Tuesday, September 16, 2014

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು:ಅಶೋಕ್ ಕುಮಾರ್ ವಳದೂರು

http://www.panjumagazine.com/?p=8552

"ಒಂದೇ ಜಾತಿ, ಒಂದೇ ಧರ್ಮ,ಒಬ್ಬನೇ ದೇವರು" ಎಂದು ಮನುಕುಲ ಕುಟುಂಬಕ್ಕೆ ಸಾರಿ ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದ ಮಹಾನ್ ಸಂತ ಶ್ರೀ ನಾರಾಯಣ ಸ್ವಾಮಿ. "ಯಾರನ್ನೂ ದ್ವೇಷಿಸ ಬೇಡಿ, ಸಂಘಟನೆಯಿಂದ, ಶಿಕ್ಷಣದಿಂದ, ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉನ್ನತಿಯನ್ನು ಸಾಧಿಸೋಣ" ಎಂದು ಒಂದು ಶತಮಾನಗಳ ಹಿಂದೆ ಈ ಜನಕ್ಕೆ ಸಾರಿದ ಗುರು ನಾರಾಯಣರ ಸಂದೇಶವು ವಾಸ್ತವದ ಅರ್ಥವನ್ನು ಪಡೆಯುವುದು ನಾವು ಕಾಣುತ್ತೇವೆ.
ಹದಿನೆಂಟು ಹತ್ತೊಂಭತ್ತನೆಯ ಶತಮಾನಗಳು ಈ ನಾಡಿನಲ್ಲಿ ಐರೋಪ್ಯರು ವಸಾಹತುಗಳನ್ನು ಸ್ಥಾಪಿಸಿ ಭಾರತದ ರಾಜಕೀಯ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಭಾರತೀಯರನ್ನು ಗುಲಾಮರನ್ನಾಗಿಸಿದ ಕರಾಳ ಇತಿಹಾಸವಾಗಿತ್ತು. ಇದು ರಾಜಕೀಯರಂಗದ ಗೋಳಾದರೆ ಸಾಮಾಜಿಕ ಕ್ಷೇತ್ರದ್ದು ಇನ್ನು ನೋವಿನ ಕತೆಯಾಗಿತ್ತು. ಆ ಕಾಲದಲ್ಲಿ ಜಾತಿಯಲ್ಲಿ ಹಿಂದುಳಿದ ವರ್ಗದವರ ಶೋಷಣೆಯೇ ನಡೆದಿತ್ತು. ಕೇರಳದ ಬಹುಸಂಖ್ಯಾತ ಈಳವ (ಬಿಲ್ಲವ) ಜನಾಂಗದವರು ಕೂಡಾ ಅಸ್ಪೃಶ್ಯ ವರ್ಗಕ್ಕೆ ಸೇರಿದ್ದರು. ದೇವಾಲಯದಲ್ಲಿ ಪ್ರವೇಶವಿರಲಿಲ್ಲ. ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿಲ್ಲ, ಮಹಿಳೆಯರು ಕುಪ್ಪಸ್ಸ ತೊಡುವಂತಿರಲಿಲ್ಲ, ಆಭರಣ ಧರಿಸುವಂತೆಯೇ ಇರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಅವಿದ್ಯೆಯಿಂದಾಗಿ ಸಾಮಾಜಿಕವಾಗಿ ಕ್ರೂರ ಶೋಷಣೆಗೆ ಒಳಗಾದ ಈ ಈಳವರಿಗೆ ತಮ್ಮ ದುಃಸ್ಥಿತಿಯ ಅರಿವೂ ಕೂಡಾ ಇರಲಿಲ್ಲ. ಈ ಮೌಢ್ಯತೆಯನ್ನು ಕಂಡ ಸ್ವಾಮಿ ವಿವೇಕಾನಂದರೇ "ಕೇರಳವೊಂದು ಹುಚ್ಚರ ಆಸ್ಪತ್ರೆ " ಎಂಬ ಉದ್ಗಾರ ತೆಗೆದಿದ್ದರು.
೧೮೫೪ನೇ ಯ ಇಸವಿಯ ಕೇರಳದಲ್ಲಿ ಒಣಂ ಹಬ್ಬದ ಮೂರನೆಯ ದಿನ ಹುಣ್ಣಿಮೆಯ ಶುಭ ಸಂದರ್ಭದಂದು ಮಾದನ್ ಆಶಾನ್ ಮತ್ತು ಕುಟ್ಟಿ ದಂಪತಿಯ ಕೊನೆಯ ಪುತ್ರನಾಗಿ ವಿಶ್ವ ಮಾನವತೆಯ ಹರಿಕಾರನೆಂದು ಎಲ್ಲೆಡೆ ಪರಿಗಣಿಸಲ್ಪಟ್ಟ , ದೀನ ದಲಿತರಿಗೆ, ಅಸ್ಪ್ರಶ್ಯರಿಗೆ ಬದುಕಿನ ಹೊಸ ಭರವಸೆಯನ್ನು ಒದಗಿಸಿ ಕೊಟ್ಟು ಶ್ರೀ ನಾರಾಯಣ ಗುರು ಮಹಾನ್ ಸಂತನ ಜನನವಾಯಿತು . ಶ್ರೀ ಗುರುಗಳ ಬಾಲ್ಯದ ಹೆಸರು " ನಾಣು" ಎಂದು.  ಅವರು ತನ್ನ ಅತೀ ಕಿರಿಯ ವಯಸ್ಸಿನಲ್ಲಿಯೇ ಚಟುವಟಿಕೆಯಿಂದ ಕೂಡಿದ್ದು ಸದಾ ಚಿಂತೆಯಲ್ಲಿಯೇ ಮಗ್ನನಾಗಿ ವೈಚಾರಿಕತೆಯ ಆತನಲ್ಲಿ ಮೈಗೂಡಿತ್ತು. ಮನುಕುಲದ ಸಂತಸವೇ ದೇವರಿಗೆ ಪೂಜೆ ಎಂದು ಬಾಲ್ಯದಲ್ಲಿಯೇ ದೇವರಿಗೆ ಇರಿಸಿದ್ದ ಹಣ್ಣು ಹಂಪಲುಗಳನ್ನು ತಿಂದು ತೇಗಿ "ಮನುಷ್ಯನ ಹೊಟ್ಟೆ ತುಂಬಿ ತೃಪ್ತಿಯಾದರೆ ದೇವರು ಸಿಟ್ಟಾಗುತ್ತಾನೇನು? ಅವನಿಗೆ ಅದರಿಂದ ಸಂತೋಷವಾಗುತ್ತದೆ" ಎಂದು ಪಟ ಪಟ ಅನ್ನುತ್ತಿದ್ದನಂತೆ.  ಮೇಲು ಜಾತಿಯವರನ್ನು ಬೇಕೆಂದೇ ಮುಟ್ಟಿ ಬಿಡುತ್ತಿದ್ದ . "ಈಗ ನಿಮ್ಮ ಜಾತಿ ಹೋಗಿ ಬಿಡ್ತಾ ಎಲ್ಲಿ ಕಾಣಿಸೋದಿಲ್ಲ " ಎಂದು ಕೈ ತಟ್ಟಿ ನಗುತ್ತಿದ್ದ. ನಾಣುವಿಗೆ ಚಿಕ್ಕಂದಿನಿಂದಲೇ ಬಡವರು ನೊಂದವರು ಅಂದರೆ ಆತ್ಮೀಯತೆ ಭೌತಿಕ ಸುಖಗಳ ಕಡೆಗೆ ನಿರಾಸಕ್ತಿ.
ಕ್ರಿ.ಶ ೧೮೮೮ ರ ಶಿವರಾತ್ರಿಯ ದಿನದಂದು ಅರವಿ ಪುರಂನಲ್ಲಿ ಮೊತ್ತ ಮೊದಲು ಶಿವಾಲಯವನ್ನು ಸ್ಥಾಪಿಸುವ ಮೂಲಕ ಸ್ಥಾಪಿತ ಹಿತಾಸಕ್ತಿಗಳ ಶೋಷಣೆಯ ವ್ಯವಸ್ಥೆಯ ವಿರುದ್ಧವಾಗಿ ಬಿದ್ದ ಮೊದಲ ಏಟು ನೀಡಿದರು. ಬಾಲ್ಯದಲ್ಲಿ ಶಿಕ್ಷಣ ಕಲಿತು ಸಂಸ್ಕೃತದ ಜ್ಞಾನ ಪಡೆದಿದ್ದರು. ಸಂಸ್ಕೃತ ಶ್ಲೋಕವನ್ನು ಸರಾಗವಾಗಿ ಮರದ ಮೇಲೆ ಕುಳಿತು ಹಾಡುತ್ತಿದ್ದರು. ಇದರಿಂದ ಈತನನ್ನು ಭಕ್ತನೆಂದೇ ಜನರು ಗುರುತಿಸಿದ್ದರು. ಈ ರೀತಿ ಈತನು ಯೋಗಿಯಾಗಿ ಕಾಡು ಮೇಡು ಅಲೆದಾಡುವುದನ್ನು ಕಂಡು ಮನೆಯವರಿಗೆ ವಿಚಿತ್ರವೆನಿಸಿತು. ನಾಣುವಿಗೆ ಮದುವೆ  ಮಾಡಿ ಸಂಸಾರದ ಬಂಧನದಲ್ಲಿರಿಸುವ ಮನೆಯವರ ಪ್ರಯತ್ನ ವ್ಯರ್ಥವಾಯಿತು. ನಾವೆಲ್ಲ ಬೇರೆ ಬೇರೆ ಉದ್ದೇಶಕ್ಕೆ ಹುಟ್ಟಿದ್ದೇವೆ. ನಿಮ್ಮ ದಾರಿ ಬೇರೆ ನನ್ನ ದಾರಿ ಇನ್ನೊಂದು ನಿಮ್ಮ ದಾರಿಯಲ್ಲಿ ಮುನ್ನಡೆಯುವುದರಿಂದ ನಿಮಗೆ ಹಿತವಾಗ ಬಹುದು. ನನ್ನ ದಾರಿಯಲ್ಲಿ ಹೋಗಲು ನನ್ನನ್ನು ದಯಮಾಡಿ ಬಿಟ್ಟು ಬಿಡಿ ಎಂದು ಮನೆಯನ್ನು ಬಿಟ್ಟು ಹೊರನಡೆದಿದ್ದ. ಬ್ರಹ್ಮ ಸತ್ಯದ ಶೋಧಕನಾಗಿ ಸುತ್ತಾಡಿದರು. ಕಾಡಿನಲ್ಲಿ ಗುಹೆಗಳಲ್ಲಿ ನಿರಾತಂಕವಾಗಿ ಜೀವಿಸಿ ಮರುತ್ವ ಮಾಲದಲ್ಲಿ ಧಾನ್ಯ ಮಗ್ನರಾಗಿರುತ್ತಿದ್ದಾಗ ಅವರ ಅಕ್ಕಪಕ್ಕದಲ್ಲಿ ಎರಡು ಚಿರತೆಗಳು ಅಂಗರಕ್ಷಕರಂತೆ ನಿಂತಿದ್ದವು. ಅರವಿಪುರಂನಲ್ಲಿ ದೇವಾಲಯವನ್ನು ಸ್ಥಾಪಿಸಿ ದಲಿತ ಜನಾಂಗಕ್ಕೆ ದೇವಾಲಯವನ್ನು ಪ್ರವೇಶಿಸಿ ಪೂಜೆಗೈಯುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ್ದರು.ಕ್ರಿ.ಶ ೧೯೧೨ ರಲ್ಲಿ ಮಂಗಳೂರಿನಲ್ಲಿ ಒಂದು ದೇವಾಲಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಮತ್ತು  ಶ್ರೀಲಂಕಾದಲ್ಲಿ  ಒಟ್ಟು ೭೯ ದೇವಾಲಯಗಳ ಸ್ಥಾಪನೆಗೆ ಗುರುಗಳು ಕಾರಣರಾದರು.
ಗುರುಗಳು ಸದಾ ಚಲಿಸುತ್ತಾ ಸಮಾಜದ ಎಲ್ಲೆ ಎಲ್ಲೆಯನ್ನೂ , ಕಂದಾಚಾರ , ಮೂಢನಂಬಿಕೆಗಳನ್ನು , ಅವಿಚಾರಗಳನ್ನು ನಿಂತ ಗಳಿಗೆಯಿಂದಲೇ ಟೀಕಿಸಿ ಸರಿಪಡಿಸುತ್ತಿದ್ದರು. ಹಸಿದವರು, ಬಳಲಿದವರು, ದೀನದಲಿತರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ ತುಂಬಿಕೊಂಡಿತ್ತು. ಅವರ ಬೋಧನೆಗಳಲ್ಲಿ ದೇವರು ಒಬ್ಬನೇ ನಮ್ಮ ಆತ್ಮದ ಒಳದನಿಯನ್ನು ನಾವು ಆಲಿಸಬೇಕು. ಇನ್ನೊಬ್ಬರಿಗೆ ಕೆಡುಕಾಗುವ ಅಲ್ಪ ಕಾರ್ಯಕ್ಕೆ ಕೈಹಾಕಬಾರದು. ಹೃದಯಾಂತರಾಳದಿಂದ ದೇವರನ್ನು ಪೊಜಿಸಬೇಕು. ಪರಿಪಕ್ವವಾದ ಮನಸ್ಸು ಬೇಕು. ಔದಾರ್ಯ ಪ್ರೇಮ ಅನುಕಂಪ ಇವು ಜೀವನ ಮೌಲ್ಯಗಳು. ಪ್ರೇಮದ ಸೆಲೆ ಬತ್ತಿದವನು ಕೇವಲ ಯಂತ್ರ ಮಾತ್ರ, ಅವನು ಬದುಕಿದ್ದಾನೆ. ಎನ್ನುವ ಹಾಗಿಲ್ಲ ಎಂಬ ಸಂದೇಶಗಳು ಇಂದಿಗೂ ಹೃದಯದ ಕದಗಳನ್ನು ತಟ್ಟುತ್ತಿರುತ್ತವೆ. ಈ ಜಗತ್ತಿನಲ್ಲಿ ಇರುವುದು ಒಂದೇ ಜಾತಿ ಅದು ಮಾನವ ಜಾತಿ ಎಲ್ಲರ ಎದೆಯಲ್ಲೂ ಬೆಳಗುವ ಜ್ಯೋತಿಯೊಂದಿಗೆ ಅದು ಎಲ್ಲವನ್ನೂ ಗಮನಿಸುತ್ತದೆ. ಅಲ್ಲದಕ್ಕೂ ಸಾಕ್ಷಿಯಾಗಿದೆ ಎಂಬ ಸಂದೇಶವನ್ನು ತನ್ನ ಜೀವನದುದ್ದಕ್ಕೂ ಸಾರಿ ಜನರಲ್ಲಿ ದೀನದಲಿತರಲ್ಲಿ ಬೆಳಕು ಮೂಡಿಸಿದವರು ಶ್ರೀ ನಾರಾಯಣ ಗುರುಗಳು. ಈ ಮಹಾ ಸಂತನ ಭೋಧನೆ ಮಹಾಸಾಗರದಂತೆ ನಾವಿಲ್ಲಿ ಕಾಣುವುದೂ ಕೇವಲ ಹನಿಗಳನ್ನೂ ಮಾತ್ರ. ಅವುಗಳನ್ನು ಅರ್ಥೈಸಿ ಅನುಸ್ಥಾಪಿಸಲು ಪ್ರಯತ್ನಿಸಿದರೆ ಸಾಕು ನಮ್ಮ ಉದ್ಧಾರ ತನ್ನಿಂದ ತಾನೇ ಆಗುತ್ತದೆ. ವ್ಯಕ್ತಿಯ ಉದ್ಧಾರದಿಂದ ಸಮಾಜದ ಉದ್ಧಾರ ಅದರಿಂದ ವಿಶ್ವ ಮಾನವ ಪ್ರಜ್ಞೆ  ಮೂಡುತ್ತದೆ.
"ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷನನ್ನು ನಾನು ಎಲ್ಲೂ ಕಂಡಿಲ್ಲ" ಎಂದು ವಿಶ್ವಕವಿ ರವಿಂದ್ರನಾಥ ಠಾಗೂರರು ಉದ್ಗರಿಸಿದ್ದರು. ಗಾಂಧೀಜಿಯವರು ತಮ್ಮ ಹರಿಜನೋದ್ಧಾರಕ್ಕಾಗಿ ಸ್ಫೂರ್ತಿ ಪಡೆದದ್ದು ನಾರಾಯಣ ಗುರುಗಳಿಂದ. "ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಗಾಂಧೀಜಿಯವರ ಸಾಮಾಜಿಕ ಚಟುವಟಿಕೆಗಳಿಗೂ ಬಹಳಷ್ಟು ಹೋಲಿಕೆ ಇರುವುದನ್ನು ನಾವು ಕಾಣಬಹುದು" ಎಂದು ರೋಮನ್ ರಾಲೆಂಡ್ ಉದ್ಗರಿಸಿದ್ದಾರೆ.
೧೯೨೮ ರ  ಫೆಬ್ರುವರಿಯಲ್ಲಿ ಗುರುಗಳು ತೀವ್ರ ಕಾಯಿಲೆಗೆ ತುತ್ತಾಗಿದ್ದರು. ಯಾವ ರೀತಿಯ ಚಿಕಿತ್ಸೆ ಫಲಕಾರಿಯಾಗಲಿಲ್ಲ.  ೧೯೨೮ ರ ಸೆಪ್ಟೆಂಬರ್ ೨೦ ರಂದು ಸಂಜೆ ನಾಲ್ಕರ ಹೊತ್ತಿಗೆ ಮಹಾಸಮಾಧಿಯನ್ನು ಹೊಂದಿದರು. ಆಗ ಅವರಿಗೆ ೭೨ ವರ್ಷ. ಸಮಾಧಿಯ ಮುಂಚೆ  "ಯೋಗ ವಿಶಿಷ್ಟಂ" ಗ್ರಂಥದ ಶ್ಲೋಕವನ್ನು ಕೇಳುತಿದ್ದು , ಗ್ರಂಥದ  ಮೋಕ್ಷ ಪ್ರಾಪ್ತಿ ಅಧ್ಯಾಯವನ್ನು ತಲುಪುತ್ತಿದ್ದಂತೆ ಗುರುಗಳು ಮೋಕ್ಷವನ್ನು ಹೊಂದಿದ್ದರು. ಅವರ ನಿಧನ ದ ಬಗ್ಗೆ ಕೇರಳದ  ಪತ್ರಿಕೆಯೊಂದು  "ಮುಂದಿನ ತಲೆಮಾರಿನವರು ನಾರಾಯಣ ಗುರುಗಳನ್ನು ದೇವರ ಅವತಾರ ಎಂದು  ಪೂಜಿಸುವರು " ಎಂದು ಬರೆಯಿತು.
ಇಂತಹ ಮಹಾನ್ ಚೇತನವೊಂದನ್ನು ಗುರುವಾಗಿ ಪೂಜಿಸುವುದು ನಮ್ಮೆಲ್ಲರ ಭಾಗ್ಯ. ಅವರು ಕೇವಲ ಈಳವ ಅಥವಾ ಬಿಲ್ಲವ ಜನಾಂಗಕ್ಕೆ ಸೀಮಿತವಾದರೆ ಅವರ ತತ್ವಗಳಿಗೆ ಅನ್ಯಾಯವಾಗುತ್ತದೆ. ಇನ್ನೂ ಮುಖ್ಯವಾಗಿ ಗುರುವನ್ನು ಕೇವಲ ಮೂರ್ತಿ ಮಾಡಿ ಕೇವಲ ಕಲ್ಲಿಗೆ ಪೂಜೆ ಸಲ್ಲದಿರಲಿ, ಅವರ ಸಂದೇಶಗಳನ್ನು ಮೈಗೂಡಿಸಿ ನಮ್ಮಲ್ಲಿ ಅಳವಡಿಸೋಣ. ಸಾಧ್ಯವಾದಷ್ಟು ಅವರು ಹೇಳಿಕೊಟ್ಟ ಶಾಂತಿ ಪಥದಲ್ಲಿ ನಡೆಯೋಣ. ಆ ದಾರಿಯಲ್ಲಿ  ನಡೆದು ಕೃತಾರ್ಥರಾಗಲು ಪ್ರಯತ್ನಿಸೋಣ. ನಾರಾಯಣ ಗುರುಗಳು ಕೇವಲ ಒಂದು  ಜನಾಂಗದ ಗುರುವಲ್ಲ, ಮಾನವ ಜನಾಂಗದ ಗುರು ,ವಿಶ್ವ ಮಾನವ ಗುರು , ಸಾಮಾಜಿಕ ಕ್ರಾಂತಿಯ ಹರಿಕಾರ. 
 !! ಓಂ ಶ್ರೀ ಬ್ರಹ್ಮ ನಾರಾಯಣ ಗುರುವೇ ನಮ: !!

