ತ ಶಾಲೆಯನ್ನು  ನನ್ನ ಜಾತಿ ಸಂಸ್ಥೆ ನಡೆಸಿಕೊಂಡು  ಬಂದಿದೆ ಎಂಬ ಅತಿ  ಪ್ರೀತಿಯಿಂದ ನನ್ನ ಸಹೋದರನ ಪುಟ್ಟ ಮಗುವನ್ನು ಅಲ್ಲಿನ ಕಿಂಡರ್  ಸೇರಿಸುವ ತಪ್ಪು ಮಾಡಿದೆ. ಮಗು  ಸರಿಯಾಗೇ  ಶಾಲೆಗೆ ಹೋಗುತಿತ್ತು . ಕಲಿಸಿದ್ದನ್ನು ಕರಾರುವಕ್ಕಾಗಿ ಟೀಚರ್ ಗೆ    ಹೋಗಿ ಒಪ್ಪಿಸುತ್ತಿತ್ತು. ಈ ಮಧ್ಯೆ  ಟೀಚರ್ ಬದಲಾಗುತ್ತಾಳೆ . ಅಥವ ಬದಲಿಸ್ಪಡುತ್ತಾಳೆ !! .  ಮಕ್ಕಳ ಕಲಿಕೆಯಲ್ಲಿ ಏರುಪೇರಾಗುತ್ತೆ . ಬಹುಶ: ಹೊಸ ಟೀಚರ್ ಗೆ   ಬೇಗ  ಹೊಂದಿ ಕೊಳ್ಳುವುದು   ಮಕ್ಕಳಿಗೆ ಕಷ್ಟವಾಗುತ್ತೆ .  ಈ ನಡುವೆ ಪಾಲಕರ ಮತ್ತು ಆಡಳಿತ ವರ್ಗದ ಮೀಟಿಂಗ್ ನಡೆಯುತ್ತದೆ . ಪಾಲಕರು  ಹಳೆಯ ಟೀಚರ್ ಬಗ್ಗೆ  ಪ್ರಶ್ನೆ ಎತ್ತುತ್ತಾರೆ .  ನನ್ನ ಸಹೋದರ ಕಾರಣಗಳನ್ನೂ  ಕೇಳಿ ಹಾಕಿ  ಪ್ರಶ್ನೆಗಳನ್ನು ಇಡುತ್ತಾನೆ . ಸ್ಥಳೀಯ ಆಡಳಿತವು  ಮುಂಬೈ ಮಾತೃ ಸಂಸ್ಥೆಯ ಮೊರೆ ಹೋಗುತ್ತದೆ. . ಇಷ್ಟರಲ್ಲಿ  ಹಳೆ ಟೀಚರ್ ಕೆಲಸಕ್ಕೆ ರಾಜೀನಾಮೆ ಕೊಡುತ್ತಾರೆ .  ನಮ್ಮ ಪಕ್ಕದ ಇನ್ನೊಂದು ಖಾಸಗಿ  ಶಾಲೆಯಲ್ಲಿ  ಸೇರಿಕೊಳ್ಳುತ್ತಾರೆ . ಮುಂಬೈ ಆಡಳಿತಗಾರರಿಗೆ  ಫೋನ್ ಮಾಡಿ ಹೇಳಿದರೂ ಕೇಳುವ ಪರಿಜ್ಞಾನ ಅವರಿಗಿರಲಿಲ್ಲ . "ಶಾಲೆಯನ್ನು ಯಾವ ರೀತಿ  ನಡೆಸಬೇಕೆಂದು ನಮಗೆ ಗೊತ್ತಿದೆ " ಎಂಬ ಉಢಾಪೆ  ಉತ್ತರ ನಮಗೆ ಸಿಗುತ್ತದೆ. ನಾವು ವಿಷಯವನ್ನು ಇನ್ನು ಎಳೆದು ಪ್ರಯೋಜನವಿಲ್ಲ ವೆಂದು  ಸುಮ್ಮನಾಗಿದ್ದೆವು.   

