Thursday, June 21, 2012

ನಮ್ಮೂರ ನಾವೇ ಉಳಿಸ ಬೇಕಲ್ವಾ ?


ನಮ್ಮೂರ ನಾವೇ ಉಳಿಸ ಬೇಕಲ್ವಾ ? 

ಉಡುಪಿ ಜಿಲ್ಲೆಯ ಕಾಪು ವ್ಯಾಪ್ತಿಯಲ್ಲಿ ಬರುವ ಪಾದೂರು ಈಗ ಜನಜನಿತ. ಪಾದೂರು ಮಜೂರು ರಸ್ತೆಯಲ್ಲಿ ಇಂದು ಜನರಿಗಿಂತ  ಟಿಪ್ಪರ್ ಗಳ ಓಡಾಟವೇ ಜಾಸ್ತಿಯಾಗಿದೆ. ಅಭಿವೃದ್ಧಿಯ  ಹೆಸರಿನಲ್ಲಿ  ಧೂಳೆಬ್ಬಿಸಿ, ಕೆಸರು ರಟ್ಟಿಸಿ ಓಡುವ ಟಿಪ್ಪರ್ ಗಳ ರೋಷದೆದುರು ನಾಗರಿಕರ ಜೀವನದ ಗತಿ ಕ್ಷಿಣಿಸಿದೆ.ಪಾದೂರು ಸುತ್ತಮುತ್ತಲ ಊರವರಿಗೆ ತಾವು ಎನೋ ಕಳೆದುಕೊಂಡ ಕಳವಳ.ಪಾದೂರಿನ ಗುಡ್ಡೆಯಲ್ಲಿ ಕುಪ್ಪಳಿಸಿದ ಆ ದಿನಗಳು ಇನ್ನು ಕೇವಲ ನೆನಪು ಮಾತ್ರ. ಆ ಅಡ್ಡ ಪಾದೆಯ ಜಾರು ಬಂಡಿಯು ಇನ್ನು ಇತಿಹಾಸ. "ಪೆಚ್ಚು ಗಟ್ಟಿಸುವ ಹುಲಿ ಗುಹೆ " ಮಾಯವಾಗಿದೆ. ಆಶಾಡ (ಆಟಿ ತಿಂಗಳು)ದಲ್ಲಿ ಆ ಬಿರುಸು ಮಳೆಗೆ ಹಸಿರು ಸೊಪ್ಪಿಗಾಗಿ ಜಾತ್ರೆಯಂತೆ ಪಾದೂರಿನ ಗುಡ್ದೆಯಲ್ಲಿ ಸೇರುತ್ತಿದ್ದ ಜನಜಾತ್ರೆ ಯಾವತ್ತೊ ಮಾಯವಾಗಿದೆ. ದನ, ಕೋಣ, ಜಾನುವಾರುಗಳ ಮೇವು  ಹುಲ್ಲಿನ ಆಗಾಧ ಪಾದೂರು ಗುಡ್ದೆ ಅಭಿವೃದ್ಧಿಯ ಕರಡಾತನದಲ್ಲಿ ಬರಡಾಗುತ್ತಿದೆ. ಚಿಕ್ಕಂದಿನಿಂದ ಗುಡ್ಡೆಯ ಸಂದು ಬಿಡದೆ ಓಡಾಡಿದ, ನಲಿದಾಡಿದ,ಕೇಕೆ ಹಾಕಿ ಕುಣಿದ ನಮಗೆ ನಮ್ಮ ಮೌಂಟ್ ಎವರೆಸ್ಟ್ ಆಗಿದ್ದ "ಉಕ್ಕುಡ" ಅತಿ ಎತ್ತರದ ಬಂಡೆಯಾಗಿತ್ತು.ಈ ಉಕ್ಕುಡ ಬಂಡೆಯ ನೆತ್ತಿ ಏರುವುದು ಸಾಹಸದ ಕೆಲಸವೇ ಆಗಿತ್ತು. ಅದರ ತುತ್ತ ತುದಿಯಿಂದ ಪಶ್ಚಿಮಕ್ಕೆ ಕಾಪು ದೀಪ ಸ್ಥಂಬ, ಉತ್ತರಕ್ಕೆ ಶ್ರೀಕ್ಷೇತ್ರ ಕುಂಜಾರು ಗಿರಿಯ ದರ್ಶನವಾಗುತಿತ್ತು.ಮಳೆಯ ನೀರು ರಭಸದಿಂದ ಹರಿದು ನರ್ಸಿಕೆರೆಯೇ ಮಹಾಸಾಗರವಾಗುತಿತ್ತು. ಈಗ ಎಲ್ಲಾ ಮಾಯವಾಗಿದೆ. ನರ್ಸಿಕೆರೆ ಮಣ್ಣು ತುಂಬಿ ಹೇಳಹೆಸರಿಲ್ಲದಂತಾಗಿದೆ. ಕೃಷಿಕಾರ್ಯದಲ್ಲಿ ಸದಾ ಮಗ್ನವಾಗುತ್ತಾ ನೆಮ್ಮದಿಯಿಂದ ಉತ್ತದ್ದನ್ನು ಸಂತೋಷವಾಗಿ ಸಂಭ್ರಮಿಸುತ್ತಿದ್ದ ನನ್ನ ಊರಿನ(ವಳದೂರಿನ) ಜನರಿಗೆ ಪ್ರಾಣಸಂಕಟವಾಗಿ ಮಾರಕವಾಗಿದೆ ಪಾದೂರಿನಲ್ಲಿ ಸ್ಥಾಪನೆಯಾಗುತ್ತಿರುವ ತೈಲ ಸಂಗ್ರಹಣ ಘಟಕ.