Sunday, July 6, 2014

ಕನ್ನಡ ವೈಭವ

ಕನ್ನಡ ವೈಭವ

ಪುರಾತನ ಶಾಸನಗಳ ಮಳಿಗೆಯಲ್ಲಿ
ವಿನೂತನ ಪರಂಪರೆಯ ನೆಲೆಯಲ್ಲಿ
ಟಿಸಿಲೊಡೆದ ತ್ರಿಪದಿ ಸಾಲುಗಳಲ್ಲಿ
ಕನ್ನಡದ ಅಕ್ಷರಗಳ ಉದಯ
ಹೀಗೆನ್ನ ಕಸ್ತೂರಿ ಕನ್ನಡವು ಉದಯಿಸಿತಣ್ಣ !

ಕವಿರಾಜಮಾರ್ಗದ ಅಲಂಕಾರದಲಿ
ಶಬ್ದಮಣಿಯ ಮಾಣಿಕ್ಯ ಪೋಣಿಸುತ
ವಡ್ಡರಾಧನೆಯ ಗದ್ಯ ರೂಪದಲ್ಲಿ
ರಾಷ್ಟ್ರಕೂಟ ಕದಂಬರ ಬಾದಾಮಿ ಚಾಲುಕ್ಯ
ಹೊಯ್ಸಳರು ಕೊಂಡಾಡಿ ಅಂಬೆಗಾಲಿಕಿತ್ತೆನ್ನ ಕನ್ನಡ !

ಉತ್ತುಂಗಕ್ಕೇರಿದ ಚಂಪೂ ಕಾವ್ಯವನು
ಪಂಪ ಪೊನ್ನ ರನ್ನ ದಿಗ್ಗಜರು ಪಸರಿದರು
ಕುಮಾರವ್ಯಾಸನು ಹಾಡಿದ ಗುದುಗಿನ ಭಾರತ
ಕರ್ಣಾಟಕ ದೇಶಕ್ಕೆ ಸೊಬಗು !

ಭಾಮಿನಿ ಷಟ್ಪದಿಯ ಕಾವ್ಯದ ಇಂಪು
ರಾಘವಾಂಕ ವರ್ಣಿಸಿದ ಹರಿಶ್ಚಂದ್ರನ ನೆಂಪು
ರಗಳೆಯಲ್ಲೇ ನಿರರ್ಗಳ ಕಥೆ ಹೇಳಿದ ಹರಿಹರ
ಲಕ್ಷೀಶನ ಜೈಮಿನಿ ಭಾರತ ವೈಭವ
ಇವೆಲ್ಲಾ ಕೇಳಿದರೆ ಕನ್ನಡದ ಕಿವಿ ಕಂಪು .!

ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ
ಜೀವನವೇ ಕಥೆಯಾಗಿ ಸಾರಿದ ಸರ್ವಜ್ನ
ಬಾಯಿ ಮಾತು ಹಾಡಾದ ವಚನ ವೈಶಿಷ್ಟ್ಯ
ಹಾಡುಗಬ್ಬದ ಬಸವಯುಗ ಶರಣರಿಗಿದೇ ಸೊಗಸು
ಕನ್ನಡಕ್ಕೆ ಆಗ ಇದೆಲ್ಲಾ ಹೊಸತು !

ತಂಬೂರಿ ಕೀರ್ತನೆ ದಾಸರ ಆಚರಣೆ
ಭಕ್ತಿಯ ಮಾರ್ಗ ಇಷ್ಟವೂ ಅವರಿಗೆ
ಉಪನಿಷತ್ತುಗಳೇ ಸೊತ್ತಾಗಿ ಒಟ್ಟಾದ ಸಾಹಿತ್ಯ
ಕನಕನ ರಾಮಧಾನ್ಯ , ಹರಿಭಕ್ತಿ, ಮೋಹನ ತರಂಗಿಣಿ
ನಾಡಿನುದ್ದಕ್ಕೂ ವಿಸ್ತರಿಸಿದುದು ಹೀಗೆ !

ಕುಮಾರವಾಲ್ಮೀಕಿ ರತ್ನಾಕರವರ್ಣಿ ವೈಭವಿವಿಲ್ಲಿ
ಮುದ್ದಣ್ಣ ಮನೋರಮ ಸಾಹಿತ್ಯ ಸಲ್ಲಾಪದಲ್ಲಿ
ಮುಂಗೋಳಿ ಕೂಗಿ ಅದ್ಭುತ ರಾಮಾಯಣ ಹಾಡಿ
ಯಕ್ಷಗಾನ ಸಾಹಿತ್ಯಕ್ಕೆ ನಂದಾದೀಪವಾಗಿ
ಜಾನಪದದೊಳು ಕನ್ನಡ ಬೆಳೆಯಿತೆನ್ನಿ !

ಇಂಗ್ಲೀಷ್ ಗೀತೆಗಳ ಶ್ರೀಯವರು ತಂದರು
ಕಗ್ಗವ ಹಿಡಿದುಕೊಂಡು ಡಿ.ವಿ.ಜಿ ಬಂದರು
ರಾಮಾಯಣದ ನಿಜ ಆನಂದದಲ್ಲಿ ಕುವೆಂಪು ಮಿಂದರು!
ಗರಿ ಬಿಟ್ಟ ಹಾರುಹಕ್ಕಿಯ ಬೇಂದ್ರೆ ನೋಡಿ ಕುಣಿದರು
ಹೀಗೆನ್ನ ಕನ್ನಡದಲಿ ಸಂಭ್ರಮದಿ ನಲಿದರು !

ಚಿಕ್ಕಚಿಕ್ಕ ಕಥೆಗಳ ಹೊಸೆದರು ಶ್ರೀನಿವಾಸ
ಪುರಾಣ ಇತಿಹಾಸಗಳ ಸರಿಬರೆದರು ದೇವುಡು
ಕಟ್ಟುವೆವು ನಾಡೊಂಡ ಸಾರಿದರು ಅಡಿಗ
ಒಟ್ಟೊಟ್ಟಿಗೆ ಬೆಳೆದರು ತರಾಸು ಗೊರೂರು
ಹಿರಿದಾಯಿತನ್ನ ಕನ್ನಡದ ಜಗತ್ತು ಇವರೆಲ್ಲಾ ಸೇರಿ !

ಕಡಲ ತಡಿ ಉದ್ದಕ್ಕೂ ಕಾರಂತರ ಲೋಕ
ಕಾದಂಬರಿಯ ಮೂಕಜ್ಜಿಯ ಕನಸಿನ ಲೋಕ
ಮೈಸೂರು ಮಲ್ಲಿಗೆ ಪಸರಿಸಿದ ಭೂಪ
ದಾಂಪತ್ಯ ಕೆ.ಎಸ್ ನ ಕವನದ ಸ್ವರೂಪ
ಜೀವನ ಎಳೆತಂದರು ಕನ್ನಡಕ್ಕೆ ಎಲ್ಲರೂ !.

ಗೋಕುಲ ನಿರ್ಗಮಿಸುತ ಪುತಿನ ಬಂದರು
ಕಟ್ಟಿಮನಿ ಗೋವಿಂದ ಪೈ ತಾವೆಲ್ಲಾ ಇದ್ದೇವೆ ಎಂದರು
ಕನ್ನಡ ಉಳಿಸಲು ಅನಕೃ ನಾಯಕರು
ನಿರಂಜನ ಅಲನಹಳ್ಳಿ ಮುಗಳಿ ಮೂರ್ತಿ ಕಂಡರು
ದಾಪುಗಾಲಾಕಿತು ಕನ್ನಡ ಎನ್ನಿ !

ನಾಟಕದ ರಂಗ ಪ್ರವೇಶಿದರು ಕಾರ್ನಾಡಧ್ವಯರು
ಕಾದಂಬರಿ ಸಾರಥ್ಯಕ್ಕೆ ಭೈರಪ್ಪ ಸೈ ಎಂದರು
ಲಂಕೇಶ ತೇಜಸ್ವಿ ತೇಜಸ್ಸು ಮೆರೆಯಿತು
ದೇವನೂರ ಕಂಬಾರ ಶ್ರೇಷ್ಠತೆ ಹಿರಿದಾಯಿತು
ಕನ್ನಡ ಜಗದ್ವಿಖ್ಯಾತ ವಾಯಿತು !

ಇನ್ನಿಹರು ಎನಿಸಲಾಗದ ನಕ್ಷತ್ರಮಣಿಗಳು
ಗ್ರಂಥೋಪಗ್ರಂಥಗಳ ಕರ್ತೃಗಳು
ಹಿರಿಯರು ಕಿರಿಯರು ಮನೆಯವರು
ಹೊರನಾಡಿನವರು ಗಡಿನಾಡಿನವರು
ಶ್ರೀಮಂತ ಕನ್ನಡ ಹೃದಯಗಳು
ಸದಾ ಕನ್ನಡವನ್ನೇ ಮಿಡಿಯುವರು... !

- ಅಶೋಕ ಕುಮಾರ್ ವಳದೂರು ( ಅಕುವ)

"ಮುಂಬಯಿ ಮನೆ" ಯಲ್ಲಿ ಇದ್ದು ಬಂದಾಗ

"ಮುಂಬಯಿ ಮನೆ" ಯಲ್ಲಿ ಇದ್ದು ಬಂದಾಗ

    ಡಾ|| ಜಿ. ಡಿ ಜೋಶಿಯವರ ಆಯ್ದು ಪ್ರಬಂಧಗಳ ಸಂಕಲನ "ಮುಂಬಯಿ ಮನೆ" ಯನ್ನು ಓದುತ್ತಾ ಎಲ್ಲೋ ನಾನು ಮುಂಬೈಯ ಗಲ್ಲಿ, ವಾಡ ಪಾವ್ ಸೆಂಟರ್, ಜುಂಕ ಬಾಕರ್ , ಭೇಲ್ ಪುರಿ ರಸಾನುಭವಗಳ ಉಂಡಷ್ಟು ಸಂತೋಷ ಪಟ್ಟೆ. ಒಬ್ಬ ಪ್ರಬಂಧಕಾರನಲ್ಲಿರಬೇಕಾದ ಲೋಕಾನುಭವ, ಸೂಕ್ಸ್ಮ ದೃಷ್ಟಿ, ವಿನೋದ ದೃಷ್ಟಿ ಮತ್ತು ಅಷ್ಟೆ ಲವಲವಿಕೆ ಡಾ|| ಜೋಶಿಯವರ ಬರಹಗಳಲ್ಲಿ ಮೈಗೂಡಿದೆ. ಈ ಸಂಕಲನದಲ್ಲಿರುವ ಹದಿನಾರು ಪ್ರಬಂಧಗಳನ್ನು ಓದುವಾಗ ನಾವೂ ಕೂಡಾ ಅದರಲ್ಲೊಂದು ಪಾತ್ರದಂತೆ  ಸ್ವಂತ ಅನುಭವವನ್ನು ನೆನಪಿಸಿದರೆ ಅತಿಶಯೋಕ್ತಿಯಲ್ಲ. ಒಂದು ಮನೆಯಲ್ಲಿ ನಡೆಯುವ ಪ್ರಸಂಗದಂತೆ ಎಲ್ಲವನ್ನೂ ಕ್ರೋಢಿಕರಿಸಿ ವಾಸ್ತವದ ಬಿಸಿಯನ್ನು ಅಲ್ಲಲ್ಲಿ ಮುಟ್ಟಿಸುತ್ತಾ ತಮ್ಮ ರಸಾನುಭೂತಿಯನ್ನು ನಮ್ಮ ಮುಂದಿಟ್ಟಿದ್ದಾರೆ.

