ವೃದ್ಧಾಶ್ರಮ
ಎಪ್ಪತ್ತರ ಹರೆಯದ ಮುದಿಕಂಗಳಲ್ಲಿ
ಇನ್ನೂ ಉಳಿದಿದೆ ದೃಷ್ಟಿಯೆಂಬ ಬೆಳಕು
ಆಶ್ರಮದ ಗೇಟು ಬಳಿ ನಿಂದು ದಾರಿ ಕಾಣಲು
ದೂರದೂರಿಂದ ಬರುವ ಮನೆಯ ಅತಿಥಿಗೆ !
ಮೆಲ್ಲಗೆ ಸುರಿದ ಕಣ್ಣೆವೆಯ ಹನಿಗಳು
ಮನದಾಳದ ಮಂಥನದ ಕಲಹವ
ಜತನದಿಂದ ಕಥೆಯಾಗಿ ಬಿತ್ತರಿಸಿದೆ !
ಪರಿವೆಯಿಲ್ಲದೆ ಕಳೆದ ಸಂತಸದ ಕ್ಷಣಗಳು
ಒಲವಿನಲ್ಲಿ ಹಾಡಿದ ನಂಟಿನ ಪದಗಳು
ಚಿಗುರೊಡೆದ ಲಲನೆಯ ಕೂಸುಗಳು
ತ್ಯಾಗ ಸಮರ್ಪಣೆಯ ಉದಯರಾಗಗಳು
ಸಾಲದುದಕ್ಕೆ ಸಾಲದ ಭಾರೀ ಹೊರೆಗಳು !
ಇಂದು ಮಾತಿಲ್ಲ ಎಲ್ಲಾ ಮೌನ ! ಒಳಗೊಳಗೆ ಗೌಣ
ಸುಗ್ಗಿಯ ಹಾಡಿಲ್ಲ , ಹಿಗ್ಗಿನ ಕುಣಿತವಿಲ್ಲ
ಗಾಂಭೀರ್ಯದ ಹೆಜ್ಜೆ ಇಲ್ಲ ಮಾಧುರ್ಯದ ಸ್ವರವಿಲ್ಲ
ಹಚ್ಚಿ ಮಾತಾಡಲು ಅಚ್ಚುಮೆಚ್ಚಿನವರಿಲ್ಲ !
ಅಕ್ಕರೆಯ ನುಡಿಯೊಂದು ಒಪ್ಪೊತ್ತು ಸಾಕೆಂದೆ
ತ್ರಾಣವಿಲ್ಲದ ಮೈಗೆ ಊರುಗೋಲು ಅದೆಂದೆ
ದೂಡಿದರು ದೂರದ ವಾಸಕೆ...ಅಪಹಾಸ್ಯಕೆ
ತಬ್ಬಿ ಮುದ್ದಾಡುವ ಹೃದಯ ಬೇಕೆಂದೆ !
ನಿನ್ನವರ ನೀನೆಂದೂ ಜರೆಯಲಿಲ್ಲ
ಕಾಲವನ್ನೇ ಕೆಟ್ಟದೆಂದೆ...ಕಾಲವೇ ಕೆಟ್ಟಿತ್ತೆಂದೆ!
ಇಂದಾದರೂ ಬರುವನೆಂದು.....
ಕದಡದೆ ನಿಂದೆ ಆಶ್ರಮದ ಬಾಗಿಲೊಳು..........!
- ಅಶೋಕ್ ಕುಮಾರ್ ವಳದೂರು (ಅಕುವ)
No comments:
Post a Comment