 ಇಂಡಿಯನ್ ಸ್ಟ್ರೆಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಸಾರಥ್ಯದಲ್ಲಿ  ಪಾದೂರಿನಲ್ಲಿ ಸ್ಥಾಪನೆಯಾಗುತ್ತಿರುವ ಕೇಂದ್ರ ಸರಕಾರದ ಕ್ರೂಡ್ ಆಯಿಲ್ ಸ್ಟ್ರೆಟೆಜಿಕ್ ಸ್ಟೋರೆಜ್ ಪ್ರೊಜೆಕ್ಟ್ ಮೊದಲೇ ಪಾದೂರು, ಮಜೂರು, ಕಳತ್ತೂರು ,ಮತ್ತು ಕುತ್ಯಾರು ಗ್ರಾಮಗಳ ಜನ ಜೀವನವನ್ನು ಹದೆಗೆಡಿಸಿದೆ.ಈ ಊರಿನ ಜನರು ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ ಎಕರೆಗಟ್ಟಲೆ ಗುಡ್ಡೆಗಳನ್ನು ಸರಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ.ಸರಕಾರದ ಅಭಿವೃದ್ಢಿ ಕಾರ್ಯ ಸುಗಮವಾಗಲೆಂದು ಯಾವುದೇ ತಕರಾರು ಇಲ್ಲದೇ  ಈ ಊರಿನ ಜನರು ಸಹಕರಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.ಈಗ ಇಲ್ಲಿ ಸಮಸ್ಯೆಯಾಗಿ ಕಾಡುತಿರುವುದು ಕಚ್ಚಾತೈಲ ಸಂಗ್ರಹಣೆಗೆ ಕೊರೆಯುತಿರುವ ಬಂಡೆಗಳಿಂದ ಹೊರಬರುತ್ತಿರುವ ಒಡೆದ ಬಂಡೆಗಳ ರಾಶಿ. ಹಿಮಾಲಯ ಪರ್ವತದಂತೆ ರಾಶಿ ರಾಶಿಯಾಗಿ ಕೋಟೆಯಂತೆ ನಿಂತಿದೆ. ಈಗಾಗಲೇ ಧೂಳು,ಮಣ್ಣು,ಹೊಗೆ,ಶಬ್ದದಿಂದ ವಾಸಿಸಲು ಯೋಗ್ಯವಾದ ಪರಿಸರ ಹದೆಗೆಟ್ಟಿದೆ. ವಳದೂರಿನ ಎಲ್ಲಾ ಮನೆಗಳ ಗೋಡೆ ಬಿರುಕು ಬಿಟ್ಟಿವೆ. ಈ ಮಧ್ಯೆಪಿತ್ರಾರ್ಜಿತ ಆಸ್ತಿಯ ಹಣ ಮನೆ ಮನೆ ಸೇರುತ್ತಾ ಊರಿನ ನೈತಿಕ ಆರೋಗ್ಯವು ಕೆಟ್ಟಿದೆ .ತಮ್ಮ ತಮ್ಮ ಪಾಲಿಗಾಗಿ ಮುಂಬೈ, ಬೆಂಗಳೂರು, ದುಬೈಯಿಂದ ಜನರು ಓಡಿ ಬಂದಿದ್ದಾರೆ. ಈ ಮಧ್ಯೆ ಜಾಗದ ರೆಕಾರ್ಡ್ ಸರಿ ಮಾಡಿಸಿ ಕೊಡುವ ಏಜೆಂಟ್ ಗಳ ತಾಪತ್ರೆಯ ಬೇರೆ.ಹಣದ ಆಮಿಷಕ್ಕೆ ಊರಿನ ಕೆಲವು ಜನರು ಮಧ್ಯವರ್ತಿಗಳೂ ಕೂಡಾ ಇದ್ದಾರೆ. ಇದೆಲ್ಲಾ ಅಭಿವೃದ್ಧಿಗೆ  ಅಂಟಿಕೊಂಡಿರುವ ಪಿಡುಗುಗಳು !.