    ಮೊದಲ ಕಥೆ "ಬಿಲ್ಲುಗಳು" ಶೋಕಿಯ ಇಂದಿನ ಹಳ್ಳಿಯಿಂದ ಬಂದ ಯುವ ಜನಾಂಗ ಹಣದ ಹಿಂದೆ ಬಿದ್ದು ಮೌಲ್, ಕಾಫಿ ಶಾಪ್ ಗಳಲ್ಲಿ ದುಂದುವೆಚ್ಚ ಮಾಡುತ್ತಾ ಬಿಲ್ಲುಗಳನ್ನು ಕಂಡು ಪಜೀತಿ ಪಡುತ್ತಾ ಕ್ರೆಡಿಟ್ ವ್ಯವಸ್ಥೆಗೆ ಬಲಿಯಾಗುವುದನ್ನು ನಮ್ಮ ಮುಂದಿಡುತ್ತದೆ. ಬಡವ ಶ್ರೀಮಂತರ ನಡುವಿನ ಕಂದರ ಯಾವ ರೀತಿ ಹೆಚ್ಚಾಗುತ್ತಿದೆ. ವಸಾಹತುಶಾಹಿ ಕಂಪೆನಿಗಳು ಮಾಡುವ ಸುಲಿಗೆ ಮನದಟ್ಟು ಮಾಡುತ್ತವೆ. ರಾಮರಾಯರ ಕುರ್ಚಿ ಮತ್ತು ಟೇಬಲ್ ನಡುವಿನ ಆತ್ಮೀಯತೆಯನ್ನು ಸುಂದರರಾಯರಿಗೆ ಶಿಷ್ಯರು ನೀಡಿದ ಬೆತ್ತದ ಛತ್ರಿಯ ಬೆಲೆಯನ್ನು "ಭಾವನಾತ್ಮಕ ಬೆಲೆ" ಯಲ್ಲಿ ನಾವು ಕಾಣಬಹುದು. ಸಂಗ್ರಹ ಪ್ರವೃತ್ತಿಯ ಮಾನವ ಭಾವನಾತ್ಮಕವಾದ ನೆಲೆಗಟ್ಟಿನಲ್ಲಿ ತನಗೆ ಇಷ್ಟವಾದ ವಸ್ತುವನ್ನು ಜೋಪಾನವಾಗಿ ಕಾಪಡುವ ಪ್ರಸಂಗಗಳು ನಮ್ಮ ಮುಂದೆ ಹಾದು ಹೋಗುತ್ತವೆ.

    ಬುದ್ಧಿವಂತ ಮನುಷ್ಯ ತನ್ನ ಕಾವ್ಯ ಸಾಧನೆಗೆ ಪರೋಕ್ಷ ವಿಧಾನಗಳನ್ನು ಬಳಸುವ ಬಹು ಮುಖಗಳನ್ನು "ಪರೋಕ್ಷ ಸಾಧನಂ" ದಲ್ಲಿ ಹೆಂಡತಿಯಿಂದ ಹಿಡಿದು ನಮ್ಮನ್ನು ನಡೆಸುವ ಸರಕಾರಗಳು ಮಾಡುವ ಕಸರತ್ತುಗಳನ್ನು ಡಾ|| ಜೋಶಿಯವರು ಉದಾಹರಿಸುತ್ತಾರೆ. "ಮೃದಂಗೋ ಮುಖ ಲೇಪನ ಕರೋತಿ ಮಧುರ ಧ್ವನಿಂ" ಸರಿತಪ್ಪುಗಳೆನಿಸದೆ ಪರೋಕ್ಷ ಸಾಧನೆಯ ಗೀಳು ಮಾನವನಿಗೆ ಅಂಟಿಕೊಂಡಿದೆ.

    "ಕ್ಷಮಿಸಿ ಚಿಲ್ಲರೆ ಇಲ್ಲ " ಹರಟೆಯಲ್ಲಿ ವಾಸ್ತವ ಬದುಕಿನ್ನಲ್ಲಿ ಸಾಮಾನ್ಯರು ಚಿಲ್ಲರೆಯಿಂದಾಗಿ ಪಡುವ ಕಷ್ಟ ತೊಂದರೆಗಳನ್ನು ತುಂಬಾ ವಿನೋದವಾಗಿ ಬಿಡಿಸಿಟ್ಟಿದ್ದಾರೆ. ಚಿಲ್ಲರೆ ಅಭಾವ ಪ್ರಸ್ತುತ ಸಮಾಜವನ್ನು ಕಾಡುವ ಒಂದು ನಿತ್ಯದ ಸಮಸ್ಯೆ . ಬಸ್ಸು , ಟ್ಯಾಕ್ಸಿ , ಬೀಡಾ ಅಂಗಡಿ ರೈಲ್ವೆ ಟಿಕೇಟ್ ಸರದಿ , ಹೋಟೆಲ್ ಗಳಲ್ಲಿ ಟಿಪ್ಸ್ ಗಾಗಿ ಚಿಲ್ಲರೆಯನ್ನು ತಡಕಾಡಬೇಕಾಗುತ್ತದೆ. ಒಂದಲ್ಲ ಒಂದು ವಿಧಾನದಿಂದ ಇದು ಜನರ ಹಣವನ್ನು ಉಳಿಸುತ್ತೆ ದೇಶಸೇವೆ ಆಗುತ್ತೆ ಎಂಬ ಆಶೋತ್ತರ ಲೇಖಕರದು.

    ಮುಂಬೈ ಬದುಕಿನ ಆಕರ್ಷಣೆ ತಾತ್ಕಾಲಿಕರು ಮತ್ತು ಬಾಧಕರೆಂಬ ಎರಡು ವರ್ಗವನ್ನು ಮೋಹಗೊಳಿಸಿ ತನ್ನ ಬಾಲದಲ್ಲಿ ಬಂಧಿಯಾಗಿಸುವ ಪ್ರಕ್ರಿಯಯನ್ನು "ಮುಂಬಯಿ ಮೋಹ" ಪ್ರಬಂಧದಲ್ಲಿ ಲೇಖಕರು ವಿವರಿಸುತ್ತಾರೆ. ಊರಿನಿಂದ ಬಂದ ಸಂಗಣ್ಣ ಮಂಗಣ್ಣನಾದ ಕತೆ, ಇಲ್ಲಿ ಗಮನ ಸೆಳೆಯುತ್ತದೆ. ರೋಗಗಳನ್ನು ಮುಚ್ಚಿಟ್ಟುಕೊಂಡು ನಿರೋಗಿಯಾಗಿ ಬದುಕುವ ಮಾನವ ಪ್ರವೃತ್ತಿಯ ತ್ರಿಶಂಕು ಸ್ಥಿತಿಯ ಬಗ್ಗೆ "ರೋಗಗಳನ್ನು ಮುಚ್ಚಿಟ್ಟುಕೊಂಡು ಬೆಳಿಸಿರಿ "  ಬೆಳಕು ಚೆಲ್ಲುತ್ತದೆ , ಆಧುನಿಕತೆಯೊಂದಿಗೆ ಮಾಯವಾಗುವ ಮಾನವೀಯ ಮೌಲ್ಯಗಳು, ಹೆಚ್ಚುತ್ತಿರುವ ನಿರ್ಲಕ್ಷಿತ ಅಪರಾಧಗಳು , ಮನೆಬಾಡಿಗೆ ಕೊಟ್ಟು ಕಿರಿಕಿರಿ ಅನುಭವಿಸುವ ಮಾಲಿಕ , ಸಾಲಕೊಟ್ಟು ಮರುಪಡೆಯಲಾಗದ ಧನಿಕನ ಸಮಸ್ಯೆಗಳು, ದಿನನಿತ್ಯ ಜೀವನದ ಸಣ್ಣ ಕಳ್ಳರು, ಕುರುಡರಿಗೆ ಪರೋಕ್ಷವಾಗಿ ಸಹಾಯಮಡುವ ಸರಕಾರಗಳು. ಅವುಗಳ ನಡುವೆ ಕಾನೂನು ಕತ್ತೆಯಾಗುವ ಪ್ರಸಂಗಗಳನ್ನು ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ "ಏನು ಬಂತಪ್ಪಾ ಕಾಲ" ದಲ್ಲಿ ಚರ್ಚಿಸುತ್ತಾರೆ.

    ಇಂದಿನ ಶಿಕ್ಷಣ ಪದ್ಧತಿಯಲ್ಲಿ ಪಾಲಕರಾದವರು ಸಹಿಸಬೇಕಾದ ತೊಂದರೆ ಆರ್ಥಿಕ , ಸಾಮಾಜಿಕ ಮತ್ತು ಮಾನಸಿಕವಾಗಿ ಎಷ್ಟೆಂಬುದನ್ನು ಕೆ.ಜಿ ಯಿಂದ ಹಿಡಿದು ಉನ್ನತ ಶಿಕ್ಷಣದ ಉದಾಹರಣೆಯೊಂದಿಗೆ ವಿವರಿಸುತ್ತಾರೆ. ಪಾಲಕರು ನೂತನ ಶೋಷಿತ ವರ್ಗಕ್ಕೆ ಸೇರ್ಪಡೆಯಾಗುತ್ತಿರುವ ಎಚ್ಚರಿಕೆಯನ್ನು ಲೇಖಕರು "ಪಾಲಕರ ಗೋಳು" ನಲ್ಲಿ ಮುಂದಿಡುತ್ತಾರೆ.