೨೦೧೩ ಮೇ ತಿಂಗಳಲ್ಲಿ  ಸಹೋದರನ ಮನೆಗೆ ಶಾಲೆಯಿಂದ ಒಂದು  ಪತ್ರ ಬರುತ್ತದೆ. "ನಿಮ್ಮ ಮಗನ ಟಿ.ಸಿ. ತೆಗೆದು ಕೊಂಡು ಹೋಗಿ , ನಾವು ಇನ್ನು ಇಲ್ಲಿ  ಮುಂದುವರಿಸಲು ಸಾಧ್ಯವಿಲ್ಲ " . ಈ  ಬಗ್ಗೆ ಮತ್ತೊಮ್ಮೆ ನಾನು ಮತ್ತು  ಸಹೋದರ ನಮ್ಮ  ಜಾತಿ  ಸಂಸ್ಥೆಗೆ ತಿಳಿಯಪಡಿಸುತ್ತೇವೆ . ಮತ್ತೊಮ್ಮೆ ಮುಂಬೈಗೆ ಪತ್ರದ ಮುಖೇನ ತಿಳಿಸುತ್ತೇವೆ. ಅದರ  ನಕಲನ್ನು  ಸ್ಥಳಿಯ ಎರಡು ಜಾತಿ  ಸಂಸ್ಥೆಗೆ ತಿಳಿಸುತ್ತೇವೆ. ಆದರೆ ಮೂರು ಕಡೆಯಿಂದ ಯಾವ ರೀತಿಯ ಉತ್ತರ ಕೂಡ  ಬರುವುದಿಲ್ಲ . ಜೂನ್ ಹೊತ್ತಿಗೆ ಶಾಲೆ ಆರಂಭವಾಗುತ್ತೆ. ನಾನು ಮತ್ತು ಸಹೋದರ ಕಲಿತ ಶಾಲೆಯಿಂದ ನಮಗೆ ಕರೆ ಬರುತ್ತದೆ . " ನಿಮ್ಮ ಮಗುವನ್ನು ನಮ್ಮಲ್ಲಿ ಸೇರಿಸಿ " ಎಂಬ ಪ್ರಾರ್ಥನೆ ನಮ್ಮ ಹಳೆಯ ಪ್ರಾಂಶುಪಾಲರದ್ದು    . ಮಗುವಿನ ಅಮ್ಮನೊಡನೆ ಮಾತಾಡಿ ಹಳೆಯ  ಟೀಚರ್   ಸೇರಿದ   ಶಾಲೆಗೆ ಮಗುವನ್ನು ಸೇರಿಸಲಾಗುತ್ತದೆ. ಮಗು ಈಗ  ಮತ್ತೆ ನಲಿವಿನಿಂದ ಶಾಲೆಗೆ ಹೋಗುತಿದೆ.  

ಜಾತಿ ಪ್ರೀತಿ ಮುಳುವಾಯಿತೋ? ನಮ್ಮ ಅನುಭವ ಕಡಿಮೆಯಾಯಿತೋ ? ಒಂದೇ ದೇವರು , ಒಂದೇ  ಮತ ,  ಒಬ್ಬನೇ ದೇವರು  ಎಂಬ  ಗುರುವಾಣಿಯನ್ನು ಲೆಕ್ಕಿಸದೆ ಜಾತಿಗೆ ಅಂಟಿ ಕೊಂಡದ್ದು ಅಪರಾಧವಾಯಿತೇ?
 ಸ್ವತ: ಕ್ಯಾಥೋಲಿಕ್ ಸಂಚಾಲಿತ ಶಾಲೆಯಲ್ಲಿ ಕಲಿತ ನಮಗೆ ಜಾತಿ ಪ್ರೇಮ ಹುಚ್ಚು ಯಾಕೆ ಬಂತೋ ? ಶಿಕ್ಷಣ ಕ್ಕೆ  ಜಾತಿಯ ಬೇಲಿಯೂ ಬೇಕೇ? ಸ್ವಜಾತಿ ಯ ಶಾಲೆ  ಇಂದು ಬೆಳ್ಳಿ ಹಬ್ಬ ಆಚರಿಸುತಿರುವಾಗ  ನನ್ನ ಜಾತಿ ಭಾಂಧವರು ಅದರಿಂದ ಪಡೆದ ಲಾಭ ಸಮಾಧಾನಕರವೇ? 

ಏನೆಲ್ಲಾ  ಮೂಲಭೂತ  ಪ್ರಶ್ನೆ ಗಳು  ಮನಸ್ಸನ್ನು ರಾಡಿ ಮಾಡಿ ಬಿಟ್ಟಿವೆ.   ಮೂಲಕ್ಕೆ ಅಂಟಿ ಕೊಳ್ಳಲೇ  ಭೂತ ವನ್ನು ಮರೆಯಲೇ .... ?

- ಅಶೋಕ್ ಕುಮಾರ್ ವಳದೂರು(ಅಕುವ) 
05/01/2013