ಇದೀಗ ಪಾದೂರಿನ ಎರಡನೇ ಹಂತದ ಕೊರೆತ ಕಾರ್ಯ ಅಂತಿಮ ಘಟ್ಟದಲ್ಲಿದೆ. ಶೀಘ್ರದಲ್ಲೇ ಮಹಾರಾಶಿಯಾಗಿ  ಬಿದ್ದಿರುವ ಬಂಡೆತುಂಡುಗಳನ್ನು ಜಲ್ಲಿಯಾಗಿ ಪರಿವರ್ತಿಸಿ ವ್ಯಾಪಾರ ಮಾಡಲು ವ್ಯಾಪಾರಿ ಮನೋಭಾವದ ಸ್ಥಳೀಯರು ಮಂಗಳೂರು ಮತ್ತು ಉಡುಪಿ ಸಮೀಪದ ಜಲ್ಲಿಕ್ರಶರ್ ಘಟಕಕ್ಕೆ ಪಾದೂರಿನಲ್ಲಿ ಬಂದು ಕ್ರಶರ್ ಸ್ಥಾಪನೆಗೆ ಅನುವು ಮಾಡಿಕೊಡುತ್ತಿರುವುದು ಆತಂಕದ ಸಂಗತಿ. ಕುತ್ಯಾರು ಮತ್ತು ಕಳತ್ತೂರು ಜನಜಾಗೃತಿ ಸಮಿತಿ ಗ್ರಾಮಗಳ ಜನರನ್ನು ಒಟ್ಟು ಸೇರಿಸಿ ಆಂದೋಲನ ನಡೆಸಿ ತಕ್ಕಮಟ್ಟಿಗೆ ಸ್ಥಗಿತಗೊಂಡಿದ್ದ ಈ ಕ್ರಶರ್ ಗಳು ಈಗ ಸುದ್ದಿ ಇಲ್ಲದೆ ಕಾರ್ಯ ಆರಂಭ ಮಾಡಿದೆ. "ಕಿಂಗ್ಸ್ ಆಂಡ್  ರಿಚ್ " ಎನ್ನುವ ಸುರತ್ಕಲ್ ಮೂಲದ ಕಂಪೆನಿ ಡಿ.ಎಮ್. ಶೆಟ್ಟಿಯವರ ಜಾಗದಲ್ಲಿ ಈಗಾಗಲೇ ಕ್ರಷರ್ ಯುನಿಟ್ ಆರಂಭಿಸಿದೆ.ಇಷ್ಟೊಂದು ಜನವಿರೋಧವಿದ್ದರೂ ಇದು ಹೇಗಾಯಿತು? ಇದಕ್ಕೆ ವಿರೋಧ ವ್ಯಕ್ತಪಡಿಸಿದ  ಜನಪ್ರತಿನಿಧಿಗಳು ಈಗ ಯಾಕೇ ಸುಮ್ಮನಿದ್ದಾರೆ? ಪಾದೂರು ರಕ್ಷಣಾ ಸಮಿತಿ ಯಾಕೆ ಸುಮ್ಮನಾಗಿದೆ? ಇದಕ್ಕೆ ಪೂರಕವಾಗಿ ಪಾದೂರಿನ ವಳದೂರಿನಲ್ಲಿ ಕಮೀಷನ್ ಎಜೆಂಟರಾಗಿ ಊರವರಿಂದ ಗುಪ್ತವಾಗಿ ಒಪ್ಪಿಗೆ ಮತ್ತು ಹಸ್ತಾಕರ ತೆಗೆದು ಕೊಳ್ಳುವ ಷಡ್ಯಂತ್ರಗಳು ನಡೆದಿವೆ. ವಳದೂರಿನಲ್ಲಿ ಕ್ರಶರ್ ಬೇಕು ಎನ್ನುವ ಧನ ಲಲಾಸಿಗಳ ಒಂದು ಬಣ. ನಮಗೆ ಕ್ರಶರ್ ಬೇಡ ಊರು ಉಳಿದರೆ ಸಾಕು ನೆಮ್ಮದಿ ಇದ್ದರೆ ಸಾಕು ಎನ್ನುವ ಯುವಕ ಸಂಘಟನೆ ವಳದೂರು ವೆಲ್ ಫೇರ್ ಎಸೋಸಿಯೇಶನ್ ಇನ್ನೊಂದು ಕಡೆ.ಒಂದು ವ್ಯಂಗ್ಯವೆಂದರೆ ವಳದೂರಿನ ಯುವ ಜನಾಂಗಕ್ಕೆ ಊರು ನಶಿಸಿ ಹೋಗುವುದರ ಬಗ್ಗೆ ಇರುವ ಕಾಳಜಿ ಊರಿನ ಹಿರಿಯರಲ್ಲಿ ಇಲ್ಲದೆ ಇರುವುದು ! ಗುಡ್ಡೆ ಮಾರಿ ಲಕ್ಷಗಟ್ಟಲೆ ಹಣ ಬಂದು ಲಕ್ಷಾಧೀಶರಾಗುವ ಕನಸು ಈ ಹಿರಿಯರಿಗೆ.ಆ ಲಕ್ಷಹಣವನ್ನು ನೆಮ್ಮದಿಯಿಂದ ಉಪಭೋಗಿಸಲು ಸರಿಯಾದ ಪರಿಸರ , ಗಾಳಿ , ನೀರು, ಹಸಿರು ಸಂಪತ್ತು ಬೇಕು ಎಂಬುದು ಈ ಹಿರಿಯರಿಗೆ ತಿಳಿದೇ ಇಲ್ಲವಾ ? ಅಥವ ಬಂದದ್ದು ಬರಲಿ ಬಾಚಿ ಕೊಳ್ಳುವ ಅನ್ನುವ ಯೋಚನೆಯೋ? ಎಂತು ಊರು ಹೋಗುತ್ತೆ  ಹೋಗುದಕ್ಕಿಂತ  ಮುಂಚೆ ಎಲ್ಲಾ ದೋಚುವ ದೂರಾಲೋಚನೆಯೇ? ಹೋಗುವುದಾದರೂ ಎಲ್ಲಿಗೆ ?


 ಯುವಕರಂತೂ ಹೋರಾಟಕ್ಕೆ ಸಿದ್ಧವಾಗಿದ್ದಾರೆ, ಮನೆ ಮನೆಗಳಿಂದ ಪ್ರತಿರೋಧದ ಅರ್ಜಿಗೆ ಸಹಿ ಹಾಕಿಸಿಕೊಂಡು ವಳದೂರಿನ ಯುವ ಸಂಘಟನೆ ಈಗಾಗಲೇ ಕಾರ್ಯಪ್ರರ್ವತವಾಗಿರುವುದು ಒಂದು ಸಂತಸದ ಸಂಗತಿ.ನಮ್ಮ ನೆಲ ನಮ್ಮ ಗುಡ್ಡೆ ಕಬಳಿಸುವವರು ಒಬ್ಬರು, ರಾಜಕಾರಣ ಮಾಡಿ ಹಣ ಹೊಡೆದು ಹೊಡೆದು ಕೊಳ್ಳುವವರು ಇನ್ಯಾರೋ ಇದು ಅವರ ವಿಷಾದ.ಒಂದು ವೇಳೆ ಕ್ರಶರ್ ಪ್ರಾರಂಭವಾದರೆ ಅದರಿಂದ ಹೊರಡುವ ಶಬ್ಧ, ಧೂಳು ಹೇಗೆ ದಿನದ ೨೪ ಗಂಟೆಯು ನಿರಂತರವಾಗಿ ನಮ್ಮೂರಿನೆಲ್ಲೆಡೆ ಹರಡಿ ಅದನ್ನೆಂದು ವಾಸಿಸಲು ಆಯೋಗ್ಯವಾದ ಪ್ರದೇಶವಾಗಿ ಮಾರ್ಪಡಿಸುತ್ತದೆ. ಈಗಾಗಲೇ ಪರ್ವತ ರಾಶಿಯಂತಹ ಕಚ್ಚಾ ತೈಲ ಘಟಕದ ರಾಶಿ ಈ ಮಳೆಯಲ್ಲಂತೂ ಖಂಡಿತ ನೀರಿನೂಡನೆ ಹರಿದು ಬಂದು ಬೇಸಾಯದ ಗದ್ದೆಗಳನ್ನು ಬಂಜರು ಮಾಡುವುದರಲ್ಲಿ ಎರಡು ಮಾತಿಲ್ಲ. ಇದರೊಂದಿಗೆ ಕ್ರಶರ್ ಪ್ರಾರಂಭವಾಗುವುದು ಬೇಡ  ಎಂಬುವುದೇ ಇವರ ವಾದ.







                                        ಚಿತ್ರ ಕೃಪೆ  : ಕಲಾಪ್ರಿಯ ಶಿರ್ವ


ಪಾದೂರು ಗ್ರಾಮ ಪಂಚಾಯಿತಿ ಸದಸ್ಯರು ಕ್ರಶರ್ ನಿಲ್ಲಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ , ಜನ ಜಾಗ್ರತಿ ಮೂಡಿಸದಿರುವುದು ಸಂಶಯಾಸ್ಪದವಾಗಿದೆ. ಈಗಾಗಲೇ ಜನ ಆಂದೋಲನದಲ್ಲಿ ಸಕ್ರಿಯವಾಗಿದ್ದ ಕೆಲವು ಮುಖಂಡರು ನಿಷ್ಕ್ರೀಯವಾಗಿರುವುದು ಸಂಶಯಕ್ಕೆ ಎಡೆಮಾಡಿದೆ. ಹಣದ ಅಮಿಷದ ಗುಸು ಗುಸು ಸುದ್ದಿ ಮನೆ ಮನೆಯನ್ನು ತಲುಪಿದೆ .ವಿರೋಧ ಮಾಡಿದವರಿಗೆ ಪೋನು ಮಾಡಿ ಸುಮ್ಮನಿರುವ ಬೆದರಿಕೆ ಕೂಡಾ ಬಂದಿದೆ. ನಮ್ಮ ಯುವ ಸಂಘಟನೆಯ ಉದ್ದೇಶ ಜೆಲ್ಲಿ ಕ್ರಶರ್ ಬೇಡ. ನಮ್ಮ ಹೋರಾಟ ಊರು ಉಳಿಸುವುದಕ್ಕಾಗಿ. ನಮ್ಮನ್ನು ಈ  ಕರೆಗೆ ಪ್ರಚೋದಿಸಿದ ಕುತ್ಯಾರು ಮತ್ತು ಕಳತ್ತೂರು ಜನಜಾಗೃತಿ ಸಮಿತಿಯವರಿಗೆ ಧನ್ಯವಾದಗಳು. ಪಾದೂರಿನ 1 ಮತ್ತು 2  ನೇ ವಾರ್ಡಿನ ಪ್ರತಿನಿಧಿತ್ವ ಹೊಂದಿರುವ ಮಜೂರು ಗ್ರಾಮಪಂಚಾಯಿತಿಯವರಲ್ಲಿ  ವಳದೂರನ್ನು ಉಳಿಸಿಕೊಡಿ ಎಂದು ವಳದೂರಿನ ಸರ್ವನಾಗರಿಕರ ವಿನಂತಿ.ಇದಕ್ಕೆ ನೀವು ಬದ್ಧರಾಗಿದ್ದೀರೆಂದು ನಮ್ಮ ಅನಿಸಿಕೆ.

-   ಅಶೋಕ್ ಕುಮಾರ್ ವಳದೂರು (ಅಕುವ)