    ಮುಂಬಯಿಯಲ್ಲಿ ವ್ಯಾಪಾರ ಮಾಡಲು ಅವಕಾಶ ದೊರೆಯುವುದು ಸುಲಭ, ನೌಕರಿ ದೊರೆಯುವುದು ಕಠಿಣ ಸಾಧ್ಯ, ಮನೆ ದೊರೆಯುವುದು ಅಸಾಧ್ಯ ಎಂಬ ಉಕ್ತಿಯೊಂದಿಗೆ ವಾಸಕ್ಕೆ ಯೋಗ್ಯವಾಗ ಮನೆಯನ್ನು ಬಡವ ಶ್ರೀಮಂತ ಮತ್ತು ಮಧ್ಯಮ ವರ್ಗದವರು ಅವರವರ ಅನುಕೂಲ ಅನುಸಾರವಾಗಿ ಪಡೆದುಕೊಳ್ಳುವ ಪರಿಯನ್ನು ಚರ್ಚಿಸಿದ್ದಾರೆ. ಶ್ರೀಮಂತರ ಪಾಶ್ ಮನೆಗಳು, ಮಲಗಲು ಜಾಗವಿರದ ಬಡವರ ಚಾಳ್ ಗಳು, ಸುಧಾರಿಸಿ ಕಷ್ಟಪಡುವ ಮಧ್ಯಮ ವರ್ಗದ ಸಣ್ಣ ಸಣ್ಣ ಪ್ಲ್ಯಾಟ್ ಮತ್ತು ಬಾಡಿಗೆ ಮನೆಗಳು ಈ ಮಧ್ಯೆ ಕಮೀಶನ್ ಎಜೆಂಟ್ ಗಳು ಪಗಡಿ ಮಾಲೀಕರು ಮನಸ್ಸು ದೊಡ್ಡದು ಎಂಬ ಸತ್ಯವನ್ನು ನಮ್ಮೊಂದಿಗೆ ಲೇಖಕರು ಮುಂಬಯಿ ಮನೆಯಲ್ಲಿ ಹಂಚಿದ್ದಾರೆ.

    ಆಧುನಿಕ ಉಪಕರಣಗಳ ಬಳಕೆಯಿಂದ ಸೋಮಾರಿಯಾದ ಮಾನವ ಸಮಯವಿಲ್ಲ ವೆಂಬ ಪೊಳ್ಳು ನೆಪ ಮಾಡಿಕೊಂಡು ಕೆಲಸ ತಪ್ಪಿಸುಕೊಳ್ಳುವ ಬುದ್ಧಿಯನ್ನು ಬೆಳೆಸುತ್ತಿದ್ದಾನೆ ಎಂಬ ಎಚ್ಚರಿಕೆಯನ್ನು ಲೇಖಕರು ಈ ಪ್ರಬಂಧದಲ್ಲಿ ಚರ್ಚಿಸಿದ್ದಾರೆ. ಬಿಟ್ಟಿ ತಿನ್ನುವ ವ್ಯಕ್ತಿಗಳ ಚಪಲದ ಇತಿಹಾಸವನ್ನು "ಪರಾನ್ನ ಭೋಜನ " ಪ್ರಬಂಧದಲ್ಲಿ ವಿನೋದಮಯವಾಗಿ ನಮ್ಮ ಮುಂದಿಟ್ಟಿದ್ದಾರೆ. ಇಲ್ಲಿ ಲೇಖಕರ ವಿನೋದ ಪ್ರಜ್ನೆಯನ್ನು ಗುರುತಿಸಬಹುದು. ಇಂದಿನ ಸಭೆ ಸಮಾರಂಭಗಳ ಕರೆಯೋಲೆಯ ತಳವಾಣಿ ಪ್ರೀತಿ ಭೋಜನದ ವ್ಯವಸ್ಥೆ  ಇದೆ. ನೆನಪಿಸುವುದು ಇಲ್ಲಿ ಸಮಂಜಸ ವಾಗುತ್ತದೆ. ಓಸಿ ಜೀವನವೇ ಲೇಸು ಸರ್ವಜ್ನ್ಯ ಎನ್ನುವವರ ಪುಕ್ಕಟ್ಟೆ ತಿನ್ನುವವರ ಬಾಯಿರುಚಿಯನ್ನು ತಿನ್ನುವುದಕ್ಕಾಗಿ ಮಾಡುವ ಕಸರತ್ತುಗಳನ್ನು ಸ್ವಾರಸ್ಯವಾಗಿ ನಮ್ಮ ಮುಂದಿಡುತ್ತಾರೆ.

    "ಸೆಕೆಂಡ್ ಒಪೀನಿಯನ್" ನ ಅನಿವಾರ್ಯತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಲೇಖಕರು ಲಘುವಾಗಿಯೇ ಲೇವಡಿ ಮಾಡುತ್ತಾ ಒಂದು ಗೀಳಿಸಿ ತರಹ ಈ ಪೃವೃತ್ತಿ ಬೆಳೆಯುವುದನ್ನು ಗಮನಿಸುತ್ತಾರೆ. ಮಾನವ ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿ ಸಾಮರ್ಥ್ಯವನ್ನು ಆತ್ಮ ಸ್ಥೈರ್ಯ ಮತ್ತು ಧೃಡತೆಯನ್ನು ಕಳೆದುಕೊಳ್ಳುತ್ತಿದ್ದಾನೆಂಬುದನ್ನು ಪರೋಕ್ಷವಾಗಿ ತಿಳಿಯಪಡಿಸುತ್ತಾರೆ. ಇಂದು ವ್ಯೆದ್ಯಕೀಯ , ಶೈಕ್ಷಣಿಕ ಸಾಮಾಜಿಕ ಮತ್ತು ವೈಯಕ್ತಿಕ ನಿರ್ಧಾರಗಳನ್ನು ತೆಗೆದು ಕೊಳ್ಳುವುದಕ್ಕೂ ದ್ವಿತೀಯ ಅಭಿಪ್ರಾಯವನ್ನು ಪಡೆಯಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ , ವ್ಯೆದ್ಯರ ತಪಾಸಣೆಯ ರಿಪೋರ್ಟು ಇರಬಹುದು, ಮಕ್ಕಳ ಕಾಲೇಜ್ ಸೇರ್ಪಡೆ , ಮಗಳ ಮದುವೆ ವಿಷಯದಲ್ಲೂ ನಾವು ದ್ವಿತೀಯ ಅಭಿಪ್ರಾಯದ ದಾಸರಾಗಿದ್ದೇವೆ . ಇದು ಇಂದಿನ ಅನಾವಶ್ಯಕ ದಾಸ್ಯ ಎಂದು ಲೇಖಕರು ಬೊಟ್ಟು ಮಾಡುತ್ತಾರೆ.

    ಭಕ್ಷೀಸು ಅಥವ ಖುಷಿ ಕೊಡುವ ಪರಂಪರೆ ರಾಜ ಮಹಾರಾಜರುಗಳ ಕಾಲದಿಂದಲೇ ರೂಢಿಯಲ್ಲಿತ್ತು . ದೀಪಾವಳಿ , ಕ್ರಿಸ್ ಮಸ್, ಹೊಸವರುಷ, ಈದ್ ಗಳ ಸಂದರ್ಭದಲ್ಲಿ ಪೋಸ್ಟ್ ಮ್ಯಾನ್ ಮುನ್ಸಿಪಾಲಿಟಿ , ಕಸಗುಡಿಸುವವ , ಆಫೀಸಿನ ಚಾಕರಿಯವ ಆ ಖುಷಿಗಾಗಿ ಕಾಯುತ್ತಿರುತ್ತಾರೆ. ಗಂಡಾಗುಂಡಿ ಮಾಡಿಯಾದರೂ ಗಡಿಗೆ ತುಪ್ಪ ಕುಡಿಯ ಬೇಕೆನ್ನುವ ಪ್ರಸ್ತುತ ಸಮಾಜದಲ್ಲಿ ಸಾಲ ಮಾಡಿಯಾದರೂ ಅದ್ದೊರಿ ಹಬ್ಬಗಳ ಆಚರಣೆಗೆ ಇಳಿದು ಬಿಟ್ಟಿದ್ದೇವೆ.ಶ್ರೀಮಂತರಿಗೆ ಪುಡಿಕಾಸದ ಆ ಖುಷಿ ಕೊಡುವ ಹಣ ತಿಂಗಳ ಸಂಬಳವನ್ನು ನಂಬಿರುವ ಮಧ್ಯಮ ವರ್ಗದವನಿಗೆ ಹೊರೆ ಅಥಾವ ಕಿರಿಕಿರಿಯಾಗುವುದು ಖುಷಿ ಕೊಡುವ ಪದ್ಧತಿ ಒತ್ತಾಯದ ಮಾಘ ಸ್ನಾನದಂತೆ ಎಂಬ ಅಭಿಪ್ರಾಯವನ್ನು ಲೇಖಕರು ತಾಳುತ್ತಾರೆ.

    ಪಟ್ಟಣದಲ್ಲಿ ಆಳುಗಳ ಕೊರತೆ ಯಾವತ್ತೂ ಇದ್ದೇ ಇದೆ. ಮನೆಕೆಲಸಕ್ಕೆ ವಿಶ್ವಾಸ ಪೂರ್ವಕವಾದ ಆಳುಗಳನ್ನು ಪಡೆಯುವುದು ಕಷ್ಟ ಪಡೆದರೂ ಆಳಿನ ಸಕಲ ಕುಶಲೋಪರಿಗಳ ಬಗ್ಗೆ ಎಚ್ಚರವಹಿಸಬೇಕು. ಆಳುಗಳದ್ದೇ ಯೂನಿಯನ್ ಇರುವ ಈ ಯುಗದಲ್ಲಿ ಆಳಿನ ಹಾವಳಿ ಯಿಂದ ತಪ್ಪಿಸಲು ನಮ್ಮ ಕೆಲಸವನ್ನು ನಾವೇ ಮಾಡಲು ಮುಂದಾಗಬೇಕು. ಊರುಗಳಲ್ಲೇ ಆಳು ಸಿಗದ ಇಂದಿನ ಪರಿಸ್ಥಿತಿಯನ್ನು ಇಲ್ಲಿ ನೆನಪಿಸ ಬಹುದು.

    ಬಾಯಿ ರುಚಿ ಚಪಲಕ್ಕೆ ಅಂಟಿಕೊಂಡ ಮಾನವ ನಾಲಿಗೆಯ ದಾಸನಾಗುವ ಮತ್ತೊಂದು ಪ್ರಸಂಗವನ್ನು ಲೇಖಕರು ಭೇಲ್ ಪುರಿ ಪ್ರಬಂಧದಲ್ಲಿ ವಿಸ್ತಾರವಾಗಿ ವಿವರಿಸುತ್ತಾರೆ. ರಸ್ತೆ ಬದಿಯ ಭೇಲ್ ಪುರಿಗಳು ಮನುಷ್ಯನನ್ನು ನಿಯಂತ್ರಿಸುವ ಬಗೆಯನ್ನು ತಿಳಿಸುತ್ತಾರೆ. ನಾಲಿಗೆಯ ದಾಸನಾದ ಮಾನವ ರುಚಿಯ ಮುಂದೆ ಕುಬ್ಜನಾಗುತ್ತಾನೆ. ಭಿನ್ನಾ ರುಜೇರ್ಹಿ ಲೋಕಃ ಕವಿ ಕಾಳಿದಾಸನ ನೆನಪಾದರೆ ಅತಿಶಯೋಕ್ತಿಯಲ್ಲ.

    ಪುರಾಣದ ದ್ರೊಪದಿಯ ಶ್ರೀಮುಡಿಯಿಂದ ಹಿಡಿದು ಇಂದಿನ ಬಾಬ್ ಕಟ್ ಯುಗದಲ್ಲೂ ಎಲ್ಲರಿಗೂ ಕೂದಲು ಎಂದರೆ ಅಲಂಕಾರಿಕ ಆಸ್ತಿ ಕೇಶಾಲಂಕಾರ ಇಂದು ಉದ್ಯಮವಾಗಿಯೇ ಬೆಳೆದಿದೆ. ಮಾಧ್ಯಮದಲ್ಲಿ ಪ್ರಸರವಾಗುವ ೫೦ ಪ್ರತಿ ಶತಃ ಜಾಹೀರಾತುಗಳು ಕೇಶದ ಬಗ್ಗೆಯೇ ಇರುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ಇಂದಿನ ಮಾಡರ್ನ್ ಅಜ್ಜಿಯಂದಿರಿಗೂ ಕೂದಲು ಸುಂದರವಾಗಿ ಕಾಣ ಬೇಕೆಂಬ ಹಂಬಲ. ಹಿಂದಿನ ಕಾಲದ ಶೃಂಗಾರ ಸಾಧನಗಳು ಮಾಯವಾಗಿ ಆಧುನಿಕ ಸೆಂಟ್ ಪೌಡರ್ , ಕ್ಲಿಪ್ ಮಾಚಿಂಗ್ ಸೆಟ್ , ಟಿಕಲಿಗಳು ಸೌಂದರ್ಯ ವರ್ಧಕಗಳಾಗಿ ಮಾರ್ಪಡಾಗಿವೆ, ಪುರುಷರಲ್ಲಿಯೂ ಕೇಶಾಲಂಕಾರದ ಹುಚ್ಚಿಗೆ ಸಚಿನ್ ನಂತಹ ದಿಗ್ಗಜರು ಗುಂಗುರು ಕೂದಲನ್ನು ನೇರವಾಗಿಸಿದ್ದೆ ಸಾಕ್ಷಿ. ಅಂತು ಕೇಶಾಲಂಕಾರ ಸಮಸ್ಯೆ ಕೂದಲು ಲತೆ ತುಂಬಾ ಇರುವ ತನಕ ತಪ್ಪಿದ್ದಲ್ಲ.

    ಒಟ್ಟು ಹದಿನಾರು ಹರಟೆಗಳ ಮುಂಬಯಿ ಮನೆ ಒಂದೇ ಸಮನೆ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಬರುವ ಎಲ್ಲಾ ಘಟನೆಗಳು ನಮ್ಮ ಸಮಕಾಲೀನ ಜೀವನದಲ್ಲಿ ನಡೆದಂತೆ ಭಾಸವಾಗುವುದು ಡಾ!! ಜೋಶಿಯವರಿಂದ ಕನ್ನಡ ಸಾಹಿತ್ಯಲೋಕ ಇನ್ನೂ ಸಮೃದ್ಧವಾಗಲಿ ಎಂದು ಹಾರೈಸುತ್ತೇನೆ.

ಅಶೋಕ್ ಕುಮಾರ್ ವಳದೂರು (ಅಕುವ)
೧೦/೭/೨೦೧೩.

Saturday, July 5, 2014

ಒಂಟಿ ಕಾಲಿನ ಕಾಗೆ

ಒಂಟಿ ಕಾಲಿನ ಕಾಗೆ 

ಏಕಾಂತ ಭಂಗ ಮಾಡಿ 
ತಪ್ಪಸ್ಸಿಗೆ  ನಿಂತಿದ್ದ ಹಾಗೆ 
ಒಮ್ಮೆಲೇ ತಪದಿಂದ  ಹೊರಗೆ 
ಎಳೆದಂತೆ !

ಪಿತೃಪಕ್ಷದ ಬೆಳಗಿನ ಹೊತ್ತು 
ಇನ್ನೂ ಗೂಡಿನ ಕದ ತೆರೆದಿಲ್ಲ 
ಒಂಟಿಕಾಲಿನಲ್ಲೇ ತಪ ಮಗ್ನ 
ನನ್ನ ಕಾಣುತ್ತಲೇ 
ಪರಿಚಯಿಸಿಕೊಂಡ !

ಏನೋ ಹೇಳಬೇಕಿತ್ತದಕ್ಕೆ 
ಮೌನವನ್ನೇ ಧರಿಸಿದ್ದ!
ಛಲ ಬಿಡದಿ ಸನ್ಯಾಸಿ 
ನನ್ನನ್ನೇ ದಿಟ್ಟಿಸುತ್ತಿದ್ದ !

ಬೆಂಕಿಯ ಉಗುಳು 
ದುಃಖದ ಜ್ವಾಲಾಗ್ನಿಯು !
ಹತ್ತಿರಕ್ಕೆ ಹೋಗಿ ಒಮ್ಮೆ 
ನೇವರಿಸಿದೆ !

ಹೇಳದೆ ಊರು ಬಿಟ್ಟಿದ್ದಕ್ಕೆ 
ಕುಪಿತನಾಗಿದ್ದ!
ಇಂದೂ ಅಲುಗದೆ ಒಂಟಿ ಕಾಲಲಿ 
ನಿಂತಿದ್ದಾನೆ !!

-ಅಕುವ ( ಅಶೋಕ್ ಕುಮಾರ್ ವಳದೂರು )

ಕುರುಂಬಿಲನ ಪಂಚಾಂಗ


ಕುರುಂಬಿಲನ ಪಂಚಾಂಗ


ಶೈಲೇಶ ಅದೆಷ್ಟು ವರ್ಷಗಳ ನಂತರ ಉಡುಪಿಗೆ ಬಂದಿದ್ದ. ಸದ್ಯ ಕಟಪಾಡಿಯಲ್ಲಿರುವ ತನ್ನ ಅಕ್ಕನ ಮನೆಗೆ ಬಂದು ಇಳಿಯುವುದೇ ಸುಲಭವಾಗಿ ಬಿಟ್ಟಿದ್ದೆ. ಅದು ಹೈವೇಗೆ ತಾಗಿ ಕೊಂಡೆ ಇರುವುದು ಕಾರಣ ಕೂಡಾ. ಮುಂಬೈಯಿಂದ ಬಸ್ಸು ಹಿಡಿದರೆ ಮನೆಯ ಅಂಗಳದಲ್ಲೇ ಉಳಿಯುವ ವ್ಯವಸ್ಥೆ ಅದು.ಇತ್ತೀಚೆಗೆ ತಾನು ಹುಟ್ಟಿ ಬೆಳೆದ ಅಜ್ಜನ ಊರು ಹೇರೂರಿನ ಕಡೆ ಹೋಗದೆ ಅನೇಕ ವರ್ಷಗಳೇ ಕಳೆದಿದ್ದವು.ಕಟಪಾಡಿಯಿಂದ ಒಳಮಾರ್ಗ ಶಂಕರಪುರದಿಂದ ಕಾರ್ಕಳ ಕಡೆ ಹೋಗುವ ಬಸ್ಸನ್ನು ಕಂಡಾಗ ಒಮ್ಮೆ ಹೇರೂರಿಗೆ ಹೋಗಿ ಬರುವ ಮನಸ್ಸಾಯಿತು.
ಅಂದು ಶನಿವಾರ. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಬಿಡುವು ಮಾಡಿಕೊಂಡು ಹೇರೂರಿಗೆ ಪ್ರಯಾಣ ಬೆಳೆಸಿದ. ಜೊತೆಯಲ್ಲಿ ಮಗ ಪ್ರಣವನನ್ನು ತನ್ನ ಹುಟ್ಟೂರು ತೋರಿಸಲು ಕರೆತಂದಿದ್ದ.ಹೇರೂರು ಮೂಡುಮನೆಗೆ ಬಂದು ಸೇರಿದಾಗ ಸಂಜೆಯಾಗಿತ್ತು. ಮನೆಯಲ್ಲಿ ಕುರುಂಬಿಲ ಅಜ್ಜನ ಹೆಂಡತಿ ಶಾಂತಜ್ಜಿ ಮತ್ತು ಅವರ ಮೊಮ್ಮಗಳು ಚಿತ್ರ ಮಾತ್ರ ಇದ್ದರು. ಶೈಲೇಶ್ ಮೂಡುಮನೆಗೆ ಬಂದು ಸುಮಾರು ೧೨ ವರ್ಷಗಳೇ ಕಳೆದು ಹೋಗಿದೆ. ಶೈಲೇಶನ ಅಪ್ಪ ನಾರಾಯಣ ಇಲ್ಲಿಯ ಆಸ್ತಿ ಬೇಡವೆಂದು ಮುಂಬೈ ಸೇರಿದ್ದ. ನಂತರ ಹೇರೂರಿನ ಸಂಪರ್ಕ ಅಷ್ಟ ಕಷ್ಟೆ ಇತ್ತು. ಕೇವಲ ಕುರುಂಬಿಲಜ್ಜನ ಪ್ರೀತಿಯಿಂದಾಗಿ ಆವಾಗ ಈವಾಗ ಅಪ್ಪನ ಮಾತುಕತೆ ನಡೆಯುತ್ತಿತ್ತು. ಶೈಲೇಶ ಕೂಡಾ ಅಪ್ಪನ ಮನೆಗೆ ಆಸ್ತಿಗೆ ಆಸೆ ಪಟ್ಟವನಲ್ಲ. ಮಗ ಪ್ರಣವ್ ಮತ್ತು ಚಿತ್ರ ಆಡಲು ಆರಂಭಿಸಿದರು. ಶಾಂತಜ್ಜಿಯಲ್ಲಿ ಕುರುಂಬಿಲಜ್ಜನವರ ಕೊನೆಯ ದಿನಗಳ ಬಗ್ಗೆ ಶೈಲೇಶ್ ಕೇಳಿದ . "ನಿನ್ನಜ್ಜ ಇರೋ ತನಕ ಈ ಮನೆ ವೈಭವದ ಮನೆಯಾಗಿತ್ತು. ಅವರು ಕುಟುಂಬದ ಕೊಂಡಿಯಾಗಿದ್ದರು. ಮನೆದೈವದ ಅರ್ಚಕ ಅಂತಹ ಎಲ್ಲರೂ ಅವರಿಗೆ ಮನ್ನಣೆ ಕೊಡುತ್ತಿದ್ದರು. ಈಗ ಮಾತ್ರ ನಮ್ಮನ್ನು ಯಾರು ಕೇಳುವವರಿಲ್ಲ" ಎಂಬ ಶಾಂತಜ್ಜಿಯ ವಿಷಾದದ ನುಡಿ ಶೈಲೇಶನಿಗೆ ಬೇಸರ ತಂದಿತ್ತು. ಅವರನ್ನು ಸಮಾಧಾನಿಸುತ್ತಾ "ಹಾಗೇನು ಇಲ್ಲ ಈ ಮನೆಯ ಗೌರವ ಇನ್ನೂ ಇದೆ ಮತ್ತೆ ಎಲ್ಲಾ ಒಂದಾಗುತ್ತಾರೆ. ಈ ನೆಲದ ಗುಣ ಹಾಗೆ ಇದೆ, ನೋಡಿ ನಾನ್ಯಾಗೆ ನಿಮ್ಮನ್ನು ಹುಡುಕಿಕೊಂಡು ಬಂದೆ, ಹಾಗೆ ಎಲ್ಲರೂ ಬರುತ್ತಾರೆ" ಶಾಂತಜ್ಜಿಯ ಮುಖ ಅರಳಿತು.
ಶಾಂತಜ್ಜಿ ಚಹಾ ಮಾಡಲು ಅಡುಗೆ ಮನೆಗೆ ಹೋದರು. ಎದ್ದು ಮನೆಯ ಚಾವಡಿಯಲ್ಲಿ ಕಣ್ಣಾಡಿಸಿದಾಗ ಶೈಲೇಶನಿಗೆ ಕೃಷ್ಣ ಪಂಚಾಂಗದ ಕಡೆ ದೃಷ್ಟಿ ಹರಿಯಿತು.ಅದೂ ಕೂಡಾ ಪ್ರಸಕ್ತ ವರ್ಷದ್ದು. ಮೆಲ್ಲನೆ ತಿರುವಿ ಹಾಕಿದ. ಹೊಸ ಪಂಚಾಂಗ ಎಪ್ರಿಲ್ ಸಂಕ್ರಾತಿಯ ನಂತರದ್ದು.ವಿಜಯ ಸಂವತ್ಸರ ಆರಂಭವಾಗಿತ್ತು. ಅಲ್ಲಲ್ಲಿ ಏನೋ ಗುರುತು ಹಾಕಿದ್ದು ಕಾಣಿಸಿದವು. ಶೈಲೇಶನಿಗೆ ಕುತೂಹಲ ಹೆಚ್ಚಾಯಿತು. "ಈಗಲೂ ಇಲ್ಲಿ ಯಾರೂ ಪಂಚಾಗದಲ್ಲಿ ಗುರುತು ಹಾಕುವವರು?" ತನ್ನಲ್ಲಿ ಪ್ರಶ್ನೆ ಕೇಳಿ ಕೊಂಡ ಅಷ್ಟರಲ್ಲೇ ಅಲ್ಲೊಂದು ನೋಟು ಪುಸ್ತಕ ಸಿಕ್ಕಿತ್ತು. ಅದರ ಲೇಬಲ್ ಮೇಲ್ಗಡೆ "ಪ್ರಶಾಂತ್ ಕುಮಾರ್" ಹೆಸರಿತ್ತು. ಹತ್ತನೆ ತರಗತಿಯ ಪಠ್ಯ ಕೂಡಾ ಅಲ್ಲೇ ಇತ್ತು. ಆವಾಗ ಹೊಳೆಯಿತು. ಕುರುಂಬಿಲಜ್ಜನ ಒಬ್ಬನೇ ಮಗ ಶೇಖರನ ಮಗ ಇರಬೇಕು. ಆದರೆ ಆ ಮಗುವಿನ ಹೆಸರು ಶೈಲೇಶನಿಗೆ ನೆನಪಿರಲಿಲ್ಲ. ಆಗ ಡಿಸೆಂಬರ್ ಕ್ರಿಸ್ಮಸ್ ರಜೆ ಆದ್ದರಿಂದ ಬಹುಶಃ ಅವನು ತನ್ನ ಅಜ್ಜಿ (ತಾಯಿಯ ಅಮ್ಮ)ಯ ಮನೆಗೆ ಹೋಗಿರಬೇಕೆಂದು ಶೈಲೇಶ ಕಲ್ಪಿಸಿಕೊಂಡ. ಅಷ್ಟರಲ್ಲಿ ಶಾಂತಜ್ಜಿ "ಬಾ ಮಗ ಚಾ ಕುಡಿ ಅದೆಷ್ಟು  ವರ್ಷವಾಯಿತು,ಈ ಮನೆಯ ನೀರು ಕುಡಿದು" ಎಂದು ಉದ್ಗಾರ  ತೆಗೆದಳು. " ಹೌದು" ಎನ್ನುತ್ತಾ ಶೈಲೇಶ್ ತಲೆ ಅಲ್ಲಾಡಿಸಿದ. ಪಂಚಾಗದ ಕಡೆ ಕೈ ತೋರಿಸಿ "ಈಗಾಲೂ ಈ ಮನೆಯಲ್ಲಿ  ಪಂಚಾಂಗ ಯಾರು ಬರೆಯುತ್ತಾರೆ ?" ಎಂದು ಅಜ್ಜಿಯನ್ನುಕೇಳಿದ."ನನ್ನ ಮೊಮ್ಮಗ ಪ್ರಶಾಂತ" ಎಂದು  ಅಜ್ಜಿ ಸುಮ್ಮನಾದಳು.
" ಶೇಖರಣ್ಣನ ಮಗನೇ.?"."ಹೌದು ಮಗ… "  ಎನ್ನುವಾಗ ಅಜ್ಜಿಯ ಹೃದಯ ಭಾರವಾಗಿತ್ತು.  ಶೇಖರಣ್ಣ ಎಲ್ಲೋ ಘಟ್ಟದ ಮೇಲೆ ಹೋಟೆಲ್ ಇಟ್ಟು ಕೊಂಡಿದ್ದು ನೆನಪಾಯಿತು. ಯಾವುದೋ ರಸ್ತೆ ಅಪಘಾತದಲ್ಲಿ ಹೆಂಡತಿ ಮತ್ತು ಅವರು ತೀರಿಕೊಂಡ ನಂತರ ಮೊಮ್ಮಗನನ್ನು ಇವರೇ ಸಾಕುತ್ತಿದ್ದಾರೆಂದು ಮುಂಬೈಯಲ್ಲಿ ಸಂಬಂಧಿಕರೊಬ್ಬರು ಹೇಳಿದ್ದರು. ಶೇಖರಣ್ಣ ನೆನಪಿಸಿದಕ್ಕೆ  ಶೈಲೇಷ್ ಸಂಕಟ ಪಟ್ಟ.
"ಅಜ್ಜನವರು ಮೊಮ್ಮಗನಿಗೆ  ತಲೆಗೆ ಕೈ ಇಟ್ಟಿದ್ದಾರೆ" ತಮಾಷೆಯಾಗಿ ಶೈಲೇಶ್ ಹೇಳಿದ. ಮುಖದಲ್ಲಿ ಹಸನಾಗುತ್ತಾ ಶಾಂತಜ್ಜಿ "ಹೌದು ಮಗ ಅಜ್ಜನ ಎಲ್ಲಾ ಗುಣಗಳೂ ಬಂದಿವೆ. ಅವನೇ ಪ್ರತಿವರ್ಷ ಪಂಚಾಂಗ ತಂದು ಎಲ್ಲವನ್ನೂ ಗುರುತು ಹಾಕುತ್ತಾನೆ. ಅಜ್ಜನಂತೆ ದನ ಕರು ಹಾಕಿದ ದಿನ, ಊರಿನಲ್ಲಿ ಯಾರಿಗಾದರೂ ಹೆರಿಗೆಯಾದ ದಿನ ಮಗು ಹೆಣ್ಣು ಗಂಡೋ, ಕಂಬಳದ ಗದ್ದೆಗೆ ಬಿತ್ತು ಹಾಕಿದ್ದು, ಮಳೆಗಾಲ ಪ್ರಾರಂಭವಾಗಿ ಗಂಗಾವತರಣವಾದ ದಿನ ಎಲ್ಲಾ ದಿನಗಳನ್ನು ಕರಾರುವಕ್ಕಾಗಿ ಅಜ್ಜನಂತೆ ಪ್ರಶಾಂತ ಕೂಡಾ ತಪ್ಪದೇ ಗುರುತು ಹಾಕಿದ್ದ.
ಹಾಗೇ  ಮಾತಾಡುತಿದ್ದ  ಶೈಲೇಶನಿಗೆ ಅಜ್ಜನ ಪಂಚಾಂಗದಲ್ಲಿ ಸಿಕ್ಕಿದ ಒಂದು ಮಹತ್ತರ ದಿನಾಂಕದ ನೆನಪಾಯಿತು. ಆವಾಗ ಶೈಲೇಶನಿಗೆ ಹದಿನಾರನೇಯ ವರುಷ. ತಂದೆ ಮುಂಬೈಯಿಂದ ಊರಿಗೆ ಬಂದಿದ್ದರು.ಶೈಲೇಶ ಕಾಪುವಿನಲ್ಲಿ ತನ್ನ ಅಜ್ಜಿ (ತಾಯಿಯ ಅಮ್ಮ)ಯ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದ ಸಮಯ. ಅಪ್ಪ ಬಂದರೆ ಅವನ ಪ್ರಯಾಣ ಹೇರೂರಿಗೆ ಬರುತ್ತಿತ್ತು. ಆಗ ರಜಾಕಾಲದ ಸಮಯ. ಮೇ ಮೊದಲ ವಾರದಲ್ಲೇ ಮಳೆಯಾಗಿತ್ತು. ಹೇರೂರಿಗೆ ಬಂದ ಶೈಲೇಶ ಮನೆಯಲ್ಲಿ ಉಳಿಯಬೇಕಾಯಿತು.  ಆವಾಗ ಕುರುಂಬಿಲಜ್ಜನ ಕೋಣೆಯಲ್ಲಿ ಅವರೊಡನೆ ಹರಟೆ ಹೊಡೆಯುತ್ತ ಏನೇನೋ ಕೇಳುತ್ತಿದ್ದ, ಅವನಿಗೆ ಸಮಾಧಾನವಾಗುವ  ಉತ್ತರ ಕುರುಂಬಿಲಜ್ಜ ನೀಡುತ್ತಿದ್ದರು." ಈ ಪಂಚಾಗದಲ್ಲಿ ನೀವೇನೆಲ್ಲಾ ಬರೆಯೂತ್ತೀರಿ ಅಜ್ಜ ?" ಅಂತ ಕೇಳಿದ್ದ. ಅವರು ಒಂದು ಪಂಚಾಂಗ ಅವನ ಕೈಗೆ ಕೊಟ್ಟು ನೀನೇ ಓದಿಕೋ ನಿನಗೆ ತಿಳಿಯುತ್ತೆ ಅಂತ ಕೊಟ್ಟರು.
"ಗುತ್ತುವಿನ ಮನೆಯ ಕಪ್ಪು ದನ ೨ನೇ ಕರು ಹಾಕಿದ್ದು"
"ಹೊಸ ಮನೆಯ ನಾರಾಯಣ ಶೆಟ್ಟಿಗೆ ಮೊದಲು ಹೆಣ್ಣು ಮಗು ಆದದ್ದು "
"ಕಲ್ಲೊಟ್ಟೆಯ ವಾರಿಜ ಗಂಡು ಹೆತ್ತಿದ್ದು."
"ಶೀನನು ಹೊಸ ಕೋಣ ತಂದದ್ದು "
"ತೋಟದ ಮನೆ ಕೊಲ್ಲಕ್ಕ ತೀರಿಕೊಂಡದ್ದು"
ಹೀಗೆ ಓದುತ್ತಾ ಶೈಲೇಶನ ಕುತೂಹಲ ಹೆಚ್ಚಾಯಿತು. ಅವನ ಮನಸ್ಸಿನಲ್ಲಿ ಇನ್ನೊಂದು ವಿಚಾರ ಹೊಳೆಯಿತು. ಹಾಗಾದರೆ ನಾನು ಹುಟ್ಟಿದ ದಿನ ಕೂಡಾ ದಾಖಲಾಗಿರಬೇಕು. ಹುಡುಕಲು ಶುರು ಮಾಡಿದ ಅಂತು ೧೯೭೭ ರ ಪಂಚಾಂಗ ಅವನ ಕೈ ಸಿಕ್ಕಿತು. ತುಂಬಾ ಧೂಳು ಹಿಡಿದಿತ್ತು. ಅವನ ಹತ್ತನೆ ತರಗತಿಯ ಅಂಕ ಪಟ್ಟಿಯ ದಿನಾಂಕದ ಮೇರೆಗೆ ಮೇ ತಿಂಗಳಲ್ಲಿ ಹುಡುಕಿದ. ಯಾವ ದಾಖಲೆಯೂ ಲಭ್ಯವಾಗಲಿಲ್ಲ . ಮುಂದುವರಿಯುತ್ತಾ ಜೂನು ತಿಂಗಳಲ್ಲಿ ಆರನೇ ತಾರೀಕಿಗೆ ಒಂದು ಗುರುತು ಸಿಕ್ಕಿತು. ಪಂಚಾಂಗವನ್ನು ಸ್ಪಷ್ಟ ಬೆಳಕಿಗೆ ಹಿಡಿದು ಓದಿದ.
"ನಾರಾಯಣನಿಗೆ ಗಂಡು ಮಗು, ಉಡುಪಿ ಆಸ್ಪತ್ರೆಯಲ್ಲಿ"  ಶೈಲೇಶನನ್ನು ಜಾನಕಿ ಹೆತ್ತಿದ್ದು ಉಡುಪಿಯ ಅಜ್ಜರ್ ಕಾಡು ಆಸ್ಪತ್ರೆಯಲ್ಲಿ. ಶೈಲೇಶನಿಗೆ ಒಮ್ಮೆಲೇ ತನ್ನ ನಿಜ ಹುಟ್ಟಿದ ದಿನಾಂಕ ಸಿಕ್ಕಿದ್ದಕ್ಕೆ ಸಂತೋಷವಾಯಿತು. ಆದರೆ ಶಾಲೆಯ ದಾಖಲಾತಿಯಲ್ಲಿ ಒಂದು ತಿಂಗಳು ಮುಂಚೆಗೆ ದಿನಾಂಕವನ್ನು ನಮೂದಿಸಿದಕ್ಕೆ ಬೇಸರವು ಒಟ್ಟೊಟ್ಟಿಗೆ ಆಯಿತು. ಒಂದು ಲಿಖಿತ ಪುರಾವೆ ಅವನ ಹುಟ್ಟಿದ ದಿನವನ್ನು ಸಮರ್ಥಿಸುವುದು ಸಂತೋಷ ತಂದಿತ್ತು. ಅಂದಿನಿಂದ ಅದೇ ದಿನವನ್ನು ಹುಟ್ಟಿದ ದಿನವಾಗಿ ಧೃಢ ಮಾಡಿಕೊಂಡ. ಅಂದಿನಿಂದ ಯಾವುದೇ ಕೆಲಸಕ್ಕೆ ಒಳ್ಳೆಯ ದಿನವನ್ನು ನೋಡಬೇಕಾದರೆ ತಂದೆಗೆ ಹೇಳಿಸಿ ಅಜ್ಜಿನಿಂದಲೇ ಕೇಳುತ್ತಿದ್ದ. 
ಪ್ರಶಾಂತನ ಪಂಚಾಂಗದ ಗುರುತುಗಳೂ ಶೈಲೇಶನಲ್ಲಿ ಕುತೂಹಲವನ್ನು ಹುಟ್ಟಿಸಿದವು. ಅಜ್ಜನ ಕಲೆ , ಬುದ್ದಿಮತ್ತೆ ಸಿದ್ಧಿಯಾದದ್ದು ಸಂತೋಷವೆನಿಸಿತು. ಮೂರು ವರ್ಷದ ಹಿಂದಿನ ಪಂಚಾಂಗದಲ್ಲಿ ಕಣ್ಣಾಡಿಸಿದಾಗ "ಕುರುಂಬಿಲಜ್ಜನವರು ತೀರಿಕೊಂಡದ್ದು " ಎಂದು ಎಪ್ರಿಲ್ ೨೦ನೇ ತಾರೀಕಿಗೆ ಗುರುತಾಗಿದ್ದು ಕಂಡುಬಂತು.
****

Sunday, February 9, 2014

ಪ್ರೀತಿ - ಆಸರೆ

ಪ್ರೀತಿ - ಆಸರೆ 

ಮೊಗ್ಗಾಗಿ ತೂಗಿದ ಸಣ್ಣಬಳ್ಳಿ  
ಆಸರೆಯ ಪ್ರೀತಿಯಲಿ ಮರವನ್ನಪ್ಪಿದೆ 
ಹಿಗ್ಗಿಗ್ಗಿ ಏರುತ್ತ ಬಳಸಿದೆ 
ಪ್ರೀತಿಯನು ಹುಡುಕುತ್ತ ಮತ್ತೆ ಆಸ್ವಾದಿಸುತ್ತಾ !

ಕಿರುಬೆರಳ ಅಮ್ಮನ ಕೈಗೆ ಸಿಕ್ಕಿಸಿ 
ಧಾರೆ ಪಡೆದ ವಾತ್ಸಲ್ಯ 
ಹೆಗಲೇರಿ ಬೆನ್ನೇರಿ ಕುದುರೆಯಾಟದ ಅಪ್ಪ 
ಉಪ್ಪು ತಂದ ಕಂದನಾಟದ ಅಣ್ಣ ಅಕ್ಕ !

ಕೇಕೆ ಆಟದ  ಪುಸ್ತಕಗಳ ನಡುವೆ   
ಸಿಕ್ಕಿದ ಕಣ್ಣ ಮುಚ್ಚಾಲೆ ಗೆಳೆಯರ ಬಣ 
ಬಣ್ಣದ ಕನಸುಗಳ ರೆಕ್ಕೆ ಕಟ್ಟಿ ಹಾರುತಿದ್ದ ಕ್ಷಣ 
ಸ್ನೇಹದ ಕಡಲಲ್ಲಿ ಮಿಂದೇಳುವ ಸಣ್ಣಕ್ಕಿ ಬಳಗ 

ಇನ್ನೇನೂ ಓಡಿದ ಹರೆಯ ಹಿಡಿತಕ್ಕೆ ಬಾರದ ವಯಸ್ಸು    
ಹಿರಿಯರು ಸೇರಿ ಸಂಪ್ರದಾಯಕ್ಕೆ ಮಾಡಿದ ಮದುವೆ 
ಮತ್ತೆ ಅಸ್ತಿತ್ವ ಕಳೆದು ಹೊಸ ಪ್ರೀತಿಯ ಹುಡುಕಾಟ 
ಏರು ಲತೆಯು ಆಸರೆಯ ಪಡೆದಂತಹ ಭಾವ !

ಬಳ್ಳಿಗೊಂದು ಹೂವು ಅರಳಿ 
ಕಂದ ನಗುತ ಹರುಷ  ಚಿಮ್ಮಿ 
ಮತ್ತೆ ಮಡಿಲ ಆಸರೆ .... 
ಒಡಲಗೊಂಡಿದೆ ಪ್ರೀತಿ ಆಸರೆ !

- ಅಶೋಕ್ ಕುಮಾರ್ ವಳದೂರು  ( ಅಕುವ)

Tuesday, January 21, 2014

ಸಂಘರ್ಷ

ಸಂಘರ್ಷ 

ಇಂದು ನಿನ್ನೆಗಳದಲ್ಲ ಇದು 
ಹುಟ್ಟು ಸಾವೆಂಬ ಭವ -ಭಯ 
ಮೊಳಕೆಗೆ ಝರಿ ನೀರಲಿ 
ಕೊಳೆಯುವ ಕಳೆಯುವ ಅಂಜಿಕೆ  

ಮೊಣಕಾಲೂರಿ ದೈನನಾಗಿ 
ಪ್ರಪಂಚ ನೋಡಿದಂದಿನಿಂದ 
ಸಾಧನೆಯ ಹುಚ್ಚು ಮೇಲೇರುವ ಕೆಚ್ಚು 
ಅಂದೇ ಶುರುವಾಯಿತು ನೋಡಿ ಸಂಘರ್ಷ !

ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು 
ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು 
ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು 
ಜರ್ಜರಿತ  ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !

ಬೇಸರಾಗಿ  ಬೇಡದ  ಜೀವಕ್ಕೆ  
 ಸಮಾಜ ಕಟ್ಟಿದ್ದ ಸಂಗಾತಿ 
ಹೊಸ ಜೀವ ಹೊಸ ಮೋಡಿ 
ಬೆಂಬಿಡದ ಸಂಸಾರ ಮತ್ತೊಂದು ಸಂಘರ್ಷ !

ಸುಸ್ತಾಗಿ ದುಸ್ತರದಿ ಸುಮ್ಮನಿರಲು 
ಮುತ್ತಿಟ್ಟ ನಿವೃತ್ತಿ ! 
ಬೆಂಬಿಡೆನೆಂದು ಮತ್ತೆ ಹಿಂಬಾಲಿಸಿದೆ 
ಜೀವನವನ್ನು ರೂಪುಗೊಳಿಸಿದ .... 
ಸ್ವರೂಪಗಳ ಬದಲಿಸಿ ನಿಂತ ಅದೇ ಸಂಘರ್ಷ  !!


-  ಅಶೋಕ್ ಕುಮಾರ್ ವಳದೂರು ( ಅಕುವ )