ಸಂಘರ್ಷ
ಇಂದು ನಿನ್ನೆಗಳದಲ್ಲ ಇದು
ಹುಟ್ಟು ಸಾವೆಂಬ ಭವ -ಭಯ
ಮೊಳಕೆಗೆ ಝರಿ ನೀರಲಿ
ಕೊಳೆಯುವ ಕಳೆಯುವ ಅಂಜಿಕೆ
ಮೊಣಕಾಲೂರಿ ದೈನನಾಗಿ
ಪ್ರಪಂಚ ನೋಡಿದಂದಿನಿಂದ
ಸಾಧನೆಯ ಹುಚ್ಚು ಮೇಲೇರುವ ಕೆಚ್ಚು
ಅಂದೇ ಶುರುವಾಯಿತು ನೋಡಿ ಸಂಘರ್ಷ !
ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು
ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು
ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು
ಜರ್ಜರಿತ ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !
ಬೇಸರಾಗಿ ಬೇಡದ ಜೀವಕ್ಕೆ
ಸಮಾಜ ಕಟ್ಟಿದ್ದ ಸಂಗಾತಿ
ಹೊಸ ಜೀವ ಹೊಸ ಮೋಡಿ
ಬೆಂಬಿಡದ ಸಂಸಾರ ಮತ್ತೊಂದು ಸಂಘರ್ಷ !
ಸುಸ್ತಾಗಿ ದುಸ್ತರದಿ ಸುಮ್ಮನಿರಲು
ಮುತ್ತಿಟ್ಟ ನಿವೃತ್ತಿ !
ಬೆಂಬಿಡೆನೆಂದು ಮತ್ತೆ ಹಿಂಬಾಲಿಸಿದೆ
ಜೀವನವನ್ನು ರೂಪುಗೊಳಿಸಿದ ....
ಸ್ವರೂಪಗಳ ಬದಲಿಸಿ ನಿಂತ ಅದೇ ಸಂಘರ್ಷ !!
- ಅಶೋಕ್ ಕುಮಾರ್ ವಳದೂರು ( ಅಕುವ )
No comments:
Post a